ಹನೂರು: ತಾಲ್ಲೂಕಿನ ಮಾರ್ಟಳ್ಳಿ ಹಾಗೂ ಮಹದೇಶ್ವರ ಬೆಟ್ಟದಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಬೆಳಿಗ್ಗೆ ಉತ್ತಮ ಮಳೆಯಾಗಿದ್ದು ಕೆರೆಗಳು ಹಾಗೂ ಶಾಲಾ ಮೈದಾನಗಳು ಮಳೆ ನೀರಿನಿಂದ ಆವೃತವಾಗಿವೆ.
ಮಾರ್ಟಳ್ಳಿಯಲ್ಲಿ 0.18 ಸೆ.ಮೀ, ವಡ್ಡರದೊಡ್ಡಿ 1.86 ಸೆ.ಮೀ ಹಾಗೂ ಸಂದನಪಾಳ್ಯದಲ್ಲಿ 0.13 ಸೆ.ಮೀ ಮಳೆಯಾಗಿದ್ದು, ಗ್ರಾಮಗಳಲ್ಲಿ ರಸ್ತೆ, ಚರಂಡಿಗಳು, ಶಾಲಾ ಮೈದಾನಗಳು ಮಳೆ ನೀರಿನಿಂದ ಆವೃತವಾದವು. ಬುಧವಾರ ಬೆಳಿಗ್ಗೆಯೂ ವರ್ಷಧಾರೆಯಾಗಿದ್ದು, ಜನರು ದಿನನಿತ್ಯದ ಕೆಲಸ ಕಾರ್ಯಗಳಿಗೆ ಹೋಗಲು ಪರದಾಡುವಂತಾಯಿತು.
ಕೌದಳ್ಳಿ, ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬೆಳಿಗ್ಗೆ ಉತ್ತಮ ಮಳೆಯಾಗಿದೆ. ತುಳಸಿಕೆರೆ, ಇಂಡಿಗನತ್ತ, ನಾಗಮಲೆ, ಪಡಸಲನಾಥ ಸೇರಿದಂತೆ ಕಾಡಂಚಿನ ಗ್ರಾಮಗಳಲ್ಲಿ ವರ್ಷದ ಉತ್ತಮ ಮಳೆಯಾಗಿದೆ. ಮಳೆಯಿಲ್ಲದೇ ಕಂಗಲಾಗಿದ್ದ ಜನಜಾನುವಾರುಗಳಿಗೆ, ಒಣಗಿ ನಿಂತಿದ್ದ ಅರಣ್ಯಕ್ಕೂ ಕಳೆದ ನಾಲ್ಕೈದು ದಿನಗಳಿಂದ ಬೀಳುತ್ತಿರುವ ಮಳೆ ಜೀವಕಳೆಯನ್ನು ನೀಡಿದೆ.
ಮಹದೇಶ್ವರ ಬೆಟ್ಟದಲ್ಲಿ ಬುಧವಾರ ಬೆಳಿಗ್ಗೆಯೇ ಮಳೆಯಾಗಿದೆ. ಅಮಾವಾಸ್ಯೆ ಪ್ರಯುಕ್ತ ಬೆಟ್ಟಕ್ಕೆ ಬಂದಿದ್ದ ಭಕ್ತರು ಸುರಿಯುತ್ತಿರುವ ಮಳೆಯನ್ನು ಲೆಕ್ಕಿಸದೇ ತಮ್ಮ ಹರಕೆ ಕಾಣಿಕೆಗಳನ್ನು ಸಲ್ಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.