ಹನೂರು: ಕಾವೇರಿ ವನ್ಯಧಾಮದ ಹನೂರು ವನ್ಯಜೀವಿ ವಲಯದಲ್ಲಿ ಎರಡು ಹುಲಿ ಮರಿಗಳು ಮೃತಪಟ್ಟ ಬೆನ್ನಲ್ಲೇ ಅರಣ್ಯ ಇಲಾಖೆ ಮೂರು ದಿನಗಳಿಂದ ತಾಯಿ ಹುಲಿ ಪತ್ತೆಗಾಗಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ.
ಹನೂರು ವನ್ಯಜೀವಿ ವಲಯದಲ್ಲಿ ಎರಡು ಹುಲಿ ಮರಿಗಳು ಪತ್ತೆಯಾಗಿದ್ದವು. ಮರಿಗಳು ತಾಯಿಯಿಂದ ಬೇರ್ಪಟ್ಟು ಹಸಿವಿನಿಂದ ಬಳಲಿ ಮೃತಪಟ್ಟಿರುವುದು ಮರಣೋತ್ತರ ಪರೀಕ್ಷೆ ವೇಳೆ ಕಂಡುಬಂದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಬಿ.ಖಂಡ್ರೆ ಅವರು ಕೂಡಲೇ ಇದರ ಬಗ್ಗೆ 5 ದಿನಗಳೊಳಗೆ ಸಮಗ್ರ ವರದಿ ನೀಡುವಂತೆ ಬುಧವಾರ ಆದೇಶ ಹೊರಡಿಸಿದ್ದರು.
ಇದರಂತೆ 30 ಸಿಬ್ಬಂದಿ ತಂಡ ಎರಡು ದಿನಗಳಿಂದ ನಿರಂತರವಾಗಿ 5 ಕಿ.ಮೀ ದೂರದವರೆಗೆ ಕೂಂಬಿಂಗ್ ನಡೆಸುತ್ತಿದ್ದಾರೆ. ಇದರ ಜತೆಗೆ ಇಲಾಖೆ 50 ಕಡೆ ಕ್ಯಾಮೆರಾ ಅಳವಡಿಸಿ ಹುಲಿ ಚಿತ್ರ ಸೆರೆಗಾಗಿ ಕಾರ್ಯಾಚರಣೆ ನಡೆಸುತ್ತಿದೆ.
ಬುಧವಾರ ಹಾಗೂ ಗುರುವಾರ ಹುಲಿ ಹಾಗೂ ಮರಿ ಹೆಜ್ಜೆಗುರುತುಗಳು ಪತ್ತೆಯಾಗಿದೆ. ತಾಯಿ ಹುಲಿಯ ಹೆಜ್ಜೆ ಗುರುತೇ ಎಂಬುದು ಖಚಿತವಾಗಿಲ್ಲ. ಕ್ಯಾಮೆರಾದಲ್ಲಿ ಹುಲಿ ಚಿತ್ರ ಸೆರೆಯಾದರೆ, ನಿರ್ಧಾರಕ್ಕೆ ಬರಬಹುದಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.