ಕೊಳ್ಳೇಗಾಲ (ಚಾಮರಾಜನಗರ): ತಾಲ್ಲೂಕಿನ ಪಾಳ್ಯ ಗ್ರಾಮದ ಗೋಪಾಲಸ್ವಾಮಿ ದೇವಸ್ಥಾನದಲ್ಲಿ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ನಡೆದ ವಿಶೇಷ ಪೂಜೆಯಲ್ಲಿ ಪ್ರಸಾದ ಸೇವಿಸಿ 33 ಭಕ್ತರಿಗೆ ವಾಂತಿ, ಭೇದಿ ಕಾಣಿಸಿಕೊಂಡಿದೆ.
ಎಂದಿನಂತೆ ಈ ಬಾರಿಯೂ ಪಕಾಲಿ ನಾಯಕ ಕುಟುಂಬದವರು ಮಂಗಳವಾರ ರಾತ್ರಿ ಪೂಜೆ ಸಲ್ಲಿಸಿ ನೂರಕ್ಕೂ ಹೆಚ್ಚು ಮಂದಿಗೆ ಪುಳಿಯೋಗರೆ ಪ್ರಸಾದವನ್ನು ಹಂಚಿದ್ದರು. ಪ್ರಸಾದ ಉಳಿದಿದ್ದರಿಂದ, ಬುಧವಾರ ಬೆಳಿಗ್ಗೆಯೂ 40ಕ್ಕೂ ಹೆಚ್ಚು ಮಂದಿ ಸೇವಿಸಿದ್ದರು. ಮಧ್ಯಾಹ್ನದ ವೇಳೆಗೆ 33 ಮಂದಿಗೆ ವಾಂತಿ, ಭೇದಿ ಕಾಣಿಸಿಕೊಂಡಿದ್ದು, ನಾಲ್ವರು ಮಹಿಳೆಯರು ಮನೆಗಳಲ್ಲಿ ಕುಸಿದು ಬಿದ್ದಿದ್ದರು.
ಅಸ್ವಸ್ಥಗೊಂಡ ಎಲ್ಲರಿಗೂ ಪಾಳ್ಯದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಯಿತು. ಮೂವರು ಅಲ್ಲೇ ದಾಖಲಾಗಿದ್ದು, 11 ಮಂದಿ ಕೊಳ್ಳೇಗಾಲದ ಸರ್ಕಾರಿ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಉಳಿದ 19 ಮಂದಿ ಗುಣಮುಖರಾಗಿದ್ದಾರೆ.
‘ವಾಂತಿ, ಭೇದಿಯು ಪ್ರಸಾದ ಅಥವಾ ನೀರಿನ ಸೇವನೆಯಿಂದ ಆಗಿದ್ದೇ ಎಂಬುದು ಗೊತ್ತಾಗಿಲ್ಲ. ಪ್ರಸಾದಕ್ಕೆ ಬಳಸಿದ ಆಹಾರ ಪದಾರ್ಥದ ಮಾದರಿಗಳನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, ವರದಿ ಬಂದ ಬಳಿಕ ಖಚಿತ ಮಾಹಿತಿ ದೊರೆಯಲಿದೆ’ ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಗೋಪಾಲ್ ‘ಪ್ರಜಾವಾಣಿ’ಗೆ ತಿಳಿಸಿದರು. ಉಪವಿಭಾಗ ಆಸ್ಪತ್ರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಚಿದಂಬರ, ಡಿವೈಎಸ್ಪಿ ಧರ್ಮೇಂದ್ರ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.