ADVERTISEMENT

ದೀಪಾವಳಿ ಜಾತ್ರೆ: ಮಹದೇಶ್ವರ ಬೆಟ್ಟದಲ್ಲಿ ಸಾಂಪ್ರದಾಯಿಕ ಹಾಲರವಿ ಉತ್ಸವ

ಭಕ್ತರ ಅನುಪಸ್ಥಿತಿಯಲ್ಲಿ ಅಮಾವಾಸ್ಯೆ ವಿಶೇಷ ಪೂಜೆ

​ಪ್ರಜಾವಾಣಿ ವಾರ್ತೆ
Published 15 ನವೆಂಬರ್ 2020, 11:49 IST
Last Updated 15 ನವೆಂಬರ್ 2020, 11:49 IST
ಹಾಲರವಿ ಹಳ್ಳದ ನೀರು ತುಂಬಿದ್ದ ಕಳಶ ಹೊತ್ತ 101 ಹೆಣ್ಣುಮಕ್ಕಳು ದೇವಾಲಯಕ್ಕೆ ಪ್ರದಕ್ಷಿಣೆ ಬಂದರು
ಹಾಲರವಿ ಹಳ್ಳದ ನೀರು ತುಂಬಿದ್ದ ಕಳಶ ಹೊತ್ತ 101 ಹೆಣ್ಣುಮಕ್ಕಳು ದೇವಾಲಯಕ್ಕೆ ಪ್ರದಕ್ಷಿಣೆ ಬಂದರು   
""

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರದಲ್ಲಿ ದೀಪಾವಳಿ ಜಾತ್ರೆಯ ಪ್ರಯುಕ್ತ ಭಾನುವಾರ ಹಾಲರವಿ ಉತ್ಸವ ಬೇಡಗಂಪಣ ವಿಧಿ ವಿಧಾನದಲ್ಲಿ ಸಂಪ್ರದಾಯ ಬದ್ಧವಾಗಿನೆರವೇರಿತು.

ಪ್ರತಿ ವರ್ಷ ದೀಪಾವಳಿ ಜಾತ್ರೆಯ ಸಮಯದಲ್ಲಿ ಅಮಾವಾಸ್ಯೆ ದಿನದಂದು ಈ ಉತ್ಸವ ನಡೆಯುತ್ತದೆ. ಯಾವಾಗಲೂ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಬಹಳ ವಿಜೃಂಭಣೆಯಿಂದ ಹಾಲರವಿ ಉತ್ಸವ ನಡೆಯುತ್ತದೆ. ಈ ಬಾರಿ ಕೋವಿಡ್‌ ಕಾರಣದಿಂದ ಭಕ್ತರಿಗೆ ಪ್ರವೇಶ ನಿರ್ಬಂಧ ಇದ್ದುದರಿಂದ ಸ್ಥಳೀಯರ ಉಪಸ್ಥಿತಿಯಲ್ಲಿ ಉತ್ಸವ ನಡೆಯಿತು.

ಸ್ಥಳೀಯ ಬೇಡಗಂಪಣ ಸಮುದಾಯದವರು ಮಾದೇಶ್ವರನಿಗೆ ನಡೆಸುವ ಉತ್ಸವ ಇದು. ಸಮುದಾಯದ 10 ರಿಂದ 12 ವರ್ಷದ 101 ಹೆಣ್ಣು ಮಕ್ಕಳು ಇದರಲ್ಲಿ ಭಾಗಿಯಾಗುತ್ತಾರೆ.

ADVERTISEMENT

ಉತ್ಸವದಲ್ಲಿ ಪಾಲ್ಗೊಳ್ಳುವ ಹೆಣ್ಣು ಮಕ್ಕಳು, ಉಪವಾಸವಿದ್ದು, ಬೆಳ್ಳಂ ಬೆಳಿಗ್ಗೆ ಬೆಟ್ಟದಿಂದ ಸುಮಾರು ಏಳು ಕಿ.ಮೀ ದೂರದಲ್ಲಿರುವ ಹಾಲರವಿ ಬಾವಿಗೆ ತೆರಳಿ ಅಲ್ಲಿ ಸ್ನಾನ ಮಾಡಿ ಹಿತ್ತಾಳೆಯ ಕಳಶದಲ್ಲಿ ಹಾಲರವಿ ಹಳ್ಳದ ನೀರನ್ನು ತುಂಬಿ, ಅದನ್ನು ತಲೆ ಮೇಲೆ ಇರಿಸಿ ಕಳಶಗಳಿಗೆ ಪೂಜೆಯನ್ನು ನೆರವೇರಿಸಲಾಗುತ್ತದೆ. ಬಳಿಕ 101 ಹೆಣ್ಣು ಮಕ್ಕಳು ಕಳಶವನ್ನು ಹೊತ್ತು ಏಳು ಕಿ.ಮೀ ಕಾಲ್ನಡಿಗೆಯಲ್ಲೇ ಸಾಗಿ ಬಂದು ಬೆಟ್ಟದ ಪ್ರವೇಶ ದ್ವಾರ ತಲುಪುತ್ತಾರೆ.

ಅಲ್ಲಿ ಕತ್ತಿ ಪವಾಡ ಸೇವೆಯನ್ನು ನೆರವೇರಿಸಿದ ಬಳಿಕ, ಅಲ್ಲಿಂದ ಮಂಗಳವಾದ್ಯ, ವೀರಹಾಸೆ ಕುಣಿತ, ಛತ್ರಿ ಚಾಮರಗಳೊಂದಿಗೆ ಹೊರಡುವ ಕಳಶಗಳ ಮೆರವಣಿಗೆ ದೇವಾಲಯಕ್ಕೆ ತಲುಪಿ, ಒಳ ಆವರಣದಲ್ಲಿ ಎಲ್ಲ ಕಳಶಗಳನ್ನು ಇರಿಸಿ ಪೂಜೆ ಸಲ್ಲಿಸಲಾಗುತ್ತದೆ. ನಂತರ ಮಹದೇಶ್ವರಸ್ವಾಮಿಗೆ ಆ ಜಲದಿಂದ ಅಭಿಷೇಕ ಮಾಡಲಾಗುತ್ತದೆ.

ಹಾಲರವಿ ಉತ್ಸವದ ಮೆರವಣಿಗೆಯ ನೋಟ

ಕತ್ತಿ ಪವಾಡ: ಪವಾಡ ಪುರುಷ ಮಾದಪ್ಪನ ಕ್ಷೇತ್ರದಲ್ಲಿ ಈಗಲೂ ಕೆಲವು ಪವಾಡಗಳು ಆಚರಣೆಯಲ್ಲಿವೆ. ಅವುಗಳಲ್ಲಿ ಕತ್ತಿ ಪವಾಡವೂ ಒಂದು.

ಹಾಲರವಿಉತ್ಸವಜರಗುವುದಕ್ಕೂ ಮುನ್ನ ಕತ್ತಿ ಪ‍ವಾಡ ನಡೆಯುತ್ತದೆ. ಹರಕೆ ಹೊತ್ತ ಭಕ್ತರೊಬ್ಬರು ಕತ್ತಿಯ ಅಲಗಿನ ಮೇಲೆ ಮಲಗುತ್ತಾರೆ. ಅವರ ಮೇಲೆ ಬೇಡಗಂಪಣ ಅರ್ಚಕರು ನಡೆದುಕೊಂಡು ಹೋಗುತ್ತಾರೆ.

ಏಳು ಕಿ.ಮೀ ದೂರದಿಂದ ನೀರು ತರುವ ಹೆಣ್ಣುಮಕ್ಕಳು ಉಪವಾಸವಿದ್ದು, ಬರಿಗಾಲಲ್ಲಿ ನಡೆದುಕೊಂಡು ಬರುತ್ತಾರೆ. ಮಾರ್ಗ ಮಧ್ಯದಲ್ಲಿ ಯಾವುದೇ ದುಷ್ಟಶಕ್ತಿಗಳಕಣ್ಣುಬಿದ್ದಿದ್ದರೂ ಕತ್ತಿಪವಾಡಮಾಡುವ ಸ್ಥಳದಲ್ಲಿಇವುನಿಲ್ಲುವುದಿಲ್ಲ, ಪವಾಡಮಾಡಿದಸ್ಥಳದಿಂದಹಾಲರವಿಗಂಗೆ ಶುದ್ಧಳಾಗುತ್ತಾಳೆಎಂಬ ನಂಬಿಕೆ ಭಕ್ತರದ್ದು.

ಇಂದು ಜಾತ್ರೆಗೆ ತೆರೆ

ದೀಪಾವಳಿ ಜಾತ್ರೆಗೆ ಸೋಮವಾರ ತೆರೆ ಬೀಳಲಿದೆ. ಪ್ರತಿ ವರ್ಷ ಜಾತ್ರೆಯ ಕೊನೆಯ ದಿನ ಮಹದೇಶ್ವರ ಸ್ವಾಮಿಯ ರಥೋತ್ಸವ ನಡೆಯುತ್ತದೆ. ಕೋವಿಡ್‌ ಕಾರಣದಿಂದ ಈ ಬಾರಿ ರಥೋತ್ಸವ ರದ್ದುಗೊಳಿಸಲಾಗಿದೆ. ರಾತ್ರಿ ನಡೆಯುವ ತೆಪ್ಪೋತ್ಸವದೊಂದಿಗೆ ಜಾತ್ರೆ ಮಹೋತ್ಸವ ಮುಕ್ತಾಯವಾಗುತ್ತದೆ.

ಮಂಗಳವಾರದಿಂದ ಭಕ್ತರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.