ADVERTISEMENT

ಸ್ವಂತ ಕಟ್ಟಡ ಇಲ್ಲದೆ ಸೊರಗಿದ ಆಯುರ್ವೇದ ಆಸ್ಪತ್ರೆ

ಯಳಂದೂರು: ವಾರದಲ್ಲಿ ತಲಾ 2 ದಿನ ಆಯುರ್ವೇದ ಮತ್ತು ಯುನಾನಿ ಚಿಕಿತ್ಸೆ

ನಾ.ಮಂಜುನಾಥ ಸ್ವಾಮಿ
Published 17 ಜೂನ್ 2019, 19:30 IST
Last Updated 17 ಜೂನ್ 2019, 19:30 IST
ಆಸ್ಪತ್ರೆಯ ಹೊರ ನೋಟ
ಆಸ್ಪತ್ರೆಯ ಹೊರ ನೋಟ   

‌ಯಳಂದೂರು: ತಾಲ್ಲೂಕಿನಲ್ಲಿ ಸರ್ಕಾರಿ ಆಯುರ್ವೇದ ಆಸ್ಪತ್ರೆ ಇದ್ದರೂ ಇಲ್ಲದಂತಹ ಸ್ಥಿತಿ. ಪಟ್ಟಣದಸರ್ಕಾರಿ ಆಸ್ಪತ್ರೆ ಹಿಂಭಾಗದ ಶಿಥಿಲ ಹೆಂಚಿನ ವಸತಿಗೃಹದಲ್ಲಿ ಇನ್ನೂಉಸಿರಾಡುತ್ತಿದೆ. ವಾರಕ್ಕೆ ಎರಡೆರಡು ದಿನ ಆಯುರ್ವೇದ ಮತ್ತು ಯುನಾನಿ ವೈದ್ಯರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಆದರೆ, ಸ್ವಂತ ಸೂರು ಇಲ್ಲದ ಆಯುರ್ವೇದ ಚಿಕಿತ್ಸಾಲಯದಬಗ್ಗೆ ತಿಳಿಯದೆ ಜನರು ಪರದಾಡುವಂತೆ ಆಗಿದೆ.

ತಾಲ್ಲೂಕಿನ ಜನರ ಒತ್ತಾಯಕ್ಕೆ ಮಣಿದು ಆಯುರ್ವೇದ ಚಿಕಿತ್ಸಾಲಯವನ್ನು 6 ವರ್ಷಗಳಹಿಂದೆಯೇ ಮಂಜೂರು ಮಾಡಲಾಗಿತ್ತು. ನಂತರ ಗುಣಮಟ್ಟದ ಸೇವೆ ಲಭ್ಯವಿದ್ದರೂ ಆಸ್ಪತ್ರೆ ಇರುವ ಬಗ್ಗೆ ರೋಗಿಗಳಿಗೆ ಅಷ್ಟಾಗಿ ಗೊತ್ತಿರಲಿಲ್ಲ. ಈಗಹಂಗಾಮಿ ವೈದ್ಯರ ನೇಮಕವಾಗಿದೆ. ಆದರೂ ರೋಗಿಗಳಿಗೆ ಸರ್ಕಾರಿ ಆಸ್ಪತ್ರೆ ಆವರಣದಲ್ಲಿಇರುವ ಆಯುರ್ವೇದ ಆಸ್ಪತ್ರೆ ಬಗ್ಗೆ ಗೊತ್ತಿಲ್ಲ.

‘ತಾಲ್ಲೂಕಿನಲ್ಲಿ ಬಡವರ್ಗದ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಾಯಿಲೆಗಳು ಬಂದರೆ ನಮ್ಮ ಪಟ್ಟಣದಆಸ್ಪತ್ರೆಗೆ ಬಂದು ಆರೈಕೆ ಪಡೆಯುತ್ತಾರೆ. ಇಲ್ಲೇ ಸಮೀಪದಲ್ಲಿ ಇರುವ ಆಯುರ್ವೇದಚಿಕಿತ್ಸೆಯ ಬಗ್ಗೆ ಗೊತ್ತೇ ಇಲ್ಲ. ಕಾಯಂ ವೈದ್ಯರು ನೇಮಕವಾಗಿಲ್ಲ. ತುರ್ತುಸಂದರ್ಭಗಳಲ್ಲಿ ಚಿಕಿತ್ಸೆ ಪಡೆಯಲಾಗದೆ ಖಾಸಗಿ ಆಸ್ಪತ್ರೆಗೂ ಹೋಗಲಾಗದೆ ತ್ರಾಸ ಅನುಭವಿಸುವಂತೆ ಆಗಿದೆ’ ಎಂದು ಹೇಳುತ್ತಾರೆ ಪಟ್ಟಣದ ರತ್ನಮ್ಮ.

ADVERTISEMENT

‘ನಮ್ಮ ಆಯುರ್ವೇದ ಆಸ್ಪತ್ರೆಗೆ ಕಾಯಂ ವೈದ್ಯರು ಬೇಕು. ಇದರಿಂದ ಸುತ್ತಮುತ್ತಲಗ್ರಾಮಗಳ ಜನರಿಗೆ ನೆರವಾಗುತ್ತದೆ. ಇಂಗ್ಲಿಷ್ ಔಷಧಿ ಇಷ್ಟಪಡದ ಬಹುತೇಕರು ಆಯುರ್ವೇದಚಿಕಿತ್ಸೆಗಾಗಿ ಅಲೆಯುವುದು ತಪ್ಪುತ್ತದೆ’ ಎನ್ನುವ ಅಭಿಪ್ರಾಯ ಅಂಬಳೆ ನಂಜುಂಡ ಅವರದು.

ಆಸ್ಪತ್ರೆಗೆ ಸ್ವಂತ ಕಟ್ಟಡ ಇಲ್ಲ. ಸರ್ಕಾರಿ ಆಸ್ಪತ್ರೆಗೆ ಸೇರಿದಹೆಂಚಿನ ಮನೆಯಲ್ಲಿ ಕಾರ್ಯಾಚರಿಸುತ್ತಿದೆ. ವಾರದಲ್ಲಿ 2 ದಿನ ಆಯುರ್ವೇದ ಹಾಗೂ ಮತ್ತೆರಡು ದಿನ ಯುನಾನಿವೈದ್ಯರು ಸೇವೆ ನೀಡುತ್ತಿದ್ದಾರೆ. ಉಳಿದ ದಿನ ಚಿಕಿತ್ಸೆಗೆ ಬಂದವರು ವಾಪಸ್ ಹೋಗಬೇಕಿದೆ. ಸರ್ಕಾರಿ ಆಸ್ಪತ್ರೆ ಬಳಿಯೇ ಸುಸಜ್ಜಿತ ಆಯುರ್ವೇದ ಕಟ್ಟಡಕ್ಕೆ ಸ್ಥಳನೀಡಿದರೆ ಆಯುರ್ವೇದ ಆಸ್ಪತ್ರೆಗೆ ಬರುವ ಮಂದಿ ಹೆಚ್ಚಾಗಲಿದ್ದಾರೆ. ಆದರೆ,‌ಡಯಾಲಿಸಿಸ್ ಕೇಂದ್ರಕ್ಕೂ ಸ್ಥಳಾಭಾವ ಇರುವುದರಿಂದ ಜಾಗದ ಸಮಸ್ಯೆ ಉದ್ಭವಿಸಿದೆಎನ್ನುತ್ತಾರೆ ವೈದ್ಯರು.

‘ಸದ್ಯ ಈ ಆಸ್ಪತ್ರೆಯಲ್ಲಿ ಎಲ್ಲ ಸೌಲಭ್ಯಗಳಿವೆ. ಉತ್ತಮವಾದ ಔಷಧೀಯ ಪೂರೈಕೆಯೂ ಇದೆ.ನಾನು ನಿಯೋಜಿತ ವೈದ್ಯನಾಗಿ ಇರುವುದರಿಂದ ಮಂಗಳವಾರ ಮತ್ತು ಶನಿವಾರ ಮಾತ್ರ ಇಲ್ಲಿ ಚಿಕಿತ್ಸೆ ನೀಡುತ್ತಿದ್ದೇನೆ.ಗ್ರಾಮ ಪಂಚಾಯಿತಿಗಳಲ್ಲಿ ಜಾಗೃತಿಕಾರ್ಯಕ್ರಮ ಹಮ್ಮಿಕೊಂಡು ಚಿಕಿತ್ಸೆ ಬಗ್ಗೆ ಅರಿವು ಮೂಡಿಸಲಾಗುತ್ತಿದೆ. ಈಗಆಸ್ಪತ್ರೆಯತ್ತ ಬರುವ ರೋಗಗಳ ಸಂಖ್ಯೆಯಲ್ಲಿ ಏರಿಕೆ ಆಗಿದೆ’ ಎಂದು ಇಲ್ಲಿನ ನಿಯೋಜಿತ ವೈದ್ಯ ಡಾ.ವೀರಣ್ಣ ಮಠಪತಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸ್ವಂತ ಕಟ್ಟಡಕ್ಕೆ ಜಾಗದ ಅಭಾವ’

‘ಸ್ವಂತ ಕಟ್ಟಡ ಹೊಂದಲು ಅನುದಾನದ ಕೊರತೆ ಇಲ್ಲ. ಸ್ಥಳದ ಅಭಾವವಿದೆ. ನಿವೇಶನ ಒದಗಿಸಲು ಮೈಸೂರು ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ಗೆ (ಕೆಎಚ್‌ಎಸ್‌ಡಿಆರ್‌ಪಿ) ಮನವಿ ಸಲ್ಲಿಸಲಾಗಿದೆ. ‌100X100 ಜಾಗ ಸಿಕ್ಕರೆ ಕಟ್ಟಡ ನಿರ್ಮಾಣ ಮಾಡಲಾಗುವುದು.ಈಗಾಗಲೇ ಜಿಲ್ಲಾಮಟ್ಟದ ಅಧಿಕಾರಿಗಳೊಡನೆ ಪತ್ರ ವ್ಯವಹಾರ ನಡೆಸಲಾಗಿದೆ. ತಾಲ್ಲೂಕುಪಂಚಾಯಿತಿ ಸಭೆಯಲ್ಲೂ ಸ್ಥಳ ನೀಡುವ ಬಗ್ಗೆ ಚರ್ಚೆಗಳು ನಡೆದಿವೆ’ ಎಂದು ಜಿಲ್ಲಾ ಆಯುಷ್‌ ಅಧಿಕಾರಿ ಡಾ.ರಾಚಯ್ಯ ‘ಪ್ರಜಾವಾಣಿ’ಗೆ ಹೇಳಿದರು.

‘ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರು ಉನ್ನತ ವ್ಯಾಸಂಗಕ್ಕೆತೆರಳಿದ್ದಾರೆ. ಹೊಸ ನೇಮಕಾತಿಯಲ್ಲಿ ಕಾಯಂ ವೈದ್ಯರನ್ನು ನೇಮಕ ಮಾಡಲಾಗುವುದು’ ಎಂದು ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.