ADVERTISEMENT

ಕೊಳ್ಳೆಗಾಲದ ಹಲವು ಊರುಗಳಲ್ಲಿ ಬೆಂಗಳೂರು, ಹೊರ ಜಿಲ್ಲೆಯವರಿಗೆ ಪ್ರವೇಶ ಇಲ್ಲ

ಕೊಳ್ಳೇಗಾಲ: ಮುಳ್ಳೂರು, ಶಂಕನಪುರ, ಹರಳೆ, ಸತ್ತೇಗಾಲ ಸೇರಿ ಹಲವು ಗ್ರಾಮಗಳ ಜನರ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 7 ಜುಲೈ 2020, 15:14 IST
Last Updated 7 ಜುಲೈ 2020, 15:14 IST
ಮುಳ್ಳೂರು ಗ್ರಾಮದಲ್ಲಿ ಜನರು ಸ್ವಯಂ ಲಾಕ್‌ಡೌನ್‌ ಹೇರಿಕೊಂಡಿರುವುದು
ಮುಳ್ಳೂರು ಗ್ರಾಮದಲ್ಲಿ ಜನರು ಸ್ವಯಂ ಲಾಕ್‌ಡೌನ್‌ ಹೇರಿಕೊಂಡಿರುವುದು   

ಕೊಳ್ಳೇಗಾಲ: ಜಿಲ್ಲೆಯಲ್ಲಿ ಕೋವಿಡ್‌–19 ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಬೆನ್ನಲ್ಲೇ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ಬೆಂಗಳೂರು ಹಾಗೂ ಹೊರ ಜಿಲ್ಲೆಗಳಿಂದ ಬರುವವರಿಗೆ ನಿರ್ಬಂಧ ವಿಧಿಸಿದ್ದಾರೆ.

ತಾಲ್ಲೂಕಿನ ಮುಳ್ಳೂರು, ಶಂಕನಪುರ, ಹಂಪಾಪುರ, ಹರಳೆ, ದಾಸನಪುರ, ಸತ್ತೇಗಾಲ, ಸರಗೂರು, ಧನಗೆರೆ ಗ್ರಾಮ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಹೊರ ಜಿಲ್ಲೆಗಳಿಂದ ಬರುವವರಿಗೆ ಊರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ.

ಬೆಂಗಳೂರು, ಮೈಸೂರು ಸೇರಿದಂತೆ ಹೊರಗಡೆಯಿಂದ ಬರುವವರಲ್ಲಿಯೇ ಸೋಂಕು ಕಾಣಿಸಿಕೊಳ್ಳುತ್ತಿರುವುದರಿಂದ ಗ್ರಾಮಗಳ ಮುಖಂಡರು ಹಾಗೂ ನಿವಾಸಿಗಳು ಚರ್ಚಿಸಿ ಇಂತಹ ನಿರ್ಧಾರಕ್ಕೆ ಬಂದಿದ್ದಾರೆ. ಕೆಲವು ಗ್ರಾಮಗಳಲ್ಲಿ ಸ್ವಯಂ ಲಾಕ್‌ಡೌನ್‌ ಕೂಡ ಹೇರಲಾಗಿದೆ.

ADVERTISEMENT

ಕದ್ದು ಮುಚ್ಚಿ ಬಂದರೆ ದಂಡ: ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಮುಳ್ಳೂರು ಗ್ರಾಮದ ಉಪ್ಪಾರ ಜನಾಂಗದವರು, ತಪಾಸಣೆ ಮಾಡಿಕೊಳ್ಳದೇ ಕದ್ದು ಮುಚ್ಚಿ ಊರಿಗೆ ಬಂದವರಿಗೆ ₹10 ಸಾವಿರ ದಂಡ ವಿಧಿಸಲೂ ತೀರ್ಮಾನಿಸಿದ್ದಾರೆ.

‘ಬೆಂಗಳೂರು ಸೇರಿದಂತೆ ಹೊರ ಜಿಲ್ಲೆಗಳಿಂದ ಬಂದವರು ಮೊದಲು ಹತ್ತಿರದ ಫಿವರ್‌ ಕ್ಲಿನಿಕ್‌ಗೆ ಭೇಟಿ ನೀಡಿ ತಪಾಸಣೆ ಮಾಡಿಕೊಂಡು ಬರಬೇಕು, ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು. ಮನೆಗೆ ಬಂದ ನಂತರ ಕೆಲವು ದಿನಗಳವರೆಗೆ ಹೊರಗಡೆ ಓಡಾಡಬಾರದು. ವರದಿ ನೆಗೆಟಿವ್‌ ಬಂದ ನಂತರವಷ್ಟೇ ಅವರು ಓಡಾಡಬಹುದು’ ಎಂದು ಮುಳ್ಳೂರುಗ್ರಾಮ ಪಂಚಾಯಿತಿ ಸದಸ್ಯ, ಉಪ್ಪಾರ ಸಮುದಾಯದ ಮುಖಂಡ ಸೋಮಣ್ಣ ಉಪ್ಪಾರ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.