ಗುಂಡ್ಲುಪೇಟೆ: ‘ಕೊಡಹಳ್ಳಿಯಲ್ಲಿ ಮದ್ಯ ಅಕ್ರಮ ಮಾರಾಟ ಕಂಡು ಬಂದರೆ ಕಾನೂನು ಅಡಿಯಲ್ಲಿ ಸೂಕ್ತ ಕ್ರಮ ಜರುಗಿಸಲಾಗುವುದು’ ಎಂದು ಅಬಕಾರಿ ನಿರೀಕ್ಷಕಿ ದೀಪು ಹೇಳಿದರು.
ತಾಲ್ಲೂಕಿನ ಕೋಡಹಳ್ಳಿಯಲ್ಲಿ ನಡೆದ ಗ್ರಾಮ ಸಭೆಯಲ್ಲಿ ಸ್ಥಳೀಯರ ಮನವಿ ಆಲಿಸಿದ ನಂತರ ಮಾತನಾಡಿದ ಅವರು, ಮದ್ಯ ಅಕ್ರಮ ಮಾರಾಟ ಕಾನೂನು ಅಪರಾಧವಾಗಿದೆ. ಆದ್ದರಿಂದ ಯಾವೊಬ್ಬ ವ್ಯಕ್ತಿಯು ಮಾರಾಟ ಮಾಡಬಾರದು. ಈಗಾಗಲೇ ಗ್ರಾಮದ ಕೆಲವು ಸ್ಥಳಗಳಲ್ಲಿ ಮದ್ಯ ಮಾರಾಟ ನಡೆಯುತ್ತಿರುವುದಾಗಿ ದೂರು ಬಂದಿದೆ. ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.
‘ಗ್ರಾಮದಲ್ಲಿ ಮದ್ಯ ಅಕ್ರಮ ಮಾರಾಟ ನಡೆಯುತ್ತಿರುವ ಕಾರಣ ವಿದ್ಯಾರ್ಥಿಗಳು, ಯುವಕರು ಕುಡಿತದ ಚಟಕ್ಕೆ ಬಿದ್ದು ಕುಡಿಯುತ್ತಿದ್ದಾರೆ. ಇದರಿಂದ ವಿದ್ಯಾರ್ಥಿಗಳ ಓದಿಗೆ ತೊಂದರೆಯಾಗಿದೆ. ಜೊತೆಗೆ ಕೂಲಿ ಕಾರ್ಮಿಕರು, ಬಡವರು ದುಡಿದ ಬಹುಪಾಲು ಹಣ ದುಶ್ಚಟಕ್ಕೆ ಬಲಿಯಾಗುತ್ತಿದೆ. ಇದನ್ನು ಬಹಳ ಗಂಭೀರವಾಗಿ ಪರಿಗಣಿಸಿ ಗ್ರಾಮದಲ್ಲಿ ಅಕ್ರಮ ಮದ್ಯೆ ಮಾರಾಟಕ್ಕೆ ಬ್ರೇಕ್ ಹಾಕಬೇಕು’ ಎಂದು ಗ್ರಾಮಸ್ಥರು ಒತ್ತಾಯಿಸಿದರು.
ನೆಪಮಾತ್ರಕ್ಕೆ ಸಭೆ ನಡೆಸಿದರೆ ಸಾಲದು, ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಬೇಕು. ಇದಕ್ಕೆ ನಾವು ಸಹಕಾರ ನೀಡುತ್ತೇವೆ. ಮದ್ಯ ಅಕ್ರಮ ಮಾರುವುದು ಕಂಡುಬಂದರೆ ಅಬಕಾರಿ ಇಲಾಖೆಗೆ ಮಾಹಿತಿ ನೀಡಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಪಿಡಿಓ ಮಹದೇವಯ್ಯ, ಅಬಕಾರಿ ಪೇದೆಗಳಾದ ಗೋವಿಂದರಾಜು, ಕುಮಾರಸ್ವಾಮಿ, ಷಣ್ಮುಖ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.