ಹನೂರು: ಕೋವಿಡ್–19ನಿಂದಾಗಿ ಶನಿವಾರ ಕೊಳ್ಳೇಗಾಲದ ಉಪವಿಭಾಗ ಆಸ್ಪತ್ರೆಯಲ್ಲಿ ಮೃತಪಟ್ಟ ವ್ಯಕ್ತಿಯ ಊರು ಕೊಂಗರಹಳ್ಳಿಯಲ್ಲಿ ಈಗ ನೀರವಮೌನ. ಗ್ರಾಮದ ಜನರಲ್ಲಿ ಭಯ ಆವರಿಸಿಕೊಂಡಿದ್ದು, ಯಾರೂ ಮನೆಯಿಂದ ಹೊರ ಬರುತ್ತಿಲ್ಲ.
ಬಡಾವಣೆ ಸೀಲ್ಡೌನ್: ಮೃತಪಟ್ಟ ವ್ಯಕ್ತಿ ಕೊರೊನಾ ಸೋಂಕು ದೃಢಪಡುತ್ತಿದ್ದಂತೆಯೇ ಕಂದಾಯ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಕೊಂಗರಹಳ್ಳಿ ಗ್ರಾಮಕ್ಕೆ ತೆರಳಿ ಅವರ ಮನೆ ಹಾಗೂ ಸುತ್ತಮುತ್ತಲಿನ ಪ್ರದೇಶವನ್ನು ಸೀಲ್ಡೌನ್ ಮಾಡಿ ಕಂಟೈನ್ಮೆಂಟ್ ವಲಯ ಎಂದು ಘೋಷಿಸಿದ್ದಾರೆ. ಅಲ್ಲಿ ಸಾರ್ವಜನಿಕರ ಓಡಾಟವನ್ನು ನಿಷೇಧಿಸಲಾಗಿದೆ.
ಭಯದ ವಾತಾವರಣ: ಗ್ರಾಮದ ನಿವಾಸಿ ಕೋವಿಡ್ನಿಂದಾಗಿ ಪ್ರಾಣ ಕಳೆದುಕೊಂಡಿರುವುದು ಗ್ರಾಮಸ್ಥರಲ್ಲಿ ಭಯ ಉಂಟು ಮಾಡಿದೆ.ಗ್ರಾಮದಲ್ಲಿ ಸ್ವಯಂ ಘೋಷಿತ ಲಾಕ್ಡೌನ್ ಸ್ಥಿತಿ ಇದೆ. ಮನೆಯಿಂದ ಯಾರೂ ಹೊರಗಡೆ ಬರುತ್ತಿಲ್ಲ. ಸೀಲ್ಡೌನ್ ಮಾಡಿದ ಪ್ರದೇಶದಲ್ಲಿ ಮನೆಯವರೆಲ್ಲರೂ ಬಾಗಿಲು ಹಾಕಿಕೊಂಡು ಒಳಗಡೆ ಕೂತಿದ್ದಾರೆ. ಮಾತಿಗೂ ಸಿಗುತ್ತಿಲ್ಲ.
ಆ ವ್ಯಕ್ತಿಗೆ ಸೋಂಕು ಹೇಗೆ ತಗುಲಿತು ಎಂಬುದು ಇನ್ನೂ ದೃಢಪಟ್ಟಿಲ್ಲ. ಅವರ ಮಗ ಮೈಸೂರಿಗೆ ಹೋಗಿ ಬರುತ್ತಿದ್ದ ಎಂಬ ಮಾಹಿತಿ ಸಿಕ್ಕಿದೆ ಎಂದು ಆರೋಗ್ಯ ಇಲಾಖೆಯ ಅಧಿಕಾರಿಗಳು ಹೇಳುತ್ತಿದ್ದಾರೆ.ಇವರು ಗ್ರಾಮದಲ್ಲಿ ಚಹಾದ ಅಂಗಡಿ ನಡೆಸುತ್ತಿದ್ದರು. ಅರೋಗ್ಯ ಸರಿ ಇಲ್ಲದ ಕಾರಣದಿಂದ ಕೆಲವು ದಿನಗಳಿಂದ ಅಂಗಡಿ ಮುಚ್ಚಿದ್ದರು ಎಂದು ಗೊತ್ತಾಗಿದೆ. ಕುಟುಂಬಕ್ಕೆ ಇವರೇ ಆಧಾರವಾಗಿದ್ದರು.
ಮೃತಪಟ್ಟ ಬಳಿಕ ಅವರಲ್ಲಿ ಕೋವಿಡ್–19 ಇರುವುದು ಪತ್ತೆಯಾದ ನಂತರ, ಸಂಬಂಧಿಕರು, ಊರಿನವರು ಅವರ ಅಂತಿಮ ದರ್ಶನಕ್ಕೂ ಬಂದಿಲ್ಲ. ಕುಟುಂಬದ ಸದಸ್ಯರು ಮನೆ ಕ್ವಾರಂಟೈನ್ನಲ್ಲಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.