ADVERTISEMENT

ಚಾಮರಾಜನಗರ| ₹ 2 ಲಕ್ಷ ರಿಯಾಯಿತಿ ನೀಡಿ ಟ್ರ್ಯಾಕ್ಟರ್‌ ವಿತರಿಸಿದ ರುದ್ರೇಶ್‌

ಚಾಮರಾಜನಗರ ಬಿಜೆಪಿ ಟಿಕೆಟ್‌ ಆಕಾಂಕ್ಷಿ ರುದ್ರೇಶ್ ವಿತರಣೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2023, 12:42 IST
Last Updated 17 ಮಾರ್ಚ್ 2023, 12:42 IST
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಅವರು ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಅಂಗವಾಗಿ14 ರೈತರಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಿದರು
ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ ಕೆಆರ್‌ಐಡಿಎಲ್ ಅಧ್ಯಕ್ಷ ಎಂ.ರುದ್ರೇಶ್ ಅವರು ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಅಂಗವಾಗಿ14 ರೈತರಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಿದರು   

ಚಾಮರಾಜನಗರ: ಚಾಮರಾಜನಗರ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿ, ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಮಗದ ಅಧ್ಯಕ್ಷ ಎಂ.ರುದ್ರೇಶ್ ಅವರು ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಜನ್ಮದಿನದ ಅಂಗವಾಗಿ 14 ರೈತರಿಗೆ ಶುಕ್ರವಾರ ತಲಾ ₹2 ಲಕ್ಷ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಿದರು.

ಏಸ್ ಕಂಪನಿಯ 45 ಅಶ್ವಶಕ್ತಿಯ ಟ್ರ್ಯಾಕ್ಟರ್‌ಗೆ ₹ 8 ಲಕ್ಷ ಬೆಲೆಯಿದ್ದು, ಡೌನ್ ಪೇಮೆಂಟ್ ಮಾಡಬೇಕಾದ ₹ 2 ಲಕ್ಷ ರಿಯಾಯಿತಿ ನೀಡಿ, ಉಳಿದ ಹಣವನ್ನು ಖಾಸಗಿ ಹಣಕಾಸು ಸಂಸ್ಥೆಯಿಂದ ಸಾಲ ಕೊಡಲಾಗಿದೆ.

ಮಾಧ್ಯಮಗಳೊಂದಿಗೆ ಮಾತನಾಡಿದ ರುದ್ರೇಶ್, ‘ಯಡಿಯೂರಪ್ಪ ಜನ್ಮದಿನದ ಅಂಗವಾಗಿ ರಾಜ್ಯದಾದ್ಯಂತ 80 ಜನರಿಗೆ ರಿಯಾಯಿತಿ ದರದಲ್ಲಿ ಟ್ರ್ಯಾಕ್ಟರ್ ವಿತರಿಸಲು ತೀರ್ಮಾನಿಸಿದ್ದೆವು. ಅದರಂತೆ, ಮೈಸೂರಿನಲ್ಲಿ 20, ದಾವಣಗೆರೆಯಲ್ಲಿ 20, ಚಾಮರಾಜನಗರದಲ್ಲಿ 14 ಟ್ರ್ಯಾಕ್ಟರ್ ವಿತರಿಸಲಾಗಿದೆ. ಕ್ಷೇತ್ರದ ಇನ್ನೂ 20 ಜನರಿಗೆ ನೀಡಬೇಕಾಗಿದೆ. ಸಾಲ ಇನ್ನಷ್ಟೇ ಮಂಜೂರಾಗಬೇಕಾಗಿದೆ’ ಎಂದರು.

ADVERTISEMENT

‘ರೈತರು ಡೌನ್ ಪೇಮೆಂಟ್ ರೂಪದಲ್ಲಿ ಕಟ್ಟಬೇಕಾದ ಹಣಕ್ಕೆ ರಿಯಾಯಿತಿ ನೀಡಲಾಗಿದೆ. ಟ್ರ್ಯಾಕ್ಟರ್ ಕಂಪನಿ, ಡೀಲರ್‌ಗಳು ಲಾಭದ ಅಂಶವನ್ನು ರೈತರಿಗೆ ಬಿಟ್ಟು ಕೊಟ್ಟಿದ್ದಾರೆ. ಈ ಮೊತ್ತ ₹ 2 ಲಕ್ಷದಷ್ಟಾಗುತ್ತದೆ. ₹ 6.60 ಲಕ್ಷ ಹಣವನ್ನು ಸಾಲ ಕೊಡಿಸಲಾಗಿದ್ದು, ರೈತರು ಅದನ್ನು ಪಾವತಿಸಬೇಕು’ ಎಂದರು.

‘ಬಳ್ಳಾರಿ ಸೇರಿದಂತೆ ರಾಜ್ಯದ ವಿವಿಧ ಕಡೆಗಳಿಂದ ಬಿಎಸ್‌ವೈ ಅಭಿಮಾನಿಗಳು ಟ್ರ್ಯಾಕ್ಟರ್‌ಗೆ ಬೇಡಿಕೆ ಇಟ್ಟಿದ್ದಾರೆ. ಚಾಮರಾಜನಗರ ಜಿಲ್ಲೆಯಲ್ಲಿ 65 ಮಂದಿಗೆ ನೀಡುವ ಯೋಚನೆ ಇದೆ. ಬೇಡಿಕೆ ಬಂದಷ್ಟು ಕೊಡುತ್ತೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.