ಕೊಳ್ಳೇಗಾಲ: ತಾಲ್ಲೂಕಿನ ಸಿದ್ದಯ್ಯನಪುರ ಗ್ರಾಮದಲ್ಲಿ ದಲಿತ ನೀಲಗಾರರು ಕಂಡಾಯ ಹೊರುವ ಮೂಲಕ ಹೊಸ ಪದ್ಧತಿ ಅನುಸರಿಸಿ, ಸಮಾನತೆ ಸಂದೇಶ ಸಾರಿದರು.
‘ಈ ಹಿಂದೆ ದಲಿತರು ಕಂಡಾಯ ಹೊರುವ ಪದ್ಧತಿ ಇರಲಿಲ್ಲ. ಈ ಕುರಿತು ಹಲವಾರು ಬಾರಿ ದಲಿತ ಮುಖಂಡರು ಹಾಗೂ ಜನಪ್ರತಿನಿಧಿಗಳು ಚರ್ಚಿಸಿದ್ದರು. ಕಳೆದ ತಿಂಗಳು ಮತ್ತೆ ದಲಿತ ಮುಖಂಡರು, ಜನಪ್ರತಿನಿಧಿಗಳು ಕುರುಬನ ಕಟ್ಟೆಯಲ್ಲಿ ಸಭೆ ಸೇರಿದರು. ಕುರುಬನ ಕಟ್ಟೆ ಧರ್ಮಾಧಿಕಾರಿ ವರುಣರಾಜೇ ಅರಸ್ ಅವರ ಸಮ್ಮುಖದಲ್ಲಿ ಚರ್ಚಿಸಿ, ದಲಿತ ನೀಲಗಾರರಿಗೂ ಕುರುಬನ ಕಟ್ಟೆ ಕಂಡಾಯಗಳನ್ನು ಹೊರಲು ಅವಕಾಶ ಕಲ್ಪಿಸಿ ಎಂದು ಪಟ್ಟು ಹಿಡಿದರು. ಅದಕ್ಕೆ ಸಮ್ಮತಿಯೂ ಸಿಕ್ಕಿತು’ ಎಂದು ಮುಖಂಡರು ತಿಳಿಸಿದರು.
ಸಿದ್ದಯ್ಯನಪುರ ಗ್ರಾಮ ಪಂಚಾಯಿತಿ ಸದಸ್ಯ ಮುರಳೀಧರ ಅವರ ಮನೆಗೆ ಕುರುಬನಕಟ್ಟೆ ಕಂಡಾಯಗಳನ್ನು ಕಳುಹಿಸಲಾಯಿತು. ಶುಕ್ರವಾರ ಗ್ರಾಮದ ಸಮೀಪದಲ್ಲಿರುವ ಬ್ರಹ್ಮೇಶ್ವರ ದೇವಸ್ಥಾನದಲ್ಲಿ ಕಂಡಾಯಗಳಿಗೆ ಹೂವುಗಳಿಂದ ಅಲಂಕರಿಸಿ, ವಾದ್ಯಗೋಷ್ಠಿಗಳೊಂದಿಗೆ ಕಂಡಾಯಗಳನ್ನು ಗ್ರಾಮದ ಸಿದ್ದಪ್ಪಾಜಿ ದೇವಸ್ಥಾನ ತರಲಾಯಿತು. ಬಳಿಕ ಗ್ರಾಮದ ದಲಿತ ನೀಲಗಾರರು ಕಂಡಾಯಗಳನ್ನು ಹೊತ್ತು ಗ್ರಾಮದ ಬೀದಿಗಳಲ್ಲಿ ತೆರಳಿದರು. ಮಹಿಳೆಯರು ಮನೆಮನೆಗೂ ಹಣ್ಣು, ಕಾಯಿ ಸಲ್ಲಿಸಿ ಪೂಜೆ ಮಾಡಿಸಿದರು.
ಇದೇ ಮೊದಲು ದಲಿತರು ಕುರುಬನ ಕಟ್ಟೆ ಕಂಡಾಯ ಹೊರಲು ಅವಕಾಶ ಸಿಕ್ಕಿದ್ದರಿಂದ ಗ್ರಾಮದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಯಿತು. ಗ್ರಾಮದ ಪ್ರತಿ ಮನೆಯಲ್ಲೂ ಸಹ ಸಿಹಿ ಸೇರಿದಂತೆ ಇ ತಿಂಡಿ ತಿನಿಸುಗಳನ್ನು ಮಾಡಿ ಕಂಡಾಯದ ಹಬ್ಬವನ್ನು ಆಚರಿಸಿದರು.
ಗ್ರಾಮದ ಮುಖಂಡರು, ಯುವಕರು ಮಹಿಳೆಯರು ಕಡ್ಡಾಯ ಮೆರವಣಿಗೆ ಸಂದರ್ಭದಲ್ಲಿ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.