ADVERTISEMENT

ಗುಂಡ್ಲುಪೇಟೆ| ವಾರ್ಡ್‌ ಅಭಿವೃದ್ಧಿಗೆ ಪಕ್ಷಾತೀತವಾಗಿ ಶ್ರಮಿಸಿ: ಡಿ.ಆರ್.ಪಾಟೀಲ

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 6:51 IST
Last Updated 13 ಜನವರಿ 2026, 6:51 IST
ಗುಂಡ್ಲುಪೇಟೆ ಪುರಸಭಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಮಾತನಾಡಿದರು. ಶಾಸಕ ಎಚ್.ಎಂ.ಗಣೇಶಪ್ರಸಾದ್ ಭಾಗವಹಿಸಿದ್ದರು
ಗುಂಡ್ಲುಪೇಟೆ ಪುರಸಭಾ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಮಾತನಾಡಿದರು. ಶಾಸಕ ಎಚ್.ಎಂ.ಗಣೇಶಪ್ರಸಾದ್ ಭಾಗವಹಿಸಿದ್ದರು   

ಗುಂಡ್ಲುಪೇಟೆ: ‘ವಾರ್ಡ್‍ಗಳ ಅಭಿವೃದ್ಧಿ ಸಂಬಂಧ ಪಕ್ಷಾತೀತವಾಗಿ ಚರ್ಚಿಸಿ ನಿರ್ಣಯ ಕೈಗೊಳ್ಳಿ’ ಎಂದು ರಾಜ್ಯ ವಿಕೇಂದ್ರೀಕರಣ ಯೋಜನೆ ಮತ್ತು ಅಭಿವೃದ್ಧಿ ಸಮಿತಿ ಉಪಾಧ್ಯಕ್ಷ ಡಿ.ಆರ್.ಪಾಟೀಲ ಸಲಹೆ ನೀಡಿದರು.

ಪುರಸಭಾ ಸಭಾಂಗಣದಲ್ಲಿ ನಡೆದ ಪಟ್ಟಣ ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ಕರಡು ಯೋಜನೆ ತಯಾರಿ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ‘ಪುರಸಭಾ ಆಡಳಿತ ಮಂಡಳಿ ಆಸ್ತಿತ್ವದಲ್ಲಿ ಇಲ್ಲದ ಹಿನ್ನೆಲೆ ವಾರ್ಡ್ ಸಮಿತಿ ಪದಾಧಿಕಾರಿಗಳನ್ನು ಒಳಗೊಂಡ ನೆರೆಹೊರೆ ಗುಂಪು, ವಾರ್ಡ್ ಸಮಿತಿಯನ್ನು ಪಕ್ಷಾತೀತವಾಗಿ ಆಯ್ಕೆ ಮಾಡಲಾಗುತ್ತದೆ. ಗುಂಪು ಮತ್ತು ಸಮಿತಿ ತೀರ್ಮಾನದ ಮೇರೆಗೆ ಕೆಲಸ ಮಾಡುವ ಜವಾಬ್ದಾರಿ ಶಾಸಕರಿಗೆ ಮತ್ತು ಅಧಿಕಾರಿಗಳಿಗಿರುತ್ತದೆ’ ಎಂದು ತಿಳಿಸಿದರು.

‘ಜಿಲ್ಲಾಧಿಕಾರಿಗಳ ಆಡಳಿತದಲ್ಲಿ ಕೆಲವು ಸಲಹೆ ಸೂಚನೆಗಳನ್ನ ನೀಡಲಿದ್ದಾರೆ. ಆದ್ದರಿಂದ ಪಕ್ಷಾತೀತ ನಿರ್ಣಯ ಕೈಗೊಳ್ಳುವುದಕ್ಕೆ, ಆದ್ಯತೆ ಪಟ್ಟಿ ಮಾಡುವ ಅವಕಾಶ ನೆರೆಹೊರೆ ಕಮಿಟಿ ಸದಸ್ಯರಿಗೆ ಇರುತ್ತದೆ. ಕಾನೂನಿನ ಆದೇಶದ ಅನ್ವಯ ಕೆಲಸ ಮಾಡಲು ತಾವೆಲ್ಲರೂ ಮುಂದಾಗಬೇಕು. ಚುನಾವಣೆ ಆಗದಿದ್ದಲ್ಲಿ ನಿಮ್ಮ ಮಾತಿಗೆ ಹೆಚ್ಚು ಮನ್ನಣೆ ಇರುತ್ತದೆ’ ಎಂದು ತಿಳಿಸಿದರು.

ADVERTISEMENT

ಶಾಸಕ ಎಚ್.ಎಂ.ಗಣೇಶಪ್ರಸಾದ್ ಮಾತನಾಡಿ, ‘ಪಟ್ಟಣದ ಅಭಿವೃದ್ಧಿ ಮತ್ತು ಯುಜಿಡಿ ಸಂಬಂಧ ₹90 ಕೋಟಿ ವಿಶೇಷ ಅನುದಾನಕ್ಕಾಗಿ ಸಿಎಂಗೆ ಮನವಿ ಮಾಡಲಾಗಿದ್ದು, ಒತ್ತಡ ಹೇರಲಾಗುತ್ತಿದೆ. ಬಜೆಟ್‌ನಲ್ಲಿ ಅನುದಾನ ನೀಡಿದರೆ ಶೇಕಡಾವಾರು ಸಮಸ್ಯೆ ಬಗೆಹರಿಯಲಿದೆ. ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಸಂಬಂಧ ರಸ್ತೆ ಅಗೆಯಲಾಗಿದೆ. ಇದರ ದುರಸ್ತಿ ಅವರ ಜವಾಬ್ದಾರಿಯಾಗಿದೆ’ ಎಂದರು.

‘ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲು ಒಂದೇ ಕಡೆ ಫುಡ್‌ ಜೋನ್ ಮಾಡಲು ನಿರ್ಧರಿಸಲಾಗಿದೆ. ಕಂದಾಯ ವಸೂಲಿ ಸಮರ್ಪಕವಾಗಿ ಮಾಡಿದರೆ ಪಟ್ಟಣ ಇನ್ನಷ್ಟು ಅಭಿವೃದ್ಧಿ ಹೊಂದುತ್ತದೆ. ಇದರ ಬಗ್ಗೆ ಅಧಿಕಾರಿಗಳು ಕ್ರಮ ವಹಿಸಬೇಕು. ಪ್ಲಾಸ್ಟಿಕ್ ಬಳಕೆ ಕಡಿಮೆ ಮಾಡಬೇಕು, ಪ್ಲಾಸ್ಟಿಕ್ ಅನ್ನು ನೆರೆಯ ತಮಿಳುನಾಡು ಮತ್ತು ಕೇರಳದಲ್ಲಿ ಸಂಪೂರ್ಣವಾಗಿ ನಿಷೇಧ ಮಾಡಲಾಗಿದ್ದು, ಕರ್ನಾಟಕ ಸರ್ಕಾರವೂ ಕೂಡ ನಿಷೇಧಕ್ಕೆ ಮುಂದಾಗಿದೆ’ ಎಂದು ತಿಳಿಸಿದರು.

ಪುರಸಭೆ ಮುಖ್ಯಾಧಿಕಾರಿ ಶರವಣ ಮಾತನಾಡಿ, ‘ಪಟ್ಟಣದ ಅಭಿವೃದ್ಧಿ ಕಾಮಗಾರಿಗಳಿಗೆ 2026-27ನೇ ಸಾಲಿಗೆ ಕೇಂದ್ರ ಸರ್ಕಾರದಿಂದ ₹4 ಕೋಟಿ, ರಾಜ್ಯ ಸರ್ಕಾರದಿಂದ ₹13 ಕೋಟಿ, ಪುರಸಭಾ ವ್ಯಾಪ್ತಿಯಲ್ಲಿನ ಯೋಜನೆಯಂತೆ ಗ್ರಂಥಾಲಯಕ್ಕೆ ₹45 ಲಕ್ಷ, ಜಿಮ್ ನಿರ್ಮಾಣಕ್ಕೆ ₹50 ಲಕ್ಷ, ಬಡಾವಣೆಗಳಲ್ಲಿ ಪಾರ್ಕ್ ಅಭಿವೃದ್ಧಿಗೆ ₹4 ಕೋಟಿ, ಮನೆ ನಿರ್ಮಾಣ ₹4 ಕೋಟಿ, ವಂತಿಕೆ ಪಾವತಿಗೆ ₹30 ಲಕ್ಷ, ಟ್ರಾಕ್ಟರ್ ಖರೀದಿಗೆ ₹30 ಲಕ್ಷ, ಹೈಮಾಸ್ಟ್ ಬೀದಿ ದೀಪ ₹40 ಲಕ್ಷ, ಸಾರ್ವಜನಿಕ ಶೌಚಾಲಯ ನಿರ್ಮಾಣಕ್ಕೆ ₹25 ಲಕ್ಷ, ವಲಸೆ ಪ್ರದೇಶ ಅಭಿವೃದ್ಧಿ ₹3 ಲಕ್ಷ, ಪುರಸಭೆ ನೂತನ ಕಟ್ಟಡ ₹2.50 ಕೋಟಿ ಸೇರಿದಂತೆ ಒಟ್ಟು ₹40 ಕೋಟಿ 6 ಲಕ್ಷ ವೆಚ್ಚ ವ್ಯಯಿಸಲು ನಿರ್ಧರಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಪುರಸಭೆ ಮಾಜಿ ಸದಸ್ಯ ಸಿದ್ದಯ್ಯ ಮಾತನಾಡಿ, ‘ಪಟ್ಟಣದ ಅಭಿವೃದ್ಧಿ ಜೊತೆಗೆ ಕೊಳಚೆ ಪ್ರದೇಶ ಅಭಿವೃದ್ಧಿ ಹೆಚ್ಚಿನ ಆದ್ಯತೆ ಕೊಡಬೇಕು’ ಎಂದು ಒತ್ತಾಯಿಸಿದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ ಡಿ.ಆರ್.ಪಾಟೀಲ್, ಸಮಸ್ಯೆ ಬಗೆಹರಿಸಲು ಸಿಎಂ ಮತ್ತು ಶಾಸಕರ ಜೊತೆ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ಮುಸ್ಲಿಂ ಮುಖಂಡ ಅಫ್ಜಲ್ ಶರೀಫ್ ಮಾತನಾಡಿ, ಎನ್.ಎಂ.ಸರಸ್ವತಿ ಮಾತನಾಡಿದರು.

ಯೋಜನಾ ನಿರ್ದೇಶಕಿ ಸುಧಾ, ಪುರಸಭೆ ಮಾಜಿ ಅಧ್ಯಕ್ಷರಾದ ಶಶಿಧರ್ ಪಿ.ದೀಪು, ಜಿ.ಎಸ್.ಮಧುಸೂದನ್, ಭಾಗ್ಯಮ್ಮ, ಮಾಜಿ ಉಪಾಧ್ಯಕ್ಷರಾದ ಶ್ರೀನಿವಾಸ್ ಕಣ್ಣಪ್ಪ, ಅಣ್ಣಯ್ಯಸ್ವಾಮಿ, ಮಾಜಿ ಸದಸ್ಯರಾದ ಎನ್.ಕುಮಾರ್, ಜಿಪಂ ಮಾಜಿ ಸದಸ್ಯ ಕೆರೆಹಳ್ಳಿ ನವೀನ್ ಸೇರಿದಂತೆ ಸಾರ್ವಜನಿಕರು, ಪುರಸಭೆ ಅಧಿಕಾರಿಗಳು ಮತ್ತು ಸಿಬ್ಬಂದಿ ಹಾಜರಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.