ADVERTISEMENT

ಪೌರತ್ವ ಕಾಯ್ದೆ: ತೊಂದರೆ ಇಲ್ಲ

ಸುದ್ದಿಗೋಷ್ಠಿಯಲ್ಲಿ ಸಂಸದ ವಿ. ಶ್ರೀನಿವಾಸಪ್ರಸಾದ್ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2020, 10:45 IST
Last Updated 5 ಜನವರಿ 2020, 10:45 IST
ಶ್ರೀನಿವಾಸಪ್ರಸಾದ್
ಶ್ರೀನಿವಾಸಪ್ರಸಾದ್   

ಕೊಳ್ಳೇಗಾಲ: ಪೌರತ್ವ (ತಿದ್ದುಪಡಿ) ಮಸೂದೆಗೆ ಎಲ್ಲಾ ಸಂಸದರು ಒಪ್ಪಿಗೆ ನೀಡಿದ ನಂತರ ರಾಷ್ಟ್ರಪತಿಗಳ ಅಂಕಿತವಾಗಿ ಕಾಯ್ದೆ ರೂಪುಗೊಂಡಿದೆ ಎಂದು ಸಂಸದ ವಿ. ಶ್ರೀನಿವಾಸಪ್ರಸಾದ್ ಹೇಳಿದರು.

ಲೋಕಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಿ ಪೌರತ್ವ (ತಿದ್ದುಪಡಿ) ಕಾಯ್ದೆ ಜಾರಿ ಮಾಡಲಾಗಿದೆ. ಅರ್ಥ ತಿಳಿಯದವರು ಇದರ ವಿರುದ್ಧ ಚಳವಳಿ ಮಾಡಿ ಸಾರ್ವಜನಿಕರ ಆಸ್ತಿಗೆ ಹಾನಿ ಮಾಡುತ್ತಿದ್ದಾರೆ ಎಂದು ಶನಿವಾರ ಪತ್ರಿಕಾಗೋಷ್ಠಿಯಲ್ಲಿ ದೂರಿದರು.

‘ಪಾಕಿಸ್ತಾನ ಭಯೋತ್ಪಾದಕರಿಗೆ ಪ್ರೋತ್ಸಾಹ ನೀಡುತ್ತಿದೆ ಎಂಬುದರ ಬಗ್ಗೆ ವಿಶ್ವ ಸಂಸ್ಥೆಯೇ ಆರೋಪ ಮಾಡಿದೆ. ಬಿನ್ ಲಾಡೆನ್, ದಾವೂದ್ ಇಬ್ರಾಹಿಂ ಅಂತಹವರಿಗೆ ಪಾಕಿಸ್ತಾನ ರಕ್ಷಣೆ ನೀಡಿದೆ. ವಲಸೆ ಬಂದ ಮುಸ್ಲಿಮರು ಇಲ್ಲಿಯ ಮುಸ್ಲಿಮರಿಗೂ ಸಹ ಕಳಂಕ ತರುತ್ತಿದ್ದಾರೆ. ಸಿಎಎ ಕಾಯ್ದೆಯಿಂದ ಯಾರಿಗೂ ತೊಂದರೆ ಆಗುವುದಿಲ್ಲ. ಇದನ್ನು ಅರ್ಥೈಸಿಕೊಳ್ಳದ ಕೆಲವರು ಪ್ರತಿಭಟನೆಯ ಹೆಸರಿನಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ADVERTISEMENT

ಮಾಜಿ ಶಾಸಕ ಜಿ.ಎನ್.ನಂಜುಂಡ ಸ್ವಾಮಿ, ಮುಖಂಡ ಬಸವೇಗೌಡ, ಮಾಂಬಳ್ಳಿ ನಂಜುಂಡಸ್ವಾಮಿ, ಕಿನಕನ ಹಳ್ಳಿ ರಾಚಯ್ಯ, ಯುವ ಮುಖಂಡ ಲೋಕೇಶ್ ನಂಜುಂಡಸ್ವಾಮಿ ಇದ್ದರು.

ಶಿವಕುಮಾರ್‌ಗೆ ಬುದ್ಧಿಭ್ರಮಣೆ: ವ್ಯಂಗ್ಯ

‘ಶಾಸಕ ಡಿ.ಕೆ.ಶಿವಕುಮಾರ್ ಅನುಭವಿ ರಾಜಕಾರಣಿ. ಜೈಲಿಗೆ ಹೋಗಿ ಬಂದ ಮೇಲೆ ಬುದ್ಧಿಭ್ರಮಣೆಯಾಗಿ ಸ್ಥಿಮಿತ ಕಳೆದುಕೊಂಡಿದ್ದಾರೆ’ ಎಂದು ಶ್ರೀನಿವಾಸಪ್ರಸಾದ್‌ ವ್ಯಂಗ್ಯವಾಡಿದರು.

‘ಅವರು ಸಾವಿರಾರು ಕೋಟಿ ರೂಪಾಯಿ ಒಡೆಯ. ಜೈಲಿಗೆ ಹೋಗಿ ಬಂದ ಮೇಲೆ ಯೋಚನಾ ಶಕ್ತಿ ಕಳೆದುಕೊಂಡಿದ್ದು, ಏನೇನೋ ಮಾತನಾಡುತ್ತಿದ್ದಾರೆ. ಇಡೀ ಪ್ರಪಂಚದಲ್ಲೇ ಕ್ರೈಸ್ತರು ಬಹುದೊಡ್ಡ ಸಂಖ್ಯೆಯಲ್ಲಿ ಇದ್ದಾರೆ. ಅವರೆಲ್ಲ, ಚರ್ಚ್‌ ಅನ್ನೇ ಆಗಲೀ ಯೇಸು ಪ್ರತಿಮೆಯನ್ನಾಗಲೀ ಇವರನ್ನು ಕೇಳಿ ಕಟ್ಟುತ್ತಾರೆಯೇ’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.