ಚಾಮರಾಜನಗರ: ಕರ್ತವ್ಯಲೋಪ ಆರೋಪದ ಮೇರೆಗೆ ನಗರದ ಸೈಬರ್, ಆರ್ಥಿಕ ಹಾಗೂಮಾದಕದ್ರವ್ಯ (ಸಿಇಎನ್) ಅಪರಾಧ ಠಾಣೆಯ ಇನ್ಸ್ಪೆಕ್ಟರ್ ಎಂ.ನಂಜಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.
ಇದೇ ತಿಂಗಳ 3ರಂದು ಹಿರಿಯ ಸಿವಿಲ್ ನ್ಯಾಯಾಧೀಶ ಗಣಪತಿ ಜಿ.ಬಾದಾಮಿ ಅವರು ಪರಿಶೀಲನೆಗಾಗಿ ಸಿಇಎನ್ ಠಾಣೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಠಾಣೆಯ ಬಾಗಿಲು ಹಾಕಿತ್ತು. ಅಲ್ಲಿ ಯಾರೂ ಇರಲಿಲ್ಲ. 10 ನಿಮಿಷಗಳ ನಂತರ ಒಬ್ಬರು ಸಿಬ್ಬಂದಿ ಬಂದರು. ಠಾಣಾ ದಿನಚರಿ ಪುಸ್ತಕ, ನ್ಯಾಯಾಧೀಶರ ಭೇಟಿ ಪುಸ್ತಕವೂ ಠಾಣೆಯಲ್ಲಿ ಇರಲಿಲ್ಲ. ಈ ಸಂಬಂಧ ಅವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯಾ ಸಾರಾ ಥಾಮಸ್ ಅವರಿಗೆ ವರದಿ ನೀಡಿದ್ದರು.
ವರದಿ ಆಧಾರದಲ್ಲಿ ದಿವ್ಯಾ ಅವರು ಠಾಣೆಯ ಇನ್ಸ್ಪೆಕ್ಟರ್ ನಂಜಪ್ಪ ಅವರನ್ನು ಸೇವೆಯಿಂದ ಅಮಾನತು ಮಾಡಿ ಇಲಾಖೆ ತನಿಖೆಗೆ ಆದೇಶಿಸಿದ್ದಾರೆ.
ಅಶಿಸ್ತು, ನಿರ್ಲಕ್ಷ್ಯತನ, ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪ ಎಸಗಿರುವ ಆರೋಪದಲ್ಲಿ ಇನ್ಸ್ಪೆಕ್ಟರ್ ಅವರನ್ನು ಅಮಾನತುಗೊಳಿಸಿರುವುದನ್ನು ದಿವ್ಯಾ ಸಾರಾ ಥಾಮಸ್ ಅವರು ’ಪ್ರಜಾವಾಣಿ‘ಗೆ ದೃಢಪಡಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.