ಗುಂಡ್ಲುಪೇಟೆ: ಪಟ್ಟಣ ವ್ಯಾಪ್ತಿಯಲ್ಲಿ ಎಕ್ಸ್ಪ್ರೆಸ್ ಕುಡಿಯುವ ನೀರು ಸರಬರಾಜು ಮಾಡಲು ಪೈಪ್ ಲೈನ್ ಅಳವಡಿಸಲು ತೋಡಿದ್ದ ಸ್ಥಳಗಳನ್ನು ಸಮರ್ಪಕವಾಗಿ ಮುಚ್ಚದ ಹಿನ್ನೆಲೆ ಗುಂಡಿ ನಿರ್ಮಾಣವಾಗಿದ್ದು, ಸಾರ್ವಜನಿಕರು ಹಾಗು ವಾಹನ ಸಂಚಾರಕ್ಕೆ ತೊಂದರೆಯಾಗಿದೆ.
ಪಟ್ಟಣದ ವಿವಿಧ ಬಡಾವಣೆ ಹಾಗೂ ಹಳೇ ಬಸ್ ನಿಲ್ದಾಣದಲ್ಲಿ ಗುಂಡಿ ತೆಗೆದು ನಂತರ ಅವೈಜ್ಞಾನಿಕವಾಗಿ ಮುಚ್ಚಲಾಗಿದೆ. ಇದರಿಂದ ಒಂದೆಡೆ ರಸ್ತೆ ಎತ್ತರವಾಗಿದ್ದರೆ ಮತ್ತೊಂದೆಡೆ ಹಳ್ಳದಿಂದ ಕೂಡಿದೆ. ಇದರ ಪರಿಣಾಮ ಮಳೆ ಬಂದ ಸಂದರ್ಭ ಗುಂಡಿಗಳಲ್ಲಿ ನೀರು ನಿಲ್ಲುತ್ತಿದ್ದು, ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿದೆ. ಬಡಾವಣೆಗಳ ರಸ್ತೆ ಬದಿಯಲ್ಲಿ ತೆಗೆದ ಗುಂಡಿ ಸಮರ್ಪಕವಾಗಿ ಮುಚ್ಚದ ಕಾರಣ ಸ್ಥಳೀಯರ ಓಡಾಟಕ್ಕೆ ತೊಡಕಾಗಿದೆ.
ಯಥಾಸ್ಥಿತಿ ರಸ್ತೆ ನಿರ್ಮಾಣಕ್ಕೆ ಒತ್ತಾಯ: ಗುಂಡಿ ಮುಚ್ಚಲು ಅನೇಕ ಬಾರಿ ಮನವಿ ಸಲ್ಲಿಸಿದರೂ ಪುರಸಭೆ ಅಧಿಕಾರಿಗಳು ಮಾತ್ರ ಚಕಾರ ಎತ್ತುತ್ತಿಲ್ಲ. ಆದ್ದರಿಂದ ಸಂಬಂಧಪಟ್ಟ ಗುತ್ತಿಗೆದಾರರು ಹಳ್ಳ ಮುಚ್ಚಿ, ಕಾಂಕ್ರೀಟ್ ಹಾಗೂ ಡಾಂಬರ್ ಹಾಕುವ ಮೂಲಕ ಯಥಾಸ್ಥಿತಿ ರಸ್ತೆ ನಿರ್ಮಾಣ ಮಾಡಿ ಸಾರ್ವಜನಿಕರ ಸಂಚಾರಕ್ಕೆ ಅವಕಾಶ ಮಾಡಿಕೊಡಬೇಕೆಂದು ಪುರಸಭೆ ಸದಸ್ಯ ಎಚ್.ಆರ್.ರಾಜಗೋಪಾಲ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.