ADVERTISEMENT

ಲಿಂಗಾಯತರಿಗೆ ಮೀಸಲಾತಿ ಹೆಚ್ಚಳ: ಸಂಭ್ರಮಾಚರಣೆ

​ಪ್ರಜಾವಾಣಿ ವಾರ್ತೆ
Published 26 ಮಾರ್ಚ್ 2023, 16:30 IST
Last Updated 26 ಮಾರ್ಚ್ 2023, 16:30 IST
ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸ್ವಾಗತಿಸಿ ಲಿಂಗಾಯತ ಸಮುದಾಯದವರು ಭಾನುವಾರ ಚಾಮರಾಜನಗರದಲ್ಲಿ ಸಂಭ್ರಮಾಚರಣೆ ಮಾಡಿದರು
ಮೀಸಲಾತಿ ಹೆಚ್ಚಳ ಮಾಡಿರುವುದನ್ನು ಸ್ವಾಗತಿಸಿ ಲಿಂಗಾಯತ ಸಮುದಾಯದವರು ಭಾನುವಾರ ಚಾಮರಾಜನಗರದಲ್ಲಿ ಸಂಭ್ರಮಾಚರಣೆ ಮಾಡಿದರು   

ಚಾಮರಾಜನಗರ: ಲಿಂಗಾಯತರಿಗೆ ನೀಡುತ್ತಿದ್ದ ಮೀಸಲಾತಿ ಪ್ರಮಾಣವನ್ನು ಶೇ 7ರಷ್ಟು ನಿಗದಿಪಡಿಸಿ, ಹಿಂದುಳಿದ ವರ್ಗಗಳ ಪಟ್ಟಿಯಲ್ಲಿ 2ಡಿಗೆ ಲಿಂಗಾಯತರನ್ನು ಸೇರ್ಪಡೆ ಮಾಡಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಸ್ವಾಗತಿಸಿ ನಗರದಲ್ಲಿ ಭಾನುವಾರ ಲಿಂಗಾಯತ ಸಮುದಾಯದವರು ಸಂಭ್ರಮಾಚರಣೆ ಮಾಡಿದರು.

ಗೌಡ ಲಿಂಗಾಯತ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಅಮ್ಮನಪುರ ಮಲ್ಲೇಶ್ ನೇತೃತ್ವದಲ್ಲಿ ನಗರದ ಸಿದ್ಧಮಲ್ಲೇಶ್ವರ ವಿರಕ್ತ ಮಠದ ಮುಂದೆ ಸೇರಿದ ಮುಖಂಡರು, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದರು.

ಮೀಸಲಾತಿ ಹೆಚ್ಚಳದ ಹೋರಾಟ ನೇತೃತ್ವದ ವಹಿಸಿದ್ದ ಬಸವಜಯ ಮೃತ್ಯುಂಜಯಸ್ವಾಮಿ, ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ್ ಪರ ಹಾಗೂ ಮೀಸಲಾತಿಯನು ಜಾರಿ ಮಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪರ ಘೋಷಣೆಗಳನ್ನು ಕೂಗಿದರು.

ADVERTISEMENT

ಅಮ್ಮನಪುರ ಮಲ್ಲೇಶ್ ಮಾತನಾಡಿ, ‘ಪಂಚಮಸಾಲಿ ಸಮಾಜದ ಹಾಗೂ ಕೂಡಲಸಂಗಮ ಪೀಠದ ಧರ್ಮಗುರುಗಳಾದ ಬಸವಜಯ ಮೃತ್ಯುಂಜಯ ಸ್ವಾಮೀಜಿಯವರ ನೇತೃತ್ವದಲ್ಲಿ ಹಾಗೂ ಶಾಸಕರಾದ ಬಸನಗೌಡ ಪಾಟೀಲ ಯತ್ನಾಳ, ವಿಜಯಾನಂದ ಕಾಶಪ್ಪನವರ್ ಸೇರಿದಂತೆ ಅನೇಕ ನಾಯಕರ ನಾಯಕತ್ವದಲ್ಲಿ ನಡೆದ ಹೋರಾಟಕ್ಕೆ ಕೊನೆಗೂ ಜಯ ದೊರೆತಿದೆ. ಸ್ವಾಮೀಜಿಗಳು ಎರಡು ವರ್ಷಗಳಿಂದಲೂ ಪಾದಯಾತ್ರೆ ಧರಣಿ ವಿಧಾನಸೌಧ ಮುತ್ತಿಗೆಯಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಂಡ ಪರಿಣಾಮವಾಗಿ ರಾಜ್ಯ ಸರ್ಕಾರ ಕೊನೆಗೂ ಮೀಸಲಾತಿಯನ್ನು ಮಾರ್ಪಡಿಸಿ ಲಿಂಗಾಯಿತರಿಗೆ 3ಬಿ ಬದಲಿಗೆ 2ಡಿ ರಚಿಸಿ ಮೀಸಲಾತಿಯನ್ನು ಶೇಕಡ 5ರಿಂದ 7ಕ್ಕೆ ಏರಿಕೆ ಮಾಡುವ ಮೂಲಕ ಬಡ ಲಿಂಗಾಯತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ’ ಎಂದರು.

‘ಈ ಮೀಸಲಾತಿ ಹೆಚ್ಚಳದಿಂದ ಬಡ ಲಿಂಗಾಯತರ ವಿದ್ಯಾಭ್ಯಾಸ ಹಾಗೂ ಉದ್ಯೋಗಕ್ಕಾಗಿ ಅನುಕೂಲ ಮಾಡಿಕೊಡುವುದರ ಮೂಲಕ ರಾಜ್ಯ ಸರ್ಕಾರ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಲಿಂಗಾಯತರ ಮೀಸಲಾತಿ ಹೋರಾಟ ಫಲವಾಗಿ ಎಲ್ಲ ವರ್ಗದವರ ಜನರಿಗೆ ನ್ಯಾಯ ದೊರೆತಿದೆ’ ಎಂದರು.

‘ಕೆಲವೇ ದಿನಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಆಹ್ವಾನಿಸಿ, ಲಿಂಗಾಯತರು ದೊಡ್ಡ ಮಟ್ಟದ ಸಮಾವೇಶವನ್ನು ಸ್ವಾಮೀಜಿ ನೇತೃತ್ವದಲ್ಲಿ ಬೆಂಗಳೂರಿನಲ್ಲಿ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯಿಂದ ಸಾವಿರಾರು ಸಂಖ್ಯೆಯಲ್ಲಿ ಸಮುದಾಯದ ಬಂಧುಗಳು ಹೋಗಬೇಕು’ ಎಂದು ಮಲ್ಲೇಶ್ ಮನವಿ ಮಾಡಿದರು.

ಎಪಿಎಂಸಿ ಅಧ್ಯಕ್ಷ ಮನೋಜ್ ಪಟೇಲ್, ಮುಖಂಡರಾದ ಕುದೇರು ರಾಜೇಂದ್ರ, ಬೇಡರಪುರ ಬಸವಣ್ಣ, ಆರ್.ವಿ. ಮಹದೇವಸ್ವಾಮಿ, ದಯಾನಿಧಿ, ಭೋಗಾಪುರ ಕುಮಾರಸ್ವಾಮಿ, ನಟರಾಜು, ಕೊತ್ತಲವಾಡಿ ಕುಮಾರ್, ಗೌಡಿಕೆ ನಾಗೇಶ್, ವೀರನಪುರ ಮಹಾಲಿಂಗಪ್ಪ, ಕಾಳನಹುಂಡಿ ಮಹದೇವಸ್ವಾಮಿ, ನಾಗೇಂದ್ರ, ದಡದಹಳ್ಳಿ ಮಹದೇವಪ್ಪ, ಕಾವುದವಾಡಿ ಗುರು, ಮರಿಯಾಲ ಮಹೇಶ್, ಹಿರಿಬೇಗೂರು ಗುರುಸ್ವಾಮಿ, ತೊರವಳ್ಳಿ ಕುಮಾರ್, ಕಾಗಲವಾಡಿ ಮಹೇಶ್, ಮಹದೇವಸ್ವಾಮಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.