ADVERTISEMENT

ಚಾಮರಾಜನಗರ: ಈರುಳ್ಳಿ ಕೊಂಚ ಅಗ್ಗ, ಹೂವಿಗೆ ಬೇಡಿಕೆ ಕುಸಿತ

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2020, 16:08 IST
Last Updated 2 ನವೆಂಬರ್ 2020, 16:08 IST
ಚಾಮರಾಜನಗರದ ಹೂವಿನ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಹೂವಿನ ಹಾರಗಳು
ಚಾಮರಾಜನಗರದ ಹೂವಿನ ಮಳಿಗೆಯೊಂದರಲ್ಲಿ ಮಾರಾಟಕ್ಕೆ ಇಟ್ಟಿದ್ದ ಹೂವಿನ ಹಾರಗಳು   

ಚಾಮರಾಜನಗರ: ಮೂರ್ನಾಲ್ಕು ವಾರಗಳಿಂದ ಸತತವಾಗಿ ಏರುಮುಖವಾಗಿದ್ದ ಈರುಳ್ಳಿ ಧಾರಣೆ ಈ ವಾರ ಕೊಂಚ ಇಳಿಮುಖವಾಗಿದೆ. ಹಬ್ಬದ ತರುವಾಯ ಹೂವುಗಳಿಗೆ ಬೇಡಿಕೆ ಸಂಪೂರ್ಣವಾಗಿ ಕುಸಿದಿದ್ದು, ಕೇಳುವವರೇ ಇಲ್ಲದಂತಾಗಿದೆ.

ಹಾಪ್‌ಕಾಮ್ಸ್‌ನಲ್ಲಿ ಈರುಳ್ಳಿ ಬೆಲೆ ಕೆಜಿಗೆ ₹10 ಕಡಿಮೆಯಾಗಿದೆ. ಕಳೆದವಾರ ₹90 ಇತ್ತು. ಈ ವಾರ ₹80ಕ್ಕೆ ಮಾರಾಟವಾಗುತ್ತಿದೆ.

ನಾಲ್ಕೈದು ದಿನಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಈರುಳ್ಳಿ ಮಾರುಕಟ್ಟೆಗೆ ಆವಕವಾಗುತ್ತಿರುವುದರಿಂದ ಬೆಲೆ ಸ್ವಲ್ಪ ಕಡಿಮೆಯಾಗಿದೆ ಎಂದು ಹೇಳುತ್ತಾರೆ ಹಾಪ್‌ಕಾಮ್ಸ್‌ ವ್ಯಾಪಾರಿ ಮಧು.

ADVERTISEMENT

ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯಾತ್ಯಾಸವಾಗಿಲ್ಲ. ಟೊಮೆಟೊ (₹10), ಬೀನ್ಸ್‌ (₹30), ಕ್ಯಾರೆಟ್‌ (₹60), ಆಲೂಗಡ್ಡೆ (₹50) ದರ ಕಳೆದ ವಾರದಷ್ಟೇ ಇದೆ.

ಹಣ್ಣುಗಳ ಬೆಲೆಯಲ್ಲೂ ಬದಲಾವಣೆಯಾಗಿಲ್ಲ. ಕಿತ್ತಳೆ ಹಣ್ಣು ಭಾರಿ ಪ್ರಮಾಣದಲ್ಲಿ ಆವಕವಾಗುತ್ತಿದ್ದು, ವ್ಯಾಪಾರಿಗಳು ವಾಹನಗಳು ಹಾಗೂ ತಳ್ಳುಗಾಡಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಕೆಜಿಗೆ ₹40ರಿಂದ ₹60ರವರೆಗೆ ದರ ಹೇಳುತ್ತಿದ್ದಾರೆ.

ಮಾಂಸಗಳ ಧಾರಣೆಯಲ್ಲೂ ವ್ಯತ್ಯಾಸವಾಗಿಲ್ಲ.

ಹೂವುಗಳ ದರ ಪಾತಾಳಕ್ಕೆ

ಕಳೆದ ವಾರ ಆಯುಧ ಪೂಜೆ ಹಾಗೂ ವಿಜಯದಶಮಿ ಸಂದರ್ಭದಲ್ಲಿ ಗ್ರಾಹಕರ ಜೇಬು ಸುಟ್ಟಿದ್ದ ಹೂವುಗಳು ಈವಾರ ಬೇಡಿಕೆ ಕಳೆದುಕೊಂಡಿವೆ. ಇದರಿಂದಾಗಿ ಬೆಲೆ ಪಾತಾಳಕ್ಕೆ ಕುಸಿದೆ.

ನಗರದ ಬಿಡಿಹೂವಿನ ಮಾರುಕಟ್ಟೆಯಲ್ಲಿ ಕಾಕಡಕ್ಕೆ ಕೆಜಿಗೆ ₹40 ಇದೆ. ಚೆಂಡು ಹೂವಿಗೆ ₹10, ಸುಗಂಧರಾಜಕ್ಕೆ ₹40 ಇದೆ. ಕನಕಾಂಬರ ಕೆಜಿಗೆ ₹400ಕ್ಕೆ ಮಾರಾಟವಾಗುತ್ತಿದೆ.

‘ಹಬ್ಬದ ಸಂದರ್ಭದಲ್ಲಿ ಇದ್ದ ಬೆಲೆಗೆ ಹೋಲಿಸಿದರೆ ಈಗಿನದ್ದು ಏನೇನೂ ಅಲ್ಲ. ದೀಪಾವಳಿ ಬರುವವರೆಗೆ ಹೂವುಗಳಿಗೆ ಬೇಡಿಕೆ ಇರುವುದಿಲ್ಲ. ಬೆಲೆ ಕಡಿಮೆ ಇರುತ್ತದೆ. ಇನ್ನು 10ರಿಂದ 12 ದಿನಗಳ ಕಾಲ ಇದೇ ಬೆಲೆ ಮುಂದುವರಿಯಲಿದೆ’ ಎಂದು ಬಿಡಿ ಹೂವಿನ ವ್ಯಾಪಾರಿ ರವಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.