ADVERTISEMENT

ಕೊಳ್ಳೇಗಾಲ ನಗರಸಭೆ ಆಯುಕ್ತ ಅಮಾನತು

ಏಕ ನಿವೇಶನವನ್ನು ಬಹು ನಿವೇಶನಗಳನ್ನಾಗಿ ವಿಂಗಡಿಸಿ ಇ–ಸ್ವತ್ತು ನೀಡಿದ ಆರೋಪ

​ಪ್ರಜಾವಾಣಿ ವಾರ್ತೆ
Published 8 ನವೆಂಬರ್ 2020, 14:25 IST
Last Updated 8 ನವೆಂಬರ್ 2020, 14:25 IST
ನಾಗಶೆಟ್ಟಿ
ನಾಗಶೆಟ್ಟಿ   

ಚಾಮರಾಜನಗರ: ವರ್ಗಾವಣೆಯಾದ ನಂತರ ಡಿಜಿಟಲ್ ಕೀ ಉಪಯೋಗಿಸಿ ನಗರ ಪ್ರಾಧಿಕಾರದ ಅನುಮತಿ ಪಡೆಯದೇಏಕ ನಿವೇಶನವನ್ನು ಬಹು ನಿವೇಶನಗಳನ್ನಾಗಿ ವಿಂಗಡಿಸಿ ಇ–ಸ್ವತ್ತು ನೀಡಿದ ಆರೋಪದಲ್ಲಿ ಕೊಳ್ಳೇಗಾಲ ನಗರಸಭೆ ಆಯುಕ್ತ ನಾಗಶೆಟ್ಟಿ ಅವರನ್ನು ಸೇವೆಯಿಂದ ಅಮಾನತು ಮಾಡಿ ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ.ಕಾವೇರಿ ಅವರು ಆದೇಶ ಹೊರಡಿಸಿದ್ದಾರೆ.

ಈ ಆದೇಶದ ಅನುಸಾರ ನಾಗಶೆಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಕರ್ತವ್ಯದಿಂದ ಬಿಡುಗಡೆಗೊಳಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ಆದೇಶ ಹೊರಡಿಸಿದ್ದಾರೆ.ಕೊಳ್ಳೇಗಾಲ ನಗರಸಭೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಅಲ್ತಾಫ್‌ ಅಹ್ಮದ್ ಅವರಿಗೆ ಪ್ರಭಾರಿಯಾಗಿ ಆಯುಕ್ತರ ಹುದ್ದೆಯನ್ನು ನಿರ್ವಹಿಸುವಂತೆ ಅವರು ಆದೇಶದಲ್ಲಿ ಸೂಚಿಸಿದ್ದಾರೆ.

ಕೊಳ್ಳೇಗಾಲ ನಗರ ಸಭೆಯ ವಾರ್ಡ್ ಸಂಖ್ಯೆ 18 ರ ಬಡಾವಣೆಗೆ ಸೇರಿದ ಖಾತೆ ಸಂಖ್ಯೆ 3815ರ ಏಕ ನಿವೇಶನವನ್ನು ನಗರ ಯೋಜನಾ ಪ್ರಾಧಿಕಾರದ ಅನುಮತಿ ಪಡೆಯದೇ ನಾಗಶೆಟ್ಟಿ ಅವರು ವರ್ಗಾವಣೆಯಾದ ನಂತರ ಡಿಜಿಟಲ್ ಕೀ ಉಪಯೋಗಿಸಿ ಬಹು ನಿವೇಶನಗಳನ್ನಾಗಿ ವಿಂಗಡಿಸಿ ಇ-ಸ್ವತ್ತುಗಳನ್ನು ನೀಡಿ ಅಕ್ರಮ ಎಸಗಿದ್ದಾರೆ ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕಿ ಬಿ.ಬಿ.ಕಾವೇರಿ ಅವರು ಆದೇಶದಲ್ಲಿ ಹೇಳಿದ್ದಾರೆ.

ADVERTISEMENT

ಮೂಲತಃ ಸಮುದಾಯ ಸಂಘಟನಾಧಿಕಾರಿ ಹುದ್ದೆಯನ್ನು ಹೊಂದಿರುವ ನಾಗಶೆಟ್ಟಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತು ಮಾಡಲಾಗಿದ್ದು, ಅವರ ಹುದ್ದೆಯನ್ನು ರಾಯಚೂರು ಜಿಲ್ಲೆಯ ದೇವದುರ್ಗ ಪುರಸಭೆಯಲ್ಲಿ ಖಾಲಿ ಇರುವ ಸಮುದಾಯ ಸಂಘಟನಾಧಿಕಾರಿ ಹುದ್ದೆಗೆ ತೋರಿಸಿ ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.