ADVERTISEMENT

ಗುಂಡ್ಲುಪೇಟೆ | ಸಚಿವ ಕೆ.ವೆಂಕಟೇಶ್ ಭರವಸೆ: ಅಹೋರಾತ್ರಿ ಧರಣಿ ಕೈಬಿಟ್ಟ ರೈತರು

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2025, 4:51 IST
Last Updated 20 ನವೆಂಬರ್ 2025, 4:51 IST
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮನವಿ ಸ್ವೀಕರಿಸಿದರು. ಶಾಸಕ ಎಚ್.ಎಂ.ಗಣೇಶಪ್ರಸಾದ್ ಪಾಲ್ಗೊಂಡಿದ್ದರು
ಗುಂಡ್ಲುಪೇಟೆ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಿಂದ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಮನವಿ ಸ್ವೀಕರಿಸಿದರು. ಶಾಸಕ ಎಚ್.ಎಂ.ಗಣೇಶಪ್ರಸಾದ್ ಪಾಲ್ಗೊಂಡಿದ್ದರು   

ಗುಂಡ್ಲುಪೇಟೆ: ಡಿಸೆಂಬರ್ ಮೊದಲ ವಾರದಲ್ಲಿ 4ನೇ ಹಂತದ ಕೆರೆಗಳಿಗೆ ನೀರು ಬಿಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಭರವಸೆ ನೀಡಿದ ಹಿನ್ನೆಲೆಯಲ್ಲಿ ರೈತರು ಅಹೋರಾತ್ರಿ ಧರಣಿ ಕೈಬಿಟ್ಟರು.

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 37 ದಿನಗಳಿಂದ ಪಟ್ಟಣದ ತಾಲ್ಲೂಕು ಕಚೇರಿ ಮುಂಭಾಗ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ನಡೆಯುತ್ತಿದ್ದ ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿದ ಸಚಿವರು, ರೈತರ ಸಮಸ್ಯೆ ಆಲಿಸಿದರು.

‘ನ.30ಕ್ಕೆ ಗುಂಡ್ಲುಪೇಟೆ ತಾಲ್ಲೂಕಿನ ಕೆರೆಗಳಿಗೆ ನೀರು ಬಿಡುವಂತೆ ಕೆಡಿಪಿ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದ್ದೆ. ಆದರೆ ಡಿಸೆಂಬರ್ ಮೊದಲ ವಾರ ನೀರು ಹರಿಸುವುದಾಗಿ ಹೇಳುತ್ತಿದ್ದಾರೆ. ಅದರಂತೆ ನೀರು ಬಿಡಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ADVERTISEMENT

‘ಮುಂದಿನ ವರ್ಷದಿಂದ ಪ್ರತ್ಯೇಕ ಮೋಟರ್ ತರಿಸಿ ಚಾಮರಾಜನಗರ, ಗುಂಡ್ಲುಪೇಟೆ ಎರಡು ಕಡೆಗೂ ನೀರು ಬಿಡಲು ಕ್ರಮ ವಹಿಸಲಾಗುವುದು. ಹೆಚ್ಚುವರಿ ಐದು ಮೋಟರ್ ತರಿಸಲು ₹50 ಕೋಟಿ ನೀಡುವಂತೆ ಮುಖ್ಯಮಂತ್ರು ಸಿಎಂ ಬಳಿ ಮನವಿ ಮಾಡಲಾಗಿದೆ. ಅರಣ್ಯ ಮತ್ತು ಕಂದಾಯ ಇಲಾಖೆ ಜಂಟಿ ಸರ್ವೇ ನಡೆಸಿ ಸಾಗುವಳಿ ಎನ್‌ಒಸಿ ನೀಡಲು ಶೀಘ್ರದಲ್ಲೇ ಕ್ರಮ ವಹಿಸಿ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಸಫಾರಿ ಸಂಪೂರ್ಣ ಬಂದ್ ಮಾಡುವುದರಿಂದ ಪ್ರವಾಸೋದ್ಯಮಕ್ಕೆ ಹೊಡೆತ ಬೀಳಲಿದ್ದು, ಈ ಸಂಬಂಧ ಸರ್ಕಾರದ ಮಟ್ಟದಲ್ಲಿ ಚರ್ಚಿಸಲಾಗುವುದು’ ಎಂದು ತಿಳಿಸಿದರು.

ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ‘ಗಾಂಧಿ ಗ್ರಾಮ ಹಾಗೂ 4ನೇ ಹಂತದ ಹುತ್ತೂರು ಕೆರೆಗಳಿಗೆ ಕೂಡಲೇ ನೀರು ಹರಿಸಬೇಕು. ಸಾಗುವಳಿ, ಎನ್ಒಸಿ ನೀಡಬೇಕು, ಕಾಡುಪ್ರಾಣಿಗಳ ಹಾವಳಿಗೆ ಕಡಿವಾಣ ಹಾಕಬೇಕು. ಸಫಾರಿ ಸಂಪೂರ್ಣ ಬಂದ್ ಮಾಡಬೇಕು. ಪಂಪ್‌ಸೆಟ್‌ಗಳಿಗೆ ಅಕ್ರಮ-ಸಕ್ರಮ ಹಿಂದಿನ ಪದ್ದತಿ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.

‘ರಾತ್ರಿ ವೇಳೆ ಕಾಡಂಚಿನ ಜಮೀನುಗಳ ವಿದ್ಯುತ್ ಲೈನ್ ಕಡಿತ ಮಾಡಬಾರದು. ನೀರು ಬಿಡಲು ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕರ್ತವ್ಯ ಲೋಪವೆಸಗಿದ್ದಾರೆ. ಕಳೆದ ಎರಡು ವರ್ಷದಿಂದ ಗುಂಡ್ಲುಪೇಟೆಯ 3 ಕೆರೆಗಳಿಗೆ ನೀರು ತುಂಬಿಸಿದ್ದಾರೆ. ಕಲ್ಲುಕಟ್ಟೆ ಜಲಾಶಯ, ನಲ್ಲೂರಮ್ಮನಿ ಕೆರೆಗೆ ನೀರು ಬಿಟ್ಟಿಲ್ಲ’ ಎಂದು ದೂರಿದರು.

ನೀರಾವರಿ ಇಲಾಖೆಯ ಅಧೀಕ್ಷಕ ಎಂಜಿನಿಯರ್ ರಘುಪತಿ ಮಾತನಾಡಿ, ‘ಎರಡು ಮೋಟರ್ ರೆಡಿಯಾಗಿದ್ದು, ಗುರುವಾರದಿಂದಲೇ ನೀರು ಹರಿಸಲು ಆರಂಭಿಸಲಾಗುವುದು. ಮೊದಲಿಗೆ ಚಾಮರಾಜನಗರದ ತಮಡಹಳ್ಳಿ ಕೆರೆಗೆ ನೀರು ಬಿಟ್ಟು ನಂತರ ಗುಂಡ್ಲುಪೇಟೆ 4ನೇ ಹಂತದ ಹುತ್ತೂರು ಕೆರೆಗೆ ಡಿಸೆಂಬರ್ ಮೊದಲ ವಾರದಲ್ಲಿ ನೀರು ಹರಿಸಲಾಗುವುದು. ಹೆಚ್ಚುವರಿ ಮೋಟರ್‌ಗೆ ಡಿಪಿಆರ್ ತಯಾರಿಸಿ ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಲಾಗಿದೆ’ ಎಂದು ತಿಳಿಸಿದರು.

ರೈತ ಸಂಘದ ಕಾರ್ಯಾಧ್ಯಕ್ಷ ಮಹೇಶ್ ಪ್ರಭು ಮಾತನಾಡಿ, ‘ಅಧಿಕಾರಿಗಳು ಶಾಸಕರು ಹಾಗೂ ಸಚಿವರ ದಿಕ್ಕು ತಪ್ಪಿಸಲು ಮುಂದಾಗಿದ್ದಾರೆ. ಅಧಿಕಾರಿಗಳು ಜನರ ಸಮಸ್ಯೆ ಅರಿತು ಕೆಲಸ ಮಾಡಬೇಕು. ಡಿಸೆಂಬರ್ ಮೊದಲ ವಾರದಲ್ಲಿ ಕೆರೆಗಳಿಗೆ ನೀರು ಬಿಡದಿದ್ದರೆ ಪ್ರತಿಭಟನಾ ಸ್ವರೂಪ ಬದಲಾಗಲಿದ್ದು, ಬೆಂಗಳೂರಿಗೆ ಪಾದಯಾತ್ರೆ ನಡೆಸಲಾಗುವುದು’ ಎಂದು ಎಚ್ಚರಿಕೆ ನೀಡಿದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ‘ಕಂದಾಯ ಮತ್ತು ಅರಣ್ಯ ಇಲಾಖೆಯವರು ಜಂಟಿ ಸರ್ವೇ ನಡೆಸಿ ಬಾಕಿ ಇರುವ ಸಾಗುವಳಿ ಚೀಟಿಗಳನ್ನು ವಿತರಣೆಗೆ ಕ್ರಮವಹಿಸಬೇಕು’ ಎಂದು ತಹಶೀಲ್ದಾರ್ ಅವರಿಗೆ ಸೂಚಿಸಿದರು.

ಬಂಡೀಪುರ ಅರಣ್ಯ ಸಂರಕ್ಷಣಾಧಿಕಾರಿ ಡಾ.ಪ್ರಭಾಕರನ್ ಮಾತನಾಡಿ, ‘ಮಾನವ-ವನ್ಯಜೀವಿ ಸಂಘರ್ಷ ತಡೆಗೆ ಕ್ರಮವಹಿಸಲಾಗಿದ್ದು, ಈಗಾಗಲೇ ಆರು ಹುಲಿ ಸೆರೆ ಹಿಡಿಯಲಾಗಿದೆ. ಸಮಸ್ಯೆ ಇದ್ದರೆ ಮಾಹಿತಿ ನೀಡಿದರೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಜಿಲ್ಲಾಧಿಕಾರಿ ಮಾತನಾಡಿ, ‘ಆರ್‌ಐ, ತಹಶೀಲ್ದಾರ್ ಹಂತದಲ್ಲಿ ಅನುಮತಿ ನೀಡಬೇಕು ಎಂದು ಅರಣ್ಯ ಸಚಿವರು ಆದೇಶ ಕೊಟ್ಟಿದ್ದಾರೆ. ಬೆಳೆ ನಷ್ಟಕ್ಕೆ ಪರಿಹಾರ ಸಂಬಂಧ ಬಳಕೆ ಮಾಡದ ಬೇರೆ ಕಡೆ ಇರುವ ಅನುದಾನವನ್ನು ಇಲ್ಲಿಗೆ ಬಳಸುವಂತೆ ಸಚಿವರು ಹೇಳಿದ್ದಾರೆ. ಎರಡು ದಿನಗಳೊಳಗೆ ಪರಿಹಾರ ಹಣ ನೀಡಲು ಕ್ರಮ ವಹಿಸಲಾಗುವುದು’ ಎಂದು ತಿಳಿಸಿದರು.

ರೈತ ಸಂಘದ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್, ಜಿಲ್ಲಾ ಉಪಾಧ್ಯಕ್ಷ ಮಾಧು, ಪಡುಗೂರು ಶಿವಕುಮಾರ್, ಮಲ್ಲಯ್ಯನಪುರ ಶಿವಣ್ಣ, ಕುಮಾರ್ ಭೀಮನಬೀಡು, ಮಳವಳ್ಳಿ ಅಂಕಪ್ಪ, ಹಕ್ಕಲಾಪುರ ಕುಮಾರ್, ಮುಂಟೀಪುರ ಮಹದೇವಸ್ವಾಮಿ ಹಾಜರಿದ್ದರು.

110 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಅನುಮೋದನೆಯಾಗಿದ್ದು ಟೆಂಡರ್ ಪ್ರಕ್ರಿಯೆ ಮುಗಿದಿದೆ. ಜನವರಿಯಲ್ಲಿ ಮುಖ್ಯಮಂತ್ರಿಗಳನ್ನು ಆಹ್ವಾನಿಸಿ ಚಾಲನೆ ನೀಡಲಾಗುವುದು.
– ಎಚ್.ಎಂ.ಗಣೇಶ ಪ್ರಸಾದ್, ಶಾಸಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.