ಚಾಮರಾಜನಗರ: ಕೆಎಸ್ಆರ್ಟಿಸಿ ನೌಕರರ ಮುಷ್ಕರ 13ನೇ ದಿನವೂ ಮುಂದುವರಿದಿರುವ ನಡುವೆಯೇ, ಚಾಮರಾಜನಗರ ವಿಭಾಗದಲ್ಲಿ 51 ಟ್ರೈನಿಗಳನ್ನು ಕೆಲಸದಿಂದ ವಜಾ ಮಾಡಲಾಗಿದೆ.
ಸೋಮವಾರ 600 ಚಾಲಕರು, ನಿರ್ವಾಹಕರು ಹಾಗೂ 130 ಮಂದಿ ಮೆಕ್ಯಾನಿಕ್ಗಳು ಕರ್ತವ್ಯಕ್ಕೆ ಹಾಜರಾಗಿದ್ದು, 232 ಬಸ್ಗಳು ಸಂಚರಿಸಿವೆ.
ಭಾನುವಾರಕ್ಕೆ ಹೋಲಿಸಿದರೆ ಸೋಮವಾರ ಕಡಿಮೆ ಬಸ್ಗಳು ಓಡಾಡಿವೆ. ಭಾನುವಾರ 299 ಬಸ್ಗಳು ರಸ್ತೆಗಿಳಿದಿದ್ದವು.
‘ಟ್ರೈನಿಗಳಿಗೆ ಕರ್ತವ್ಯಕ್ಕೆ ಹಾಜರಾಗುವಂತೆ ಈಗಾಗಲೇ ನೋಟಿಸ್ ನೀಡಲಾಗಿತ್ತು. ಹಾಗಿದ್ದರೂ ಬಂದಿರಲಿಲ್ಲ. 46 ಚಾಲಕ ಕಂ ನಿರ್ವಾಹಕರು, ಮೂರು ಚಾಲಕರು ಹಾಗೂ ಒಬ್ಬರು ಮೆಕ್ಯಾನಿಕ್ ಸೇರಿದಂತೆ 51 ಮಂದಿಯನ್ನು ಕೆಲಸದಿಂದ ವಜಾ ಮಾಡಲಾಗಿದೆ’ ಎಂದು ಕೆಎಸ್ಆರ್ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರೊಷನರಿಗಳ ವಿರುದ್ಧವೂ ಕ್ರಮದ ಎಚ್ಚರಿಕೆ: ‘ಪ್ರೊಬೇಷನರಿ ನೌಕರರಿಗೂ ಕರ್ತವ್ಯಕ್ಕೆ ಹಾಜರಾಗುವಂತೆ ನೋಟಿಸ್ ನೀಡಿದ್ದೇವೆ. ಅವರು ಗೈರು ಹಾಜರಿಯಾಗುವುದನ್ನು ಮುಂದುವರಿಸಿದರೆ ಅವರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.