ಯಳಂದೂರು: ಲಾಕ್ಡೌನ್ ಸಡಿಲಿಕೆಯಾಗಿ ತಾಲ್ಲೂಕಿನಲ್ಲಿ ಹೋಟೆಲ್ಗಳು ಆರಂಭವಾಗಿ ವ್ಯಾಪಾರ ಚೇತರಿಸಿಕೊಳ್ಳುವ ಮೊದಲೇ ಮತ್ತೆಏಟು ಬಿದ್ದಿದೆ. ಗ್ರಾಮ ಮತ್ತು ಪಟ್ಟಣಗಳಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಳಆಗುತ್ತಿದ್ದಂತೆ ಹೋಟೆಲ್ಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ. ಶೇ 70ರಷ್ಟು ವಹಿವಾಟು ಕುಸಿತ ಕಂಡಿದೆ.
ಜೂನ್ನಲ್ಲಿ ಸಣ್ಣಪುಟ್ಟ ಹೋಟೆಲ್ಗಳು ತೆರೆದಿದ್ದವು. ಸದಾ ಜನ ಜಂಗುಳಿಯಿಂದತುಂಬಿರುತ್ತಿದ್ದ ದೊಡ್ಡ ಹೋಟೆಲ್ಗಳಲ್ಲಿ ಪಾರ್ಸೆಲ್ ವಿತರಿಸಲಾಗುತ್ತಿತ್ತು. ನಂತರಗ್ರಾಹಕರಿಗೆ ಕುಳಿತು ಆಹಾರ ಸೇವಿಸಲು ಅವಕಾಶ ಕಲ್ಪಿಸಲಾಗಿತ್ತು. ಸೋಂಕು ಹೆಚ್ಚಳದ ಕಾರಣದಿಂದಹೋಟೆಲ್ಗಳಿಗೆ ಬರುವ ಗ್ರಾಹಕರಿಗೆ ಬಾಳೆಲೆ ಹಾಕಿ ಶುಚಿ–ರುಚಿಯಾದ ತಿಂಡಿ ನೀಡಿದರೂ ಹೋಟೆಲ್ಗಳತ್ತ ಬರುತ್ತಿಲ್ಲ.
‘ಈಗಾಗಲೇ ಬಾಣಸಿಗರು ಮತ್ತು ಕಾರ್ಮಿಕರ ಕೊರತೆ ಉಂಟಾಗಿದೆ. ಲಾಕ್ಡೌನ್ಪರಿಣಾಮ ಕಾರ್ಮಿಕರು ಊರುಗಳತ್ತ ತೆರಳಿದ್ದಾರೆ. ಹೀಗಾಗಿ, ಮಾಲೀಕರೇ ತಿಂಡಿ, ಉಪಾಹಾರಗಳಿಗೆ ವಹಿವಾಟು ಮಿತಿಗೊಳಿಸಿದ್ದಾರೆ. ಆದರೂ, ಮಧ್ಯಾಹ್ನದ ಊಟ ಮತ್ತುತಿಂಡಿಗಳನ್ನು ನೀಡುವ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ನಡೆದಿತ್ತು’ ಎಂದು ಫ್ರೆಂಡ್ಸ್ ಹೋಟೆಲ್ ಮಾಲೀಕ ಬಾಲು ಹೇಳಿದರು.
ಕೋವಿಡ್ ಭೀತಿಯಿಂದ ಹೋಟೆಲ್ಗಳಲ್ಲಿಸ್ಟೀಲ್ ತಟ್ಟೆ ಬದಲಾಗಿ, ಪ್ಲಾಸ್ಟಿಕ್ ತಟ್ಟೆ,ಚಮಚ ಮತ್ತು ಗ್ಲಾಸ್ ಬಳಕೆ ಮಾಡಲಾಗುತ್ತಿದೆ. ಚಹಾಕ್ಕೂ ಪೇಪರ್ ಲೋಟ ಬಳಸುತ್ತಿದ್ದಾರೆ.ಕೆಲವರು ಆರೋಗ್ಯದ ದೃಷ್ಟಿಯಿಂದ ಬಾಳೆಎಲೆಯಲ್ಲಿ ಆಹಾರ ಬಡಿಸುತ್ತಿದ್ದಾರೆ.
‘ಪ್ಲಾಸ್ಟಿಕ್ ತಟ್ಟೆ, ಲೋಟವನ್ನು ಸುಲಭವಾಗಿ ವಿಲೇವಾರಿ ಮಾಡಬಹುದು. ಅಲ್ಲದೆ, ತೊಳೆಯುವತಾಪತ್ರಯ ಇರುವುದಿಲ್ಲ. ಆದರೆ, ಇದು ಮತ್ತೆ ಬೀದಿಗೆ ಬೀಳುತ್ತದೆ. ನಿರ್ವಹಣೆಯಸಮಸ್ಯೆಯೂ ಎದುರಾಗುತ್ತದೆ. ಹಾಗಾಗಿ, ಎಲೆ ಹಾಕಿ ತಿಂಡಿ ಬಡಿಸುತ್ತೇವೆ’ ಎಂದು ಹೋಟೆಲ್ ಮಾಲೀಕ ಬಸವಣ್ಣ ಅವರು ಹೇಳಿದರು.
ಪಟ್ಟಣದ ಬಸ್ ನಿಲ್ದಾಣ ಬಳಿ ಮಾಂಸಾಹಾರ ಮತ್ತು ಸಸ್ಯಾಹಾರ ಹೋಟೆಲ್ಗಳಿವೆ.ತಳ್ಳುಗಾಡಿಗಳಲ್ಲೂ ವ್ಯಾಪಾರ ನಡೆಯುತ್ತಿದೆ. ಆದರೆ, ಗ್ರಾಮಗಳಲ್ಲೂ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಹೋಟೆಲ್ ವಹಿವಾಟಿಗೆ ದೊಡ್ಡ ಹೊಡೆತ ನೀಡಿದೆ. ಪಾರ್ಸೆಲ್ ತೆಗೆದುಕೊಂಡು ಹೋಗುತ್ತಿದ್ದವರ ಸಂಖ್ಯೆಯೂ ಕುಸಿದಿದೆ.
‘ಚಿಕನ್ ಬಿರಿಯಾನಿ ₹60ಕ್ಕೆ ನೀಡುತ್ತೇವೆ. ತಿಂಡಿಗಳ ದರ ₹30 ದಾಟುವುದಿಲ್ಲ. ಮಧ್ಯಾಹ್ನ ಸಮಯ ಊಟಕ್ಕಾಗಿ ಜನರು ತುಂಬಿ ಹೋಗುತ್ತಿದ್ದರು. ವಿವಿಧಗ್ರಾಮಗಳಿಂದ ಬರುವವರು ಕಾಯಂ ಆಗಿ ಊಟ ಮಾಡುತ್ತಿದ್ದರು. ಎಲ್ಲವೂ ಬಂದ್ಆಗಿದೆ’ ಎನ್ನುತ್ತಾರೆ ಹೋಟೆಲ್ಗಳ ಸಿಬ್ಬಂದಿ.
‘ಗ್ರಾಮೀಣ ಭಾಗಗಳಲ್ಲಿ ಬಸ್ ಸಂಚಾರ ಇದ್ದರೂ ಜನರು ನಿರೀಕ್ಷಿತಪ್ರಮಾಣದಲ್ಲಿ ಸಂಚರಿಸುತ್ತಿಲ್ಲ. ಮದುವೆ ಮತ್ತಿತರ ಕಾರ್ಯಕ್ರಮಗಳು ಇಲ್ಲ. ಹೀಗಾಗಿ, ವ್ಯಾಪಾರ ಇಲ್ಲದಂತೆ ಆಗಿದೆ. ಬೆಳಿಗ್ಗೆ 11 ವರೆಯಿಂದ 4 ಗಂಟೆಗೆ ಊಟ, ತಿಂಡಿ ಸಿಗುತ್ತದೆ. 30 ಪ್ಲೇಟ್ ಮಾರಾಟವಾದರೆ ಅದೇ ಹೆಚ್ಚು’ ಇದರಿಂದ ಹಾಕಿದ ಬಂಡವಾಳ ಕೈಸೇರುತ್ತಿಲ್ಲ’ ಹೋಟೆಲೊಂದರ ಮಾಲೀಕ ನಾಗಣ್ಣ ಹೇಳಿದರು.
ಮುನ್ನೆಚ್ಚರಿಕೆ ಕ್ರಮ ಪಾಲನೆ ಕಡ್ಡಾಯ
ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವಪಟ್ಟಣ ಪಂಚಾಯಿತಿ ಆರೋಗ್ಯ ನಿರೀಕ್ಷಕ ಮಹೇಶ್ ಕುಮಾರ್ ಅವರು. ’ಗ್ರಾಹಕರಿಗೆ ಗುಣಮಟ್ಟದ ಸೇವೆ ಒದಗಿಸಬೇಕು. ಬಿಸಿಯಾದ ಶುಚಿ–ರುಚಿ ತಿಂಡಿ ತಿನಿಸು ಒದಗಿಸಬೇಕು. ಸ್ವಚ್ಛತೆ ಕಾಪಾಡಿಕೊಳ್ಳಲು ಗ್ರಾಹಕರು ಕಡ್ಡಾಯವಾಗಿ ಸಾಬೂನು, ಸ್ಯಾನಿಟೈಸರ್, ಮಾಸ್ಕ್ ಧರಿಸಿರುವುದನ್ನು ಖಾತ್ರಿಗೊಳಿಸಬೇಕು ಎಂದುಮಾಲೀಕರಿಗೆ ತಿಳಿಸಲಾಗಿದೆ. ಗ್ರಾಹಕರಿಂದ ದೂರು ಬಂದರೆ ಹೋಟೆಲ್ ಪರವಾನಗಿ ಅಮಾನತುಮಾಡಲಾಗುತ್ತದೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.