ADVERTISEMENT

ಮಹದೇಶ್ವರ ಬೆಟ್ಟ: ಯುಗಾದಿ ಜಾತ್ರೆ ರಥೋತ್ಸವ ರದ್ದು

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2021, 15:47 IST
Last Updated 10 ಏಪ್ರಿಲ್ 2021, 15:47 IST
ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಮಲೆಮಹದೇಶ್ವರ ಸ್ವಾಮಿ ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ
ಯುಗಾದಿ ಜಾತ್ರಾ ಮಹೋತ್ಸವದ ಅಂಗವಾಗಿ ಮಲೆಮಹದೇಶ್ವರ ಸ್ವಾಮಿ ದೇವಾಲಯವನ್ನು ವಿದ್ಯುತ್‌ ದೀಪಗಳಿಂದ ಅಲಂಕರಿಸಲಾಗಿದೆ   

ಚಾಮರಾಜನಗರ: ಯಾತ್ರಾ ಸ್ಥಳ ಮಹದೇಶ್ವರ ಬೆಟ್ಟದಲ್ಲಿ ಆರಂಭವಾಗಿರುವ ಯುಗಾದಿ ಜಾತ್ರೆಯ ಅಂಗವಾಗಿ ಇದೇ 13ರಂದು ನಡೆಯಬೇಕಿದ್ದ ರಥೋತ್ಸವವನ್ನು ರದ್ದು ಮಾಡಲಾಗಿದೆ.

ಕೋವಿಡ್‌ ಕಾರಣದಿಂದ ಗರಿಷ್ಠ 500 ಜನರ ಮಿತಿಗೆ ಒಳಪಟ್ಟು ಜಾತ್ರೆ ನಡೆಸಲು ಜಿಲ್ಲಾಧಿಕಾರಿ ಅವರು ಆದೇಶಿಸಿದ್ದಾರೆ.

ರಥವನ್ನು ಎಳೆಯಲು 500ರಿಂದ 1000 ಜನರು ಬೇಕು. ರಥೋತ್ಸವ ನಡೆಸಿದರೆ ಕನಿಷ್ಠ 3000 ಜನರು ಸೇರಲಿದ್ದಾರೆ. ಕೋವಿಡ್‌ ಕಾರಣಕ್ಕೆ ಅಷ್ಟು ಜನರಿಗೆ ಅವಕಾಶ ನೀಡಲು ಸಾಧ್ಯವಾಗದೇ ಇರುವುದರಿಂದ ರಥೋತ್ಸವವನ್ನು ರದ್ದುಗೊಳಿಸಿ ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಜಯವಿಭವಸ್ವಾಮಿ ಅವರು ಆದೇಶ ಹೊರಡಿಸಿದ್ದಾರೆ.

ADVERTISEMENT

ಶನಿವಾರದಿಂದ ಜಾತ್ರೆಯ ವಿಧಿ ವಿಧಾನಗಳು ಆರಂಭವಾಗಿದ್ದು, 13ರವರೆಗೆ ನಡೆಯಲಿವೆ.

‘ಕೋವಿಡ್‌ ನಿಯಂತ್ರಣ ಮಾನದಂಡಗಳಿಗೆ ಒಳಪ‍ಟ್ಟು, ಗರಿಷ್ಠ 500 ಜನರ ಮಿತಿಯಲ್ಲಿ ಜಾತ್ರೆಯು ಸರಳವಾಗಿ ಹಾಗೂ ಸಾಂಪ್ರದಾಯಿಕವಾಗಿ ನಡೆಯಲಿದೆ. ಜಾತ್ರೆಗೆ ಸಂಬಂಧಿಸಿದ ಎಲ್ಲ ಉತ್ಸವಗಳು ನಡೆಯಲಿದೆ. ದೇವಸ್ಥಾನದ ಅರ್ಚಕರು, ಪ್ರಾಧಿಕಾರದ ಸಿಬ್ಬಂದಿ, ಸ್ಥಳೀಯ ನಿವಾಸಿಗಳು, ಸರ್ಕಾರಿ ಕೆಲಸದ ನಿಮಿತ್ತ ಬರುವ ಅಧಿಕಾರಿಗಳು ಹಾಗೂ ವಿಶೇಷ ಆಹ್ವಾನಿತರಿಗೆ ಮಾತ್ರ ಅವಕಾಶ ಇದೆ. ಜಿಲ್ಲೆ, ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳ ಭಕ್ತರಿಗೆ ಪ್ರವೇಶ ನಿರ್ಬಂಧಿಸಲಾಗಿದೆ’ ಎಂದು ಜಯವಿಭವಸ್ವಾಮಿ ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.