ADVERTISEMENT

ಚಾಮರಾಜನಗರ: ಬಿಜೆಪಿ ಯುವಮೋರ್ಚಾದಿಂದ ಕಲ್ಯಾಣಿ ಸ್ವಚ್ಛತೆ

​ಪ್ರಜಾವಾಣಿ ವಾರ್ತೆ
Published 29 ಸೆಪ್ಟೆಂಬರ್ 2021, 15:47 IST
Last Updated 29 ಸೆಪ್ಟೆಂಬರ್ 2021, 15:47 IST
ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬುಧವಾರ ಕೊಳದ ಗಣಪತಿ ದೇವಾಲಯದ ಕಲ್ಯಾಣಿಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು
ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಬುಧವಾರ ಕೊಳದ ಗಣಪತಿ ದೇವಾಲಯದ ಕಲ್ಯಾಣಿಯನ್ನು ಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು   

ಚಾಮರಾಜನಗರ: ಬಿಜೆಪಿ ಜಿಲ್ಲಾ ಯುವಮೋರ್ಚಾದ ಕಾರ್ಯಕರ್ತರು ಬುಧವಾರ ನಗರದಪ್ರಸಿದ್ಧ ಕೊಳದ ಗಣಪತಿ ದೇವಸ್ಥಾನದ ಕಲ್ಯಾಣಿ ಹಾಗೂ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನುಶ್ರಮದಾನದ ಮೂಲಕ ಸ್ವಚ್ಛಗೊಳಿಸಿದರು.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಮತ್ತು ಮುಖ್ಯಮಂತ್ರಿ ಹಾಗೂ ಪ್ರಧಾನಿಯಾಗಿ ಅವರು 20 ವರ್ಷಗಳ ಅಧಿಕಾರ ಪೂರೈಸುತ್ತಿರುವ ಅಂಗವಾಗಿ ಹಮ್ಮಿಕೊಂಡಿರುವ ಸಮರ್ಪಣೆ ಹಾಗೂ ಸೇವಾ ಅಭಿಯಾನದ ಭಾಗವಾಗಿ ಶ್ರಮದಾನವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 6 ಗಂಟೆಗೆ ಆರಂಭವಾದ ಸ್ವಚ್ಛತಾ ಕಾರ್ಯ ಮಧ್ಯಾಹ್ನದವರೆಗೂ ನಡೆಯಿತು.ಕಲ್ಯಾಣಿ ಹೊರಭಾಗದಲ್ಲಿದ್ದ ಗಿಡಗಂಟಿಗಳು ಹಾಗೂ ಕಸಕಡ್ಡಿಗಳನ್ನು ತೆರವುಗೊಳಿಸಲಾಯಿತು. ಕಲ್ಯಾಣಿಯಲ್ಲಿದ್ದ ಪಾಚಿಯನ್ನೂ ಕಾರ್ಯಕರ್ತರು ತೆರವುಗೊಳಿಸಿದರು.ಕೊಳದ ಆವರಣದಲ್ಲಿರುವ ಬಸವೇಶ್ವರ ದೇವಸ್ಥಾನಕ್ಕೆ ಬಣ್ಣ ಬಳಿದು, ಪೂಜೆ ಸಲ್ಲಿಸಲಾಯಿತು.

ADVERTISEMENT

ಕಾರ್ಯಕ್ರಮದಲ್ಲಿ ಯುವ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಡಾ.ಸಂದೀಪ್‌ ಕುಮಾರ್‌ ಅವರು ಭಾಗವಹಿಸಿದ್ದರು.

ಆರ್‌ಎಸ್‌ಎಸ್‌ ಅನ್ನು ತಾಲಿಬಾನಿಗೆ ಹೋಲಿಕೆ ಮಾಡಿದ ಕಾಂಗ್ರೆಸ್‌ ಮುಖಂಡರ ವಿರುದ್ಧ ವಾಗ್ದಾಳಿ ನಡೆಸಿದ ಅವರು, ‘ಆರ್‌ಎಸ್‌ಎಸ್‌ನವರನ್ನು ಟೀಕಿಸುವ ನೈತಿಕ ಹಕ್ಕು ಕಾಂಗ್ರೆಸ್‌ನವರಿಗಿಲ್ಲ. ಪ್ರಚಾರದ ತೆವಲಿಗಾಗಿ ಕಾಂಗ್ರೆಸ್‌ನ ಮುಖಂಡರು ಪದೇ ಪದೇ ಟೀಕಿಸುತ್ತಿದ್ದಾರೆ. ಸಂಘದ ಬಗ್ಗೆ ತಿಳಿಯದೆ, ಹೊರಗಿನಿಂದ ಸುಮ್ಮನೆ ಟೀಕೆ ಮಾಡುವುದನ್ನು ಕೇಳಿಕೊಂಡು ಸುಮ್ಮನೆ ಕೂರಲು ಸಾಧ್ಯವಿಲ್ಲ’ ಎಂದರು.

ದೇಶದ ಯಾವುದೇ ಮೂಲೆಯಲ್ಲಿ ಯುದ್ಧ, ಪ್ರವಾಹಗಳು ಸಂಭವಿಸಿದಾಗ ಆರ್‌ಎಸ್‌ಎಸ್‌ ಕಾರ್ಯಕರ್ತರು ಮೊದಲು ಹಾಜರಾಗಿ ಸಂಕಷ್ಟದಲ್ಲಿರುವ ಜನರಿಗೆ ಸಹಾಯ ಹಸ್ತವನ್ನು ಚಾಚುತ್ತಾರೆ. ಸ್ವಯಂಸೇವಕರು ತಮ್ಮ ಪ್ರಾಣವನ್ನೇ ಪಣವಾಗಿಟ್ಟು ರಕ್ಷಣೆ ಮಾಡುತ್ತಾರೆ. ಪರಿಸ್ಥಿತಿ ಹೀಗಿರುವಾಗ ಸಂಘದ ನಿಸ್ವಾರ್ಥ ಸೇವೆಯನ್ನು ತಾಲಿಬಾನಿಗೆ ಹೋಲಿಸಲು ಮನಸ್ಸಾದರೂ ಹೇಗೆ ಬರುತ್ತದೆ’ ಎಂದು ಪ್ರಶ್ನಿಸಿದರು.

ಜಿಲ್ಲಾ ಯುವಮೋರ್ಚಾ ಅಧ್ಯಕ್ಷ ಪ್ರಣಯ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಆರ್ ಸುಂದರ್, ರಾಜ್ಯ ಬಿಜೆಪಿ ಯುವ ಮೋರ್ಚದ ಉಪಾಧ್ಯಕ್ಷರಾದ ಧೀರಜ್ ಪ್ರಸಾದ್, ಜೈ ಶಂಕರ್, ವಸಂತ ಗೌಡ, ರಾಜ್ಯ ಕಾರ್ಯಕಾರಣಿ ಸದಸ್ಯರಾದ ರಜತ್, ಜಿಲ್ಲಾ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸೂರ್ಯ ಕುಮಾರ್, ಲೋಕೇಶ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ನಾಗಶ್ರೀ, ಮುಖಂಡರಾದ ಬಾಲಸುಬ್ರಹ್ಮಣ್ಯ, ನಟರಾಜು, ಚಂದ್ರಶೇಖರ್, ನಗರಸಭಾ ಸದಸ್ಯರಾದ ಸುದರ್ಶನ್ ಗೌಡ, ಮನೋಜ್ ಪಟೇಲ್, ಶಿವರಾಜ್, ಚಿಕ್ಕರಾಜು, ಗುಂಡಣ್ಣ, ನಗರ ಘಟಕದ ರಾಜೇಶ್ , ಶಿವಣ್ಣ, ಯುವ ಮೋರ್ಚ ಕಾರ್ಯಕರ್ತರಾದ ವಿರಾಟ್ ಶಿವು, ಆನಂದ ಭಗೀರಥ, ರಾಜ್ ಹೊಸೂರು, ಮರಿಯಾಲ ಮಹೇಶ್, ಮನು, ರಘು, ಗರಗನಹಳ್ಳಿ ಮಹೇಂದ್ರ, ಸುರೇಶ್, ಗುರು, ವಿನಯ್, ಮಹದೇವಪ್ರಭು, ಯರಗಂಬಳ್ಳಿ ಮಹೇಶ್, ಕೊಳ್ಳೆಗಾಲ ಪ್ರೀತಮ್ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.