ಯಳಂದೂರು:ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದಲ್ಲಿ ಈ ಬಾರಿಯೂ ನಿರೀಕ್ಷಿಸಿದಷ್ಟು ಮಳೆ ಆಗಿಲ್ಲ.ಇದರ ಪರಿಣಾಮ ಪ್ರಮುಖ ವಾಣಿಜ್ಯ ಬೆಳೆ ಕಾಳುಮೆಣಸಿನ ಮೇಲೂಆಗಿದೆ. ಮೂರ್ನಾಲ್ಕು ದಿನಗಳಿಂದ ಸುರಿಯುತ್ತಿರುವಜಿಟಿಜಿಟಿ ಮಳೆಯಿಂದ ಶೀತ ಹೆಚ್ಚಾಗಿ ಮೆಣಸಿನ ಹೂಗೆರೆ ಉದುರಲು ಕಾರಣವಾಗಿದೆ. ಸೋನೆ ಮಳೆ ಇದೇ ರೀತಿ ಮುಂದುವರಿದರೆ ಕಾಳುಮೆಣಸಿನ ಇಳುವರಿ ಕುಸಿಯಲಿದೆ ಎಂಬ ಆತಂಕ ಬೆಳೆಗಾರರನ್ನು ಕಾಡುತ್ತಿದೆ.
ಸಾಮಾನ್ಯವಾಗಿ ಮೇ ಮತ್ತು ಜೂನ್ ತಿಂಗಳಲ್ಲಿ ಉತ್ತಮ ಮಳೆ ಸುರಿದರೆ ಮೆಣಸಿನ ಬಳ್ಳಿಗಳುಮೈದುಂಬಿಕೊಂಡು ಜುಲೈ ಅಂತ್ಯದ ವೇಳೆಗೆ ಹೂಗೆರೆಗಳನ್ನು ಬಿಡುತ್ತವೆ. ಆದರೆ, ಈವರ್ಷ ಕಡಿಮೆ ಮಳೆ ಬಿದ್ದಿದೆ. ಆಗಸ್ಟ್ನಲ್ಲಿ 92 ಮಿ.ಮೀ ಮಳೆ ಆಗಿದೆ.ಜೂನ್ ತಿಂಗಳಲ್ಲಿ ಹೂಗೆರೆಗಳು ಕಾಣಿಸಿಕೊಳ್ಳಲಿಲ್ಲ. ಜುಲೈ ತಿಂಗಳಲ್ಲಿ ತುಂತುರುಮಳೆ ಸುರಿದಿದ್ದು, ಹೂಗೆರೆಗಳು ಒಂದೊಂದಾಗಿ ಬಳ್ಳಿಯಲ್ಲಿ ಮೂಡಿದವು. ಈಗ ಮಳೆಗಿಂತಶೀತವೇ ಹೆಚ್ಚಾಗಿದೆ. ಇದರಿಂದ ತಡವಾಗಿ ಬಿಡುತ್ತಿರುವ ಹೂಗೆರೆಗಳು ಉದುರಲು ಆರಂಭಿಸಿವೆ. ಹೀಗಾಗಿ ಶೇ 50ಕ್ಕೂ ಹೆಚ್ಚಿನ ಫಸಲು ಕೈಸೇರುವುದಿಲ್ಲ ಎನ್ನುವ ಆತಂಕಬೆಳೆಗಾರರನ್ನು ಕಾಡಿದೆ.
‘ಕಳೆದ ವರ್ಷಾಂತ್ಯದಲ್ಲಿ ಸುರಿದ ಮಳೆಯಿಂದಾಗಿ ಮೆಣಸಿನ ಬಳ್ಳಿಗಳು ಕೊಳೆರೋಗಕ್ಕೆ ನಲುಗಿದ್ದವು. ಉಳಿದ ಬಳ್ಳಿಗಳಲ್ಲಿ ಫಸಲು ಕೂಡ ನೆಲಕ್ಕೆ ಉದುರಿತ್ತು. ಈ ವರ್ಷಅಳಿದುಳಿದ ಮೆಣಸಿನಲ್ಲಿ ಉತ್ತಮ ಇಳುವರಿ ನಿರೀಕ್ಷಿಸಿದ್ದೆವು. ಆದರೆ, ಸಕಾಲದಲ್ಲಿ ಮಳೆಬರಲಿಲ್ಲ. ಈಗ ಜಿಟಿಜಿಟಿ ಮಳೆಯಾಗುತ್ತಿದ್ದು, ತೋಟದ ತುಂಬ ಮಂಜು ಆವರಿಸಿದೆ’ ಎಂದು ಬೆಳೆಗಾರ ನಾಗೇಂದ್ರ ‘ಪ್ರಜಾವಾಣಿ’ಗೆ ತಿಳಿಸಿದರು.
‘ಜುಲೈನಲ್ಲಿ ಹೂಗೆರೆಗಳು ಮೂಡಿದ್ದವು. ಈ ಸಮಯದಲ್ಲಿ ಸರಿಯಾದ ವಾತಾವರಣ ದೊರೆತುಪರಾಗಸ್ಪರ್ಶ ಆಗಿದ್ದರೆ, ಆಗಸ್ಟ್ ವೇಳೆಗೆ ಉತ್ತಮ ಫಸಲಿನ ನಿರೀಕ್ಷೆ ಮಾಡಬಹುದಿತ್ತು.ಆದರೆ, ಶೀತ ವಾತಾವರಣ 3 ದಿನ ಮುಂದುವರಿದರೆ ಅರ್ಧ ಫಸಲು ಕೈಸೇರದು’ ಎನ್ನುತ್ತಾರೆಮೆಣಸು ಕೃಷಿಕರು.
ಬೆಲೆ, ಮಳೆ ಇಳಿಕೆ?:‘ಕಾಳುಮೆಣಸಿನ ಬೆಲೆ ಈಗಾಗಲೇ ಪಾತಾಳ ಮುಟ್ಟಿದೆ. ಕಂಗಾಲಾಗಿರುವ ಬೆಳೆಗಾರರಿಗೆಏಪ್ರಿಲ್–ಮೇ ತಿಂಗಳುಮುಂಗಾರು ಕೈಕೊಟ್ಟಿದೆ. ಆಗಸ್ಟ್ 4ರಂದು 1 ಮೀ.ಮೀ, 5ರಂದು9, 6ರಂದು 30, 7ರಂದು 20 ಹಾಗೂ 8ರಂದು 32 ಮಿ.ಮೀ ಒಟ್ಟಾರೆ 92 ಮಿ.ಮೀಮಳೆಯಾಗಿದೆ. ಕೆರೆ–ಕಟ್ಟೆಗೆ ನಿರೀಕ್ಷಿಸಿದ ನೀರು ಹರಿದಿಲ್ಲ. ಸೋನೆ ಮಳೆ ಮಾತ್ರಕಾಣಿಸಿಕೊಂಡಿದೆ’ ಎಂದು ವಿಜಿಕೆಕೆಯಲ್ಲಿ ಮಳೆ ಮಾಹಿತಿ ಸಂಗ್ರಹಿಸುವ ಶಿಕ್ಷಕ ರಾಮಚಾರಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.