ADVERTISEMENT

ಚಿಕ್ಕಲ್ಲೂರು ಜಾತ್ರೆ: ಸೌಕರ್ಯಗಳಿಗೆ ಆದ್ಯತೆ

3ರಿಂದ ಜಾತ್ರೆ: ಸಿದ್ಧತಾ ಸಭೆಯಲ್ಲಿ ಶಾಸಕ, ಜಿಲ್ಲಾಧಿಕಾರಿ, ಎಸ್‌ಪಿ ಭಾಗಿ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2025, 2:13 IST
Last Updated 13 ಡಿಸೆಂಬರ್ 2025, 2:13 IST
ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಂಜುನಾಥ್ ಮಾತನಾಡಿದರು, ಜಿಲ್ಲಾಧಿಕಾರಿ ಶಿಲ್ಪಾನಾಗ್‌, ಎಸ್‌ಪಿ ಕವಿತಾ, ಜಿ.ಪಂ. ಸಿಇಒ ಮೋನಾರೋತ್‌, ಪ್ರಮುಖರು ಭಾಗವಹಿಸಿದ್ದರು
ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ ಜಿಲ್ಲಾಡಳಿತದಿಂದ ಆಯೋಜಿಸಿದ್ದ ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಶಾಸಕ ಮಂಜುನಾಥ್ ಮಾತನಾಡಿದರು, ಜಿಲ್ಲಾಧಿಕಾರಿ ಶಿಲ್ಪಾನಾಗ್‌, ಎಸ್‌ಪಿ ಕವಿತಾ, ಜಿ.ಪಂ. ಸಿಇಒ ಮೋನಾರೋತ್‌, ಪ್ರಮುಖರು ಭಾಗವಹಿಸಿದ್ದರು   

ಕೊಳ್ಳೇಗಾಲ: ‘ತಾಲ್ಲೂಕಿನ ಸುಪ್ರಸಿದ್ಧ ಚಿಕ್ಕಲ್ಲೂರು ಸಿದ್ದಪ್ಪಾಜಿ ಜಾತ್ರೆ ಜನವರಿ 3 ರಿಂದ 7 ವರೆಗೆ ಜಾತ್ರೆ ಅದ್ದೂರಿಯಾಗಿ ನಡೆಯಲಿದೆ. ಜಿಲ್ಲಾಡಳಿತ ಎಲ್ಲ ರೀತಿಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು’ ಎಂದು ಹನೂರು ಶಾಸಕ ಮಂಜುನಾಥ್ ಹೇಳಿದರು.

ತಾಲ್ಲೂಕಿನ ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದ ಆವರಣದಲ್ಲಿ ಶುಕ್ರವಾರ  ಆಯೋಜಿಸಿದ್ದ  ಜಾತ್ರೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಜಾತ್ರೆ 5 ದಿನ ನಡೆಯಲಿದ್ದು, ರಾಜ್ಯ, ಹೊರ ರಾಜ್ಯಗಳಿಂದ  ಲಕ್ಷಾಂತರ ಮಂದಿ ಭಕ್ತರು ಬರುತ್ತಾರೆ.  ಅವರಿಗೆ  ತೊಂದರೆ ಆಗದಂತೆ ನೋಡಿಕೊಳ್ಳುವುದು ಜಿಲ್ಲಾಡಳಿತದ, ತಾಲ್ಲೂಕು ಆಡಳಿತ ಹಾಗೂ ದೇವಸ್ಥಾನದ ಆಡಳಿತ ಮಂಡಳಿಯವರ ಕರ್ತವ್ಯ. ಮೂಲ ಸೌಕರ್ಯಗಳನ್ನು ಒದಗಿಸಲು ಆದ್ಯತೆ ನೀಡಬೇಕು ಎಂದರು.

ADVERTISEMENT

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, ಈ ಬಾರಿ ಭಕ್ತರಿಗಾಗಿ ಸಾರಿಗೆ ಇಲಾಖೆ 150ಕ್ಕೂ ಹೆಚ್ಚು ಬಸ್‌ಗಳನ್ನು ನೀಡಬೇಕು. ಪ್ರಯಾಣಿಕರಿಗೆ ತೊಂದರೆ ಆಗದಂತೆ ಕೆಎಸ್ಆರ್‌ಟಿಸಿ ಅಧಿಕಾರಿಗಳು ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು. ಅಧಿಕಾರಿಗಳು ನೀಡಿದ  ಜವಾಬ್ದಾರಿಯನ್ನು ನಿರ್ವಹಿಸಿದರೆ ಸಾಕು ಜಾತ್ರೆ ಬಹಳ ಅಚ್ಚುಕಟ್ಟಾಗಿ ನಡೆಯುತ್ತದೆ. ಗ್ರಾಮ ಪಂಚಾಯಿತಿ  ಸೌಕರ್ಯಕ್ಕೆ  ಆದ್ಯತೆಗಳನ್ನು ನೀಡಬೇಕು. ಕುಡಿಯುವ ನೀರು, ಶೌಚಾಲಯ ಲಭ್ಯತೆ ಬಗ್ಗೆ ಗಮನ ಹರಿಸಬೇಕು. ಒಂದು ವಾರ ತಾತ್ಕಾಲಿಕವಾಗಿ ಆರೋಗ್ಯ ಕೇಂದ್ರ ತೆರೆದು,  ಹಗಲು ರಾತ್ರಿ ವೈದ್ಯರು ಕರ್ತವ್ಯದಲ್ಲಿ ಇರಬೇಕು. ಸಿಬ್ಬಂದಿ ಗಮನಹರಿಸಬೇಕು ಎಂದರು.  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಚಿದಂಬರಂ ಮಾತನಾಡಿ, 4 ನುರಿತ ವೈದ್ಯರನ್ನು ನೇಮಕ ಮಾಡಲಾಗುವುದು ಜೊತೆಗೆ 10  ಸಿಬ್ಬಂದಿ, 2 ಆಂಬುಲೆನ್ಸ್ ನೀಡಲಾಗುವುದು. ಸಮಸ್ಯೆ ಉಂಟಾದರೆ ಸ್ಥಳೀಯ ಆಸ್ಪತ್ರೆಗಳಿಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುವುದು.  ನೀರು ಹಾಗೂ ಆಹಾರ ಪರೀಕ್ಷೆಗಳನ್ನು ಮಾಡಲಾಗುವುದು ಎಂದರು.

ಶಾಸಕ ಮಂಜುನಾಥ್ ಮಾತನಾಡಿ, ಜಾತ್ರೆಯಲ್ಲಿ  ಹೋಟೆಲ್ ಹಾಗೂ ಬೀದಿಬದಿ ವ್ಯಾಪಾರಿಗಳಿಗೆ ಶುದ್ಧತೆ, ಆಹಾರ ಸುರಕ್ಷತೆ ಬಗ್ಗೆ ನಿಗಾ ಇರಿಸಲು ಆರೋಗ್ಯ ಅಧಿಕಾರಿಗಳು ಸೂಚನೆ ನೀಡ
ಬೇಕು.  ಚರಂಡಿ ಪಕ್ಕ, ಕೈತೊಳೆಯುವ ಸ್ಥಳದಲ್ಲೇ  ತಟ್ಟೆ, ತಿಂಡಿ , ಆಹಾರಗಳನ್ನು ತಯಾರಿಸುತ್ತಾರೆ. ಇದರಿಂದ ರೋಗ ರುಜಿನಗಳು ಹೆಚ್ಚಾಗುತ್ತದೆ. ಗಮನ ಹರಿಸಬೇಕು ಎಂದು ವೈದ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ತಹಶೀಲ್ದಾರ್ ಬಸವರಾಜು ಮಾತನಾಡಿ, ಜಾತ್ರೆ ಆವರಣದಲ್ಲಿ 200 ಕ್ಕೂ ಹೆಚ್ಚು ತಾತ್ಕಾಲಿಕ ಅಂಗಡಿಗಳನ್ನು ಇಡಲಾಗುತ್ತದೆ. ಕೆಲವರು ರಸ್ತೆ ಮೇಲೆ ಅಂಗಡಿಗಳನ್ನು ವಿಸ್ತರಿಸುತ್ತಾರೆ. ಇದರಿಂದ ಪಾದಚಾರಿಗಳಿಗೆ ತೊಂದರೆ ಉಂಟಾಗುತ್ತಿದೆ. ಗ್ರಾಮ ಪಂಚಾಯಿತಿ ಅಧಿಕಾರಿಗಳು ಹಾಗೂ ಪೊಲೀಸ್ ಇಲಾಖೆ, ಅಂಗಡಿಗಳನ್ನು ರಸ್ತೆಯಿಂದ ದೂರ ಇಟ್ಟುಕೊಳ್ಳುವಂತೆ ವ್ಯವಸ್ಥೆ ಮಾಡಬೇಕು. ಸೆಸ್ಕ್‌  ವಿದ್ಯುತ್ ನಿರ್ವಹಣೆಯನ್ನು ಸಮರ್ಪಕವಾಗಿ ಮಾಡಬೇಕು ಎಂದರು.

ಚೆಕ್‌ಪೋಸ್ಟ್‌ ಭದ್ರತೆ: ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಕವಿತಾ ಮಾತನಾಡಿ, 7 ಕಡೆ ಚೆಕ್‌ಪೋಸ್ಟ್ ಗಳನ್ನು ನಿಯೋಜನೆ ಮಾಡಲಾಗಿದೆ. ಅಕ್ರಮ ಮದ್ಯ ಸಾಗಣೆಗೆ ಅವಕಾಶವಿಲ್ಲ. ಲಕ್ಷಾಂತರ ಮಂದಿ ಭಕ್ತರು, ಪಾದಚಾರಿಗಳು, ವಾಹನಗಳಿಂದಾಗಿ  ಸಂಚಾರಕ್ಕೆ ತೊಂದರೆ ಉಂಟಾಗದಂತೆ ಏಕಮುಖ ಸಂಚಾರ ವ್ಯವಸ್ಥೆ ಮಾಡಲಾಗುವುದು. ಚೆಕ್‌ಡ್ಯಾಮ್‌ಗಳಲ್ಲಿ ಭಕ್ತರು ಸ್ನಾನ ಮಾಡುತ್ತಾರೆ. ಅಗ್ನಿಶಾಮಕ ದಳದ ಸಿಬ್ಬಂದಿ ಹಗ್ಗ, ಬೋಟ್,ಲೈಫ್‌ ಜಾಕೆಟ್ಮುಂತಾದ  ಸಲಕರಣೆಗಳನ್ನು ಕಾಯ್ದಿರಿಸಬೇಕು ಎಂದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮೋನಾರೋತ್, ಚಿಕ್ಕಲ್ಲೂರು ಸಿದ್ದಪ್ಪಾಜಿ ದೇವಸ್ಥಾನದ ಭರತ್ ರಾಜೇಅರಸ್,  ಅಧಿಕಾರಿಗಳು ಭಾಗವಹಿಸಿದ್ದರು.

ಕೋಳಿ ಕುರಿ ಅಡ್ಡಿ ಬೇಡ ಮಂಟೇಸ್ವಾಮಿ ಪರಂಪರೆ

ರಕ್ಷಣಾ ಸಮಿತಿಯ ಅಧ್ಯಕ್ಷ ಉಗ್ರ ನರಸಿಂಹ ಗೌಡ ಮಾತನಾಡಿ ‘ಶೌಚಾಲಯ ಸ್ನಾನದ ಗೃಹ ಸೇರಿದಂತೆ ಮೂಲಸೌಕರ್ಯ ಒದಗಿಸಲು ಜಿಲ್ಲಾಡಳಿತ ಇದರ ಬಗ್ಗೆ ಗಮನ ಹರಿಸಬೇಕು. ಭಕ್ತರಿಗೆ ನೀರಿನ ವ್ಯವಸ್ಥೆ ಚೆಕ್ ಡ್ಯಾಮ್‌ ಸ್ವಚ್ಛತೆ ಮಾಡಬೇಕು.  ಮಾಂಸಹಾರ ಸಸ್ಯಹಾರ ಲಭಿಸಬೇಕು. ಜನವರಿ 6 ರಂದು ಪಂಕ್ತಿ ಸೇವೆ ಇದೆ. ಪೊಲೀಸರು ಕೋಳಿ ಕುರಿ ಆಡು ಮರಿಗಳನ್ನು ಚೆಕ್‌ಪೋಸ್ಟ್ ನಲ್ಲಿ ತಡೆಯುವಂತಿಲ್ಲ. ಹೈಕೋರ್ಟ್ ಆದೇಶ ಇದೆ. ನಮ್ಮಲ್ಲಿ ಬಲಿಪೀಠ ಇಲ್ಲ.ಹಾಗಾಗಿ ಪೊಲೀಸರು ಪಂಕ್ತಿ ಸೇವೆಗೆ ತೊಂದರೆ ಕೊಡಬಾರದು . ಜಿಲ್ಲಾ  ಎಸ್‌ಪಿ ಕವಿತಾ ಉತ್ತರಿಸಿ ಕಳೆದ ವರ್ಷ ಜಾತ್ರೆ ಬಹಳ ಯಶಸ್ವಿಯಾಗಿ ನಡೆದಿದೆ. ಪೊಲೀಸರಿಂದ ತೊಂದರೆ ಆಗಿಲ್ಲ  ಎಲ್ಲವೂ ಸಹ ಕಾನೂನಿನ ರೀತಿಯಲ್ಲಿ ಇರಬೇಕು ಕಾನೂನು ಮೀರಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಸಿದರು.