ADVERTISEMENT

ಗುಂಡ್ಲುಪೇಟೆ| ಸಾವಯವ ಕೃಷಿಗೆ ಒತ್ತು ನೀಡಿ: ಜಿಲ್ಲಾಧಿಕಾರಿ ಶ್ರೀರೂಪ

​ಪ್ರಜಾವಾಣಿ ವಾರ್ತೆ
Published 19 ಜನವರಿ 2026, 2:28 IST
Last Updated 19 ಜನವರಿ 2026, 2:28 IST
<div class="paragraphs"><p>ಗುಂಡ್ಲುಪೇಟೆ ತಾಲೂಕಿನ ಕಡತಾಳಕಟ್ಟೆಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ರೈತರ ಗುಂಪು ಬೇಸಾಯ ಪ್ರಾತ್ಯಕ್ಷಿಕೆಯನ್ನು&nbsp;ಜಿಲ್ಲಾಧಿಕಾರಿ ಶ್ರೀರೂಪಾ ವೀಕ್ಷಿಸಿದರು</p></div>

ಗುಂಡ್ಲುಪೇಟೆ ತಾಲೂಕಿನ ಕಡತಾಳಕಟ್ಟೆಹುಂಡಿ ಗ್ರಾಮದಲ್ಲಿ ಆಯೋಜಿಸಿದ್ದ ರೈತರ ಗುಂಪು ಬೇಸಾಯ ಪ್ರಾತ್ಯಕ್ಷಿಕೆಯನ್ನು ಜಿಲ್ಲಾಧಿಕಾರಿ ಶ್ರೀರೂಪಾ ವೀಕ್ಷಿಸಿದರು

   

ಗುಂಡ್ಲುಪೇಟೆ: ರಾಸಾಯನಿಕ ಮುಕ್ತ ಮಾಡಲು ಸಾವಯವ ಕೃಷಿಗೆ ರೈತರು ಹೆಚ್ಚಿನ ಒತ್ತು ನೀಡಬೇಕೆಂದು ಜಿಲ್ಲಾಧಿಕಾರಿ ಶ್ರೀರೂಪ ಸಲಹೆ ನೀಡಿದರು.

ಶನಿವಾರ ತಾಲ್ಲೂಕಿನ ಕಡತಾಳಕಟ್ಟೆಹುಂಡಿ ಗ್ರಾಮದ ಮಹದೇವಪ್ರಸಾದ್ ಎಂಬುವರ ಜಮೀನಿನಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಆಯೋಜಿಸಿದ್ದ ರೈತರ ಗುಂಪು ಬೇಸಾಯ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ರಾಸಾಯನಿಕ ಮುಕ್ತ ಬಿತ್ತನೆ ಮಾಡಿ ಮಾತನಾಡಿದರು. ಸಮಾಜದ ಸ್ವಾಸ್ಥ್ಯಕ್ಕಾಗಿ ರಾಸಾಯನಿಕ ಮುಕ್ತ ಬೆಳೆಗಳ ಅವಶ್ಯಕತೆ ಹೆಚ್ಚಾಗಿದೆ ಎಂದು ತಿಳಿಸಿದರು.

ADVERTISEMENT

ಕೋವಿಡ್ ಸಂದರ್ಭದಲ್ಲಿ ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ದೊಡ್ಡ ಪಾಠ ಕಲಿತಿದ್ದಾರೆ. ಊರು ಬಿಟ್ಟು ಪಟ್ಟಣಕ್ಕೆ ಹೋಗಿದ್ದವರು ಸ್ವಗ್ರಾಮಗಳಿಗೆ ಮರಳಿ ಕೃಷಿಯಲ್ಲಿ ತೊಡಗಿಸಿಕೊಂಡಿದ್ದರು. ಇತ್ತೀಚಿನ ದಿನಗಳಲ್ಲಿ ಸಾವಯವ ಉತ್ಪನ್ನಗಳಿಗೆ ಹೆಚ್ಚಿನ ಬೇಡಿಯಿದೆ. ಇದರಿಂದ ಬೆಳೆಗಾರರಿಗೆ ಮಾರುಕಟ್ಟೆ ಸಮಸ್ಯೆ ಎದುರಾಗದೆ ಲಾಭದಾಯಕವಾಗಲಿದೆ ಎಂದರು.

ಅಧಿಕ ಮಂದಿ ರೈತರು ಇತ್ತೀಚೆಗೆ ಸಂಪೂರ್ಣ ಸಾವಯವ ಮತ್ತು ನಾಟಿ ಹಸುಗಳ ಉತ್ಪನ್ನಗಳ ಬಳಕೆ ಮಾಡಲು ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ಆರಂಭಿಸಿರುವ ಗುಂಪು ಬೇಸಾಯ ಪದ್ಧತಿ ಉತ್ತಮ ಪರಿಣಾಮ ಬೀರಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಸಾಮೂಹಿಕ ನಾಯಕತ್ವದ ರಾಜ್ಯ ಸಮಿತಿ ಸದಸ್ಯ ಹೊನ್ನೂರು ಪ್ರಕಾಶ್ ಮಾತನಾಡಿ, ರಾಜ್ಯ ರೈತ ಸಂಘದ ಸ್ವಾಭಿಮಾನ ಹಾಗೂ ಸ್ಥಳೀಯ ಭಿತ್ತನೆ ಬೀಜಗಳ ಸಂರಕ್ಷಣೆಗೆ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಹಾಕಿಕೊಟ್ಟ ಹಾದಿಯಲ್ಲಿ ಸಾಮೂಹಿಕ ನಾಯಕತ್ವದ ರೈತ ಸಂಘವು ಗುಂಪು ಬೇಸಾಯ ಪದ್ದತಿಯಲ್ಲಿ ಬೆಳೆ ಬೆಳೆಯಲು ಮುಂದಾಗಿದೆ ಎಂದರು.

ಪ್ರತಿ ಗ್ರಾಮಗಳಲ್ಲಿ ಸಂಘದ ಆಯ್ದ 5 ರೈತರ ಜಮೀನುಗಳಲ್ಲಿ 20 ಗುಂಟೆ ಪ್ರದೇಶದಲ್ಲಿ ರಾಸಾಯನಿಕ ಮುಕ್ತ ಹಾಗೂ ಸಾವಯವ ಪದ್ಧತಿಯಲ್ಲಿ ಗುಂಪಾಗಿ ಬೇಸಾಯ ಮಾಡಲಾಗುವುದು. ಇದರಲ್ಲಿ ಕಬ್ಬು, ಬಾಳೆ, ಅರಿಸಿನ, ಸೊಪ್ಪು, ತರಕಾರಿ ಮುಂತಾದ ಬೆಳೆಗಳನ್ನು ಬೆಳೆಯುವ ಮೂಲಕ ಬಳಕೆದಾರರಿಗೆ ವಿಷಮುಕ್ತ ಆಹಾರ ನೀಡಲಾಗುವುದು. ಬೆಳೆದ ಅರ್ಧದಷ್ಟು ಬೆಳೆಗಳನ್ನು ಉತ್ಪಾದಕರು ಇಟ್ಟುಕೊಂಡು ಉಳಿದರ್ಧ ಉತ್ಪನ್ನಗಳನ್ನು ರೈತ ಉತ್ಪನ್ನ ಕಂಪನಿಗೆ ಸರಬರಾಜು ಮಾಡಬೇಕಾಗಿದೆ. ಇದರಲ್ಲಿ ಈ ಉತ್ಪನ್ನಗಳ ಮೌಲ್ಯವರ್ಧನೆ ಮಾಡುವ ಜೊತೆಗೆ ಬೆಳೆಗಾರರಿಗೆ ಹೆಚ್ಚಿನ ಲಾಭ ದೊರಕುವಂತೆ ಮಾಡಲಾಗುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಉಪ ನಿರ್ದೇಶಕಿ ಸುಷ್ಮಾ, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಭಾಸ್ಕರ್ ನಾಯಕ್, ಡಿವೈಎಸ್‍ಪಿ ಸ್ನೇಹಾರಾಜ್, ತೆರಕಣಾಂಬಿ ಠಾಣೆ ಎಸ್‌ಐ ಕೆ.ಎಂ.ಮಹೇಶ್ ಸೇರಿದಂತೆ ಹಲವು ಮಂದಿ ರೈತ ಮುಖಂಡರು ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.