ಹನೂರು (ಚಾಮರಾಜನಗರ): ‘ಡಾ.ಬಿ.ಆರ್.ಅಂಬೇಡ್ಕರ್ ಒಬ್ಬರೇ ಸಂವಿಧಾನ ರಚಿಸಿಲ್ಲ ಎಂಬುದು ಸರ್ಕಾರದ ಹೇಳಿಕೆ ಅಥವಾ ನಿಲುವು ಅಲ್ಲ. ಇದರಲ್ಲಿ ನನ್ನ ಪಾತ್ರ ಇಲ್ಲ. ಒಂದು ವೇಳೆ ಇದ್ದರೆ, ಚಾಮರಾಜನಗರದ ವೃತ್ತದಲ್ಲಿ ನನ್ನನ್ನು ನೇಣಿಗೆ ಹಾಕಲಿ’ ಎಂದು ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಮಂಗಳವಾರ ಇಲ್ಲಿ ಹೇಳಿದರು.
ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿರುವವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹಾಗೂ ಸಚಿವ ಸುರೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಚಾಮರಾಜನಗರದಲ್ಲಿ ದಲಿತ, ಪ್ರಗತಿಪರ ಸಂಘಟನೆಗಳು ಮಂಗಳವಾರ ನಡೆಸಿದ ಬೃಹತ್ ಪ್ರತಿಭಟನೆಗೆ ಅವರು ಈ ರೀತಿ ಪ್ರತಿಕ್ರಿಯಿಸಿದರು.
‘ಅಂಬೇಡ್ಕರ್ ಕುರಿತಂತೆ ಉಂಟಾಗಿರುವ ವಿವಾದ ಸರ್ಕಾರ ಹುಟ್ಟುಹಾಕಿದ್ದಲ್ಲ. ಖಾಸಗಿ ಸಂಸ್ಥೆ ಮಾಡಿರುವ ಕೆಲಸ. ಸಂಸ್ಥೆಗೂ ಸರ್ಕಾರಕ್ಕೂ ಸಂಬಂಧ ಇಲ್ಲ. ಶಿಕ್ಷಣ ಇಲಾಖೆ, ಪ್ರಧಾನ ಕಾರ್ಯದರ್ಶಿ, ಆಯುಕ್ತರ ಪಾತ್ರವೂ ಇಲ್ಲ’ ಎಂದು ಅವರು ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.
‘ಅಂಬೇಡ್ಕರ್, ಅವರ ಕೊಡುಗೆ ಹಾಗೂ ಸಂವಿಧಾನ ರಚನೆಯಲ್ಲಿ ಅವರ ಪಾತ್ರದ ಬಗ್ಗೆ ನಮಗೆ ಅತ್ಯಂತ ಹೆಮ್ಮೆ, ಗೌರವವೂ ಇದೆ’ ಎಂದು ಹೇಳಿದರು.
‘ಈ ವಿವಾದ ಉಂಟಾದ ನಂತರದ ಬೆಳವಣಿಗೆಗಳನ್ನು ಪ್ರಗತಿಪರ ಸಂಘಟನೆಗಳು ಪೂರ್ವಗ್ರಹಪೀಡಿತರಾಗದೆ ಗಮನಿಸಬೇಕು. ಖಾಸಗಿ ಸಂಸ್ಥೆ ನೀಡಿದ ಕೈಪಿಡಿಯನ್ನು ಇಲಾಖೆ ಸಿಬ್ಬಂದಿ ಆಯುಕ್ತರ ಗಮನಕ್ಕೆ ತರದೆ ಆನ್ಲೈನ್ನಲ್ಲಿ ಅಪ್ಲೋಡ್ ಮಾಡಿದ್ದಾರೆ. ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಸಂಸ್ಥೆಯನ್ನು ಕಪ್ಪುಪಟ್ಟಿಗೆ ಸೇರಿಸಲಾಗಿದೆ’ ಎಂದು ಸ್ಪಷ್ಟಪಡಿಸಿದರು.
‘ಪ್ರತಿಭಟನೆ ನಡೆಸುವ ಹಕ್ಕು ಅವರಿಗೆ ಇದೆ. ಅದನ್ನು ಚಲಾಯಿಸಿದ್ದಾರೆ. ಸಂಸದ ವಿ.ಶ್ರೀನಿವಾಸ ಪ್ರಸಾದ್, ಶಾಸಕ ಎನ್.ಮಹೇಶ್ ವಿರುದ್ಧ ಧಿಕ್ಕಾರ ಕೂಗಿರುವುದನ್ನು ನೋಡಿದರೆ, ಇದರ ಹಿಂದೆ ರಾಜಕೀಯ ಹುನ್ನಾರ ಇರುವ ಶಂಕೆಯೂ ವ್ಯಕ್ತವಾಗುತ್ತಿದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.