ADVERTISEMENT

ಮಾದಪ್ಪನ ಭಕ್ತರ ಪಾದಯಾತ್ರೆಗೆ ಸಮಯ ನಿಗದಿ

ತಾಳುಬೆಟ್ಟದಲ್ಲಿ ವಾಸ್ತವ್ಯಕ್ಕೆ ವ್ಯವಸ್ಥೆ; ಭದ್ರತೆಗೆ ಸಿಬ್ಬಂದಿ; ಗಸ್ತು ಬಲಪಡಿಸಲು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌

​ಪ್ರಜಾವಾಣಿ ವಾರ್ತೆ
Published 23 ಜನವರಿ 2026, 2:32 IST
Last Updated 23 ಜನವರಿ 2026, 2:32 IST
ಚಿರತೆ ದಾಳಿಯಿಂದ ಮೃತಪಟ್ಟ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಮೃತ ಪ್ರವೀಣ್ ಅವರ ತಾಯಿ ಸುಶೀಲಮ್ಮ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ₹ 5 ಲಕ್ಷದ ಪರಿಹಾರ ಚೆಕ್ ವಿತರಿಸಿದರು
ಚಿರತೆ ದಾಳಿಯಿಂದ ಮೃತಪಟ್ಟ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಮೃತ ಪ್ರವೀಣ್ ಅವರ ತಾಯಿ ಸುಶೀಲಮ್ಮ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ₹ 5 ಲಕ್ಷದ ಪರಿಹಾರ ಚೆಕ್ ವಿತರಿಸಿದರು   

ಚಾಮರಾಜನಗರ: ‘ಮಲೆ ಮಹದೇಶ್ವರನ ಬೆಟ್ಟಕ್ಕೆ ತೆರಳುವ ಭಕ್ತರ ಸುರಕ್ಷತೆಯ ದೃಷ್ಟಿಯಿಂದ ಪಾದಯಾತ್ರೆಗೆ ಸಮಯ ನಿಗದಿ ಮಾಡಬೇಕು, ತಾಳುಬೆಟ್ಟದಿಂದ ಮಾದಪ್ಪನ ಸನ್ನಿಧಿವರೆಗೂ ಅರಣ್ಯ ಇಲಾಖೆ, ಗೃಹರಕ್ಷಕ ದಳ ಹಾಗೂ ಮಲೆ ಮಹದೇಶ್ವರ ಅಭಿವೃದ್ಧಿ ಪ್ರಾಧಿಕಾರದ ಸಿಬ್ಬಂದಿ ನಿಯೋಜನೆ ಮಾಡಬೇಕು. ನಿರಂತರ ಗಸ್ತು ನಡೆಸಬೇಕು’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಸೂಚನೆ ನೀಡಿದರು.

ತಾಳುಬೆಟ್ಟದ ಬಳಿ ಚಿರತೆ ದಾಳಿಯಲ್ಲಿ ಭಕ್ತರೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ ಗುರುವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸಭೆ ನಡೆಸಿದ ಉಸ್ತುವಾರಿ ಸಚಿವರು, ಅರಣ್ಯ ಇಲಾಖೆ ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

‘ಮಹದೇಶ್ವರನ ಬೆಟ್ಟಕ್ಕೆ ಬರುವ ಭಕ್ತರ ಮೇಲೆ ಅತಿಯಾದ ನಿರ್ಬಂಧ ಹೇರಲಾಗುವುದಿಲ್ಲ. ಭಕ್ತರ ನಂಬಿಕೆ, ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗದಂತೆ ಪಾದಯಾತ್ರೆಯಲ್ಲಿ ಬರುವ ಭಕ್ತರ ಸುರಕ್ಷತೆಗೆ ಒತ್ತು ನೀಡಬೇಕು. ತಾಳುಬೆಟ್ಟದಲ್ಲಿರುವ ಕಂದಾಯ ಇಲಾಖೆಗೆ ಸೇರಿರುವ ಜಾಗದಲ್ಲಿ ರಾತ್ರಿ ಭಕ್ತರ ವಾಸ್ತವ್ಯಕ್ಕೆ ತೆರೆದ ಶೆಡ್‌ಗಳು ಹಾಗೂ ಶೌಚಾಲಯ, ಸ್ನಾನಗೃಹಗಳನ್ನು ನಿರ್ಮಾಣ ಮಾಡಬೇಕು’ ಎಂದು ಸೂಚಿಸಿದರು.

ADVERTISEMENT

ಪಾದಯಾತ್ರೆಗೆ ಸಮಯ ನಿಗದಿ: ಪಿಸಿಸಿಎಫ್‌ ವಿಶ್ವಜಿತ್ ಮಿಶ್ರಾ ಮಾತನಾಡಿ ‘ಸಾಮಾನ್ಯವಾಗಿ ಬೆಳಗಿನ ಜಾವ 4 ರಿಂದ 6ರವರೆಗೆ ಹಾಗೂ ಸಂಜೆ 5 ರಿಂದ 7ಗಂಟೆಯ ಅವಧಿಯಲ್ಲಿ ಕಾಡು ಪ್ರಾಣಿಗಳ ಸಂಚಾರ ಹೆಚ್ಚಾಗಿರುವುದರಿಂದ ಈ ಅವಧಿಯಲ್ಲಿ ಕಾಡಿನೊಳಗೆ ಸಂಚಾರ ಅಪಾಯಕಾರಿಯಾಗಿದೆ. ಹಾಗಾಗಿ, ಪಾದಯಾತ್ರೆಗೆ ನಿರ್ದಿಷ್ಟ ಸಮಯ ನಿಗದಿ ಮಾಡಬೇಕು. ಬೆಳಿಗ್ಗೆ 6 ಅಥವಾ 7 ರಿಂದ ಸಂಜೆ 4 ಅಥವಾ 5ರವರೆಗೆ ಪಾದಯಾತ್ರೆ ಮಾಡಲು ಸಮಯ ನಿಗದಿ ಮಾಡಬಹುದು’ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

 ಎರಡೂವರೆ ತಿಂಗಳಿನಿಂದ ಮಾನವ ಪ್ರಾಣಿ ಸಂಘರ್ಷ ಹೆಚ್ಚಾಗಿದ್ದು ಅರಣ್ಯ ಇಲಾಖೆ ಅಗತ್ಯ ಕ್ರಮಗಳನ್ನು ತಡೆಗೆದುಕೊಂಡಿದೆ. ಮಲೆ ಮಹದೇಶ್ವರ ದೇವಸ್ಥಾನಕ್ಕೆ ಬರುವ ಭಕ್ತರ ಸುರಕ್ಷತೆಗೂ ಒತ್ತು ನೀಡಲಿದ್ದು ತಾಳುಬೆಟ್ಟದಿಂದ ದೇವಸ್ಥಾನದವರೆಗೂ ಸಿಬ್ಬಂದಿ ನಿಯೋಜಿಸಿ, ಗಸ್ತು ವ್ಯವಸ್ಥೆಯನ್ನು ಬಲಪಡಿಸಲಾಗುವುದು ಎಂದು ಭರವಸೆ ನೀಡಿದರು.

ಚಾಮರಾಜನಗರ ವೃತ್ತದ ಪಿಸಿಎಫ್‌ ಮಾಲತಿ ಪ್ರಿಯಾ ಮಾತನಾಡಿ, ‘ಅರಣ್ಯ ಇಲಾಖೆಯಲ್ಲಿ ಅಧಿಕಾರಿಗಳ ಹಾಗೂ ಸಿಬ್ಬಂದಿ ಕೊರತೆ ಗಂಭೀರವಾಗಿದ್ದು , ಪಾದಯಾತ್ರೆಯಲ್ಲಿ ಬರುವ ಭಕ್ತರಿಗೆ ಭದ್ರತೆ ಒದಗಿಸುವಷ್ಟು ಸಿಬ್ಬಂದಿ ಇಲಾಖೆಯಲ್ಲಿ ಇಲ್ಲ. ಶಿವರಾತ್ರಿ ಹಾಗೂ ದೀಪಾವಳಿಯ ಸಂದರ್ಭ ಹೊರತುಪಡಿಸಿ ಉಳಿದ ಅವಧಿಯಲ್ಲಿ ಪಾದಯಾತ್ರೆಗೆ ನಿರ್ಬಂಧ ಹೇರಬೇಕು’ ಎಂದು ಸೂಚಿಸಿದರು.

‘ಪಾದಯಾತ್ರೆ ಸಾಗುವ ಮಾರ್ಗದಲ್ಲಿ ಪ್ರತಿ ಕಿ.ಮೀಗೆ ಐವರು ಸಿಬ್ಬಂದಿ ನಿಯೋಜನೆ ಅಗತ್ಯವಿದ್ದು ವಾಚರ್ಸ್‌ಗಳ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು. ದೇವಸ್ಥಾನದ ಅಭಿವೃದ್ಧಿ ಪ್ರಾಧಿಕಾರದಿಂದ ಸಿಬ್ಬಂದಿ ನಿಯೋಜಿಸಬೇಕು, ಪ್ರಾಣಿಗಳ ಚಲನ ವಲನಗಳ ಮೇಲೆ ನಿಗಾ ಇರಿಸಲು ಮೂರು ಥರ್ಮಲ್ ಡ್ರೋನ್‌ಗಳನ್ನು ಇಲಾಖೆಗೆ ನೀಡಬೇಕು’ ಎಂದು ಬೇಡಿಕೆ ಇರಿಸಿದರು.

ಸ್ಪಂದಿಸಿದ ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚುವರಿ ಸಿಬ್ಬಂದಿ ನಿಯೋಜನೆಗೆ ಪ್ರಾಧಿಕಾರಕ್ಕೆ ಸೂಚಿಸಲಾಗುವುದು, ಜಿಲ್ಲಾಡಳಿತ ಹೋಂ ಗಾರ್ಡ್ಸ್‌ಗಳ ವ್ಯವಸ್ಥೆ ಮಾಡಬೇಕು. ಥರ್ಮಲ್ ಡ್ರೋನ್‌ ಕ್ಯಾಮೆರಾಗಳ ಖರೀದಿಗೆ ತುರ್ತು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಜಿಲ್ಲಾಧಿಕಾರಿ ಶ್ರೀರೂಪಾ, ಚಾಮರಾಜನಗರ ವೃತ್ತದ ಪಿಸಿಎಫ್‌ ಮಾಲತಿ ಪ್ರಿಯಾ, ಜಿಲ್ಲಾ ಪಂಚಾಯಿತಿ ಸಿಇಒ ಮೋನಾ ರೋತ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ಮುತ್ತುರಾಜ್‌, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್‌ ಭಾಸ್ಕರ್‌ ಹಾಗೂ ಎಸಿಎಫ್‌ಗಳು ಸಭೆಯಲ್ಲಿ ಇದ್ದರು.

ಮೃತರ ಕುಟುಂಬಕ್ಕೆ ಚೆಕ್ ವಿತರಣೆ

ಚಿರತೆ ದಾಳಿಯಿಂದ ಮೃತಪಟ್ಟ ಮಂಡ್ಯ ಜಿಲ್ಲೆಯ ಚೀರನಹಳ್ಳಿ ಗ್ರಾಮದ ಮೃತ ಪ್ರವೀಣ್ ಅವರ ತಾಯಿ ಸುಶೀಲಮ್ಮ ಅವರಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ₹ 5 ಲಕ್ಷದ ಪರಿಹಾರ ಚೆಕ್ ವಿತರಿಸಿದರು. ‘ಪ್ರಾಥಮಿಕ ಹಂತದ ಪರಿಹಾರ ಮಾತ್ರ ನೀಡಲಾಗಿದ್ದು ಉಳಿಕೆ ಹಣವನ್ನು 15 ದಿನಗಳೊಳಗೆ ನೇರವಾಗಿ ಸಂತ್ರಸ್ತರ ಬ್ಯಾಂಕ್‌ ಖಾತೆಗೆ ಜಮೆ ಮಾಡಲಾಗುವುದು’ ಎಂದು ತಿಳಿಸಿದರು.

ಜನರ ಜೀವಕ್ಕೆ ಬೆಲೆ ಇಲ್ಲವೇ ?

‘ಹುಲಿ ಚಿರತೆ ಆನೆ ಸೇರಿದಂತೆ ವನ್ಯಜೀವಿಗಳ ದಾಳಿಗೆ ಜನರ ಜೀವ ಬಲಿಯಾಗುತ್ತಿರುವುದು ಗಂಭೀರ ವಿಚಾರ. ಜನರ ಜೀವಗಳಿಗೆ ಬೆಲೆ ಇಲ್ಲವೇ’ ಎಂದು ಪ್ರಶ್ನಿಸಿದ ಜಿಲ್ಲಾ ಉಸ್ತುವಾರಿ ಸಚಿವರು ‘ಅರಣ್ಯ  ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಅಮಾಯಕರ ಜೀವಗಳು ಬಲಿಯಾಗುತ್ತಿವೆ. ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸಬೇಕು’ ಎಂದು ನಿರ್ದೇಶನ ನೀಡಿದರು.

‘ಒಂದು ದಿನದಲ್ಲಿ ಚಿರತೆ ಸೆರೆ’

‘ಥರ್ಮಲ್ ಡ್ರೋನ್ ಕ್ಯಾಮೆರಾ ನೆರವಿನಿಂದ ಚಿರತೆ ಅಡಗಿರುವ ಸ್ಥಳ ಪತ್ತೆ ಹಚ್ಚಲಾಗಿದೆ. ಕಡಿದಾದ ಜಾಗವಾಗಿರುವ ಕಾರಣ ಚಿರತೆ ಸೆರೆ ಹಿಡಿಯುವುದು ಸವಾಲಾಗಿದ್ದು ಇನ್ನೊಂದು ದಿನದೊಳಗೆ ಅರಿವಳಿಕೆ ನೀಡಿ ಹಿಡಿಯಲಾಗುವುದು.  ಎರಡು ಬೋನುಗಳನ್ನು ಸ್ಥಳದಲ್ಲಿ ಇರಿಸಿ ತೀವ್ರ ನಿಗಾ ವಹಿಸಲಾಗಿದೆ’ ಎಂದು ಸಿಸಿಎಫ್‌ ಮಾಲತಿ ಪ್ರಿಯಾ ತಿಳಿಸಿದರು.

‘ಶಿವರಾತ್ರಿ ಸವಾಲು’ 

ಶಿವರಾತ್ರಿ ಜಾತ್ರಾ ಮಹೋತ್ಸವಕ್ಕೆ ಸಾವಿರಾರು ಭಕ್ತರು ಮಹದೇಶ್ವರನ ದೇವಸ್ಥಾನಕ್ಕೆ ಪಾದಯಾತ್ರೆ ಬರುತ್ತಾರೆ. ರಾಮನಗರ ಗಡಿಯಲ್ಲಿ ಹರಿಯುವ ಕಾವೇರಿ ನದಿಯನ್ನು ದಾಟಿ ಹನೂರು ತಾಲ್ಲೂಕಿನ ಮೂಲಕ ಸುಮಾರು 20 ಕಿ.ಮೀ ಕಾಡಿನ ಹಾದಿಯೊಳಗೆ ಅಪಾರ ಸಂಖ್ಯೆಯ ಭಕ್ತರು ಕ್ಷೇತ್ರಕ್ಕೆ ಬರುತ್ತಾರೆ. ರಾತ್ರಿಯ ಹೊತ್ತು ತೆರೆದ ಪ್ರದೇಶಗಳಲ್ಲಿ ವಾಸ್ತವ್ಯ ಹೂಡುವುದರಿಂದ ಪ್ರಾಣಿಗಳ ದಾಳಿ ಸಾಧ್ಯತೆ ಹೆಚ್ಚಾಗಿರುತ್ತದೆ. ಭಕ್ತರಿಗೆ ಭದ್ರತೆ ನೀಡಲು ಪೊಲೀಸ್ ಇಲಾಖೆ ಜಿಲ್ಲಾಡಳಿತ ಹಾಗೂ ದೇವಸ್ಥಾನದ ಪ್ರಾಧಿಕಾರದಿಂದ ಹೆಚ್ಚಿನ ಸಿಬ್ಬಂದಿ ನೀಡಬೇಕು’ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಸಚಿವರ ಗಮನಕ್ಕೆ ತಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.