ADVERTISEMENT

ಮೂರು ಮನೆ ಕಳ್ಳತನ: ಒಂದೂವರೆ ತಿಂಗಳ ನಂತರ ಆರೋಪಿ ಬಂಧನ

₹ 1.5 ಲಕ್ಷ ಮೌಲ್ಯದ ಚಿನ್ನಾಭರಣ ವಶ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2021, 16:56 IST
Last Updated 26 ಅಕ್ಟೋಬರ್ 2021, 16:56 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ನಗರದ ಹೌಸಿಂಗ್‌ ಬೋರ್ಡ್‌ ಬಡಾವಣೆಯಲ್ಲಿಸೆ.7ರಂದು ಮನೆ ಕಳ್ಳತನ ಮಾಡಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮನೆಯಲ್ಲಿ ಕಳ್ಳತನ ಮಾಡಿದ್ದ ₹ 1.5 ಲಕ್ಷ ಮೌಲ್ಯದ ಆಭರಣ ಹಾಗೂ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಗಾಳಿಪುರ ಬಡಾವಣೆಯ ಸುಹೇಲ್ ಪಾಷ ಬಂಧಿತ ಆರೋಪಿ.

ಈತನಿಂದ ಒಂದು ಜೊತೆ ಓಲೆ-ಜುಮುಕಿ, ಎರಡು ಉಂಗುರ, ಒಂದು ಸಿಂಗಲ್ ಓಲೆ, ಬೆಳ್ಳಿಯ ಕಾಲಿನ ಚೈನು, ಮೊಬೈಲ್, ಒಂದು ತಾಮ್ರದ ಬಿಂದಿಗೆ, ತಾಮ್ರದ ತಟ್ಟೆ, ಎರಡು ದೊಡ್ಡ ದೀಪಾಲೆ ಕಂಬ, ಗೋಲಕದಲ್ಲಿದ್ದ ಚಿನ್ನದ ನಾಣ್ಯ ಹಾಗೂ ಒಂದು ಕುಟಾಣಿ ಗೃಹಪಯೋಗಿ ವಸ್ತು ಸೇರಿದಂತೆ ₹ 1.5 ಲಕ್ಷ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.

ADVERTISEMENT

ಹೌಸಿಂಗ್ ಬೋರ್ಡ್ ನಿವಾಸಿ ರೇವಣ್ಣ ಮನೆಯಲ್ಲಿ ಕಳ್ಳತನವಾಗಿತ್ತು. ಮನೆಯ ಹಿಂಬಾಗಿಲಿನ ಬಾಗಿಲನ್ನು ಒಡೆದು ಮನೆಯೊಳಗಿನ ಲಾಕರ್‌ನಲ್ಲಿಟ್ಟಿದ್ದ ಒಂದು ಜೊತೆ ಓಲೆ-ಜುಮುಕಿ, ಎರಡು ಉಂಗುರ, ಒಂದು ಓಲೆ, ಬೆಳ್ಳಿಯ ಕಾಲಿನ ಚೈನು, ಮೊಬೈಲ್ ಕಳ್ಳತನವಾಗಿತ್ತು.

ಕೈಗೆ ಸಿಗದ ಆರೋಪಿ: ಪ್ರಕರಣ ದಾಖಲಾಗಿ ಒಂದೂವರೆ ತಿಂಗಳಾದರೂ ಆರೋಪಿ ಪೊಲೀಸ್‌ ಕೈಗೆ ಸಿಕ್ಕಿರಲಿಲ್ಲ. ಇದೇ 23ರಂದು ಅಪರಾಧ ವಿಭಾಗದ ಸಿಬ್ಬಂದಿ ಗಸ್ತಿನಲ್ಲಿ ಇದ್ದ ಸಂದರ್ಭದಲ್ಲಿ ನಗರದ ಬುದ್ಧನಗರ ನೀರಿನ ಟ್ಯಾಂಕ್‌ ಹತ್ತಿರ, ಗಾಳಿಪುರ ಬಡಾವಣೆಯ ಸುಹೇಲ್‌ ಪಾಷ ಅನುಮಾನಸ್ಪದವಾಗಿ ಓಡಾಡುತ್ತಿದ್ದ.

ಪೊಲೀಸ್‌ ಸಿಬ್ಬಂದಿ ಅವರನ್ನು ತಡೆದು ವಿಚಾರಣೆಗೆ ಒಳಪಡಿಸಿದಾಗ ರೇವಣ್ಣ ಮನೆಯಲ್ಲಿ ಕಳ್ಳತನ ಮಾಡಿರುವುದು ಬೆಳಕಿಗೆ ಬಂತು. ಇದಲ್ಲದೇ ನಾಗೇಶ್‌, ವಿ.ಫಣೀಶ್‌ ಮನೆಗಳಲ್ಲಿ ಗೃಹಬಳಕೆ ವಸ್ತುಗಳನ್ನು ಕಳ್ಳತನ ಮಾಡಿರುವ ಬಗ್ಗೆ ಆರೋಪಿ ಬಾಯಿ ಬಿಟ್ಟರು ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆರೋಪಿಯು ಬೆಳಿಗ್ಗೆ, ಮಧ್ಯಾಹ್ನದ ಸಮಯದಲ್ಲಿ ಚಿಂದಿ ಆಯುವ ರೀತಿಯಲ್ಲಿ ಪ್ಲಾಸ್ಟಿಕ್ ಚೀಲವನ್ನು ಕುತ್ತಿಗೆಗೆ ಹಾಕಿಕೊಂಡು ಬೀಗ ಹಾಕಿರುವ ಮನೆಗಳನ್ನು ಗುರಿಯಾಗಿಸಿಕೊಂಡು, ರಾತ್ರಿ ಕಳ್ಳತನ ಮಾಡುತ್ತಿದ್ದ. 10 ತಿಂಗಳುಗಳಿಂದ ಈ ಕೃತ್ಯ ನಡೆಸುತ್ತಿರುವುದು ತನಿಖೆಯ ವೇಳೆ ಗೊತ್ತಾಗಿದೆ.

ಪಟ್ಟಣ ಠಾಣೆ ಇನ್‌ಸ್ಪೆಕ್ಟರ್‌ ಬಿ.ಮಹೇಶ್, ಸಬ್‌ ಇನ್‌ಸ್ಪೆಕ್ಟರ್‌ ವೆಂಕಟೇಶ್, ಎಎಸ್ಐ ಬಿ.ಕೆ.ಶಿವಸ್ವಾಮಿ, ಸಿಬ್ಬಂದಿ ಕೃಷ್ಣಮೂರ್ತಿ, ಶಂಕರ್, ಶಿವಕುಮಾರ್, ಮೋಹನ್ ಕುಮಾರ್, ನಿಂಗರಾಜು, ಮಹೇಶ, ಬಸವರಾಜು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.