ಚಾಮರಾಜನಗರ: ಆನ್ಲೈನ್ನಲ್ಲಿ ಔಷಧಗಳನ್ನು ಮಾರಾಟ ಮಾಡಲು ಅವಕಾಶ ನೀಡುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ಔಷಧ ವ್ಯಾಪಾರಿಗಳ ಸಂಘ ನೀಡಿದ್ದ ಬಂದ್ಗೆ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಜಿಲ್ಲಾ ಕೇಂದ್ರ ಚಾಮರಾಜನಗರ ಸೇರಿದಂತೆ ಗುಂಡ್ಲುಪೇಟೆ, ಕೊಳ್ಳೇಗಾಲ ಸೇರಿದಂತೆ ಎಲ್ಲ ಕಡೆಗಳಲ್ಲಿ ಶುಕ್ರವಾರ ಔಷಧದ ಅಂಗಡಿಗಳು ಎಂದಿನಂತೆ ವಹಿವಾಟು ನಡೆಸಿದವು.
ರಾಜ್ಯದ ಔಷಧ ವ್ಯಾಪಾರಿಗಳ ಒಂದು ವರ್ಗವು ಸುವರ್ಣ ಕರ್ನಾಟಕ ಔಷಧ ಮಾರಾಟಗಾರರು ಮತ್ತು ವಿತರಕರ ಸಂಘ ಎಂಬ ಸಂಘಟನೆಯನ್ನು ಕಟ್ಟಿಕೊಂಡಿದ್ದು, 19 ಜಿಲ್ಲೆಗಳಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಈ ಸಂಘವು ಬಂದ್ಗೆ ಬೆಂಬಲ ನೀಡಿಲ್ಲ. ಜಿಲ್ಲೆಯಲ್ಲಿ ಈ ಸಂಘ ಸಕ್ರಿಯವಾಗಿದೆ. ಹಾಗಾಗಿ ಬಂದ್ ನಡೆದಿಲ್ಲ.
‘ಆನ್ಲೈನ್ನಲ್ಲಿ ಔಷಧ ಮಾರಾಟಕ್ಕೆ ಅವಕಾಶ ನೀಡಿರುವುದಕ್ಕೆ ನಮ್ಮ ವಿರೋಧ ಇದೆ. ಆದರೆ, ಜನರ ಹಿತದೃಷ್ಟಿಯಿಂದ ನಾವು ಅಂಗಡಿಗಳನ್ನು ಬಂದ್ ಮಾಡಿಲ್ಲ’ ಎಂದು ಸಂಘದ ಚಾಮರಾಜನಗರ ತಾಲ್ಲೂಕು ಘಟಕದ ಕಾರ್ಯದರ್ಶಿ ಎ.ಪ್ರಶಾಂತ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ಕಳೆದ ವರ್ಷ ರಾಜ್ಯದಾದ್ಯಂತ ಬಂದ್ ಮಾಡಿದ್ದೆವು. ಅದರಿಂದ ನಮಗೆ ಏನೂ ಲಾಭ ಆಗಿಲ್ಲ. ವಿರೋಧದ ನಡುವೆಯೂ ಕೇಂದ್ರ ಸರ್ಕಾರ ಆನ್ಲೈನ್ ಮಾರಾಟಕ್ಕೆ ಅವಕಾಶ ನೀಡಿತ್ತು’ ಎಂದು ಅವರು ಹೇಳಿದರು.
‘ಸಂಘದ ಪದಾಧಿಕಾರಿಗಳು ಅಕ್ಟೋಬರ್ 3ರಂದು ದೆಹಲಿಯಲ್ಲಿ ಪ್ರಧಾನಿ ಹಾಗೂ ರಾಷ್ಟ್ರಪತಿ ಅವರನ್ನು ಭೇಟಿ ಮಾಡಿ, ಔಷಧಗಳ ಆನ್ಲೈನ್ ಮಾರಾಟಕ್ಕೆ ಅವಕಾಶ ನೀಡುವ ನಿಯಮವನ್ನು ರದ್ದುಪಡಿಸಬೇಕು ಎಂದು ಮನವಿ ಮಾಡಲಿದ್ದಾರೆ’ ಎಂದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.