ಗುಂಡ್ಲುಪೇಟೆ: ‘ಬೆಂಡರವಾಡಿ ಗ್ರಾಮದಲ್ಲಿ ಆಗಸ್ಟ್ 17ರಂದು ನಡೆಯುವ ಗೃಹ ಸಚಿವ ಜಿ.ಪರಮೇಶ್ವರ್ ಅಮೃತ ಮಹೋತ್ಸವದಿಂದ ಹೊರಗುಳಿಯುತ್ತೇವೆ’ ಎಂದು ಗ್ರಾಮಸ್ಥರು ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಮಸ್ಥರು, ‘ಆ.17ರಂದು ನಮ್ಮದೇ ಸಮುದಾಯದ ನಾಯಕ ಗೃಹ ಸಚಿವ ಜಿ.ಪರಮೇಶ್ವರ ಅವರ ಅಮೃತ ಮಹೋತ್ಸವದ ಹೆಸರಿನಲ್ಲಿ ನಮ್ಮನ್ನೆಲ್ಲಾ ಬಿಟ್ಟು ಕಾರ್ಯಕ್ರಮ ಆಯೋಜಿಸಲಾಗುತ್ತಿದೆ’ ಎಂದರು. ‘ಸ್ಥಳೀಯ ಸಚಿವರು ಮತ್ತು ಶಾಸಕರನ್ನು ಬಿಟ್ಟು ದತ್ತು ಹೆಸರಿನ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಗ್ರಾಮದ ಅಭಿವೃದ್ಧಿ ಕುಂಠಿತವಾಗಿವೆ. ಸಂಪರ್ಕ ರಸ್ತೆಯಲ್ಲಿ ಗುಂಡಿಗಳು ತುಂಬಿವೆ. ದುಪ್ಪಟ್ಟು ಬಾಡಿಗೆ ಕೊಟ್ಟರೂ ಆಟೋದವರು ಬರುತ್ತಿಲ್ಲ. ಸಮುದಾಯ ಭವನ ನಿರ್ಮಿಸಿಲ್ಲ’ ಎಂದರು. ‘ಐವತ್ತು ಮನೆಗಳು, ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿಕೊಡಲಾಗಿದೆ. 80 ಮಂದಿ ಸರ್ಕಾರಿ ನೌಕರಿಯಲ್ಲಿದ್ದಾರೆ ಎಂದು ಹೇಳುವುದು ಸುಳ್ಳಿನ ಕಂತೆ’ ಎಂದು ಆರೋಪಿಸಿದರು.
‘ಸಚಿವ ಜಿ.ಪರಮೇಶ್ವರ್ ಅವರಂತೆಯೇ ದಲಿತ ಸಮುದಾಯದ ಇಬ್ಬರು ಉನ್ನತಾಧಿಕಾರಿಗಳಾದ ಸುಭಾಷ್ ಭರಣಿ ಮತ್ತು ದಿವಂಗತ ಕೆ.ಶಿವರಾಂ ನಮ್ಮ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ ಎಂದು ತಿಳಿಸಿದ್ದರು. ಆದರೆ ಅಭಿವೃದ್ಧಿ ಮಾತ್ರ ಶೂನ್ಯ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗ್ರಾಮದಲ್ಲಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯವಾಗಿ ಕಾಂಗ್ರೆಸ್ ಶಾಸಕರೇ ಇದ್ದರೂ ಗ್ರಾಮಸ್ಥರನ್ನು ನಿರ್ಲಕ್ಷ್ಯ ಮಾಡಿ ತಾಲ್ಲೂಕಿಗೆ ಆಹ್ವಾನ ಪತ್ರಿಕೆ ಹಂಚಲಾಗುತ್ತಿದೆ. ಈ ರೀತಿ ರಾಜ್ಯ ನಾಯಕರಿಗೆ ಅಗೌರವ ತರುವುದು ಸರಿಯಲ್ಲ’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರು.
‘ಸಮುದಾಯದ ಬಡಜನರಿಗೆ ಕೊಡಬೇಕಾದ ಹಸುಗಳು ಮಧ್ಯವರ್ತಿ ಪಾಲಾಗುತ್ತಿವೆ. ಮಧ್ಯವರ್ತಿಗಳು ಸಾಕಷ್ಟು ಹಣ ದುರುಪಯೋಗ ಮಾಡಿರುವ ಬಗ್ಗೆ ಮಾಹಿತಿ ಇದೆ. ಹೀಗಾಗಿ ಗ್ರಾಮದ ಹೆಸರಿನಲ್ಲಿ ಮುಂದೆ ಇಂಥವುಗಳು ನಡೆಯದಿರಲೆಂದು ಹೊರಗುಳಿಯುತ್ತೇವೆ’ ಎಂದು ತಿಳಿಸಿದರು.
ಗ್ರಾಮದ ಮುಖಂಡರಾದ ಚಿನ್ನಸ್ವಾಮಿ, ಪ್ರಕಾಶ್, ಚಿಕ್ಕಬೆಳ್ಳೆಯ್ಯ, ದೊಡ್ಡರಾಜು, ಕೃಷ್ಣ, ನಾಗರಾಜು, ಗಣೇಶ್, ಮಹೇಶ್, ಮುದ್ದು, ರವಿ, ಚಿಕ್ಕಮಾದಯ್ಯ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.