ಮಹದೇಶ್ವರ ಬೆಟ್ಟ: ‘ಧರ್ಮ ಎಂಬ ವಿಚಾರದ ಅಮಲು ಅತಿಯಾಗಿರುವುದರಿಂದಲೇ ಸಾವಿರ ಸಮಸ್ಯೆಗಳು ಸೃಷ್ಟಿಯಾಗಿ ಈ ಕೂಪದೊಳಗೆ ಪ್ರಪಂಚ ನಲುಗುತ್ತಿದೆ’ ಎಂದು ಇಲ್ಲಿನ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಪ್ರಾಯಪಟ್ಟರು.
ಶುಕ್ರವಾರ ನಡೆದ ಸಾಲೂರು ಮಠದ ಪಟ್ಟದ ಗುರುಸ್ವಾಮೀಜಿ 69ನೇ ಜನ್ಮ ವರ್ಧಂತೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು,‘ಇನ್ನೊಬ್ಬರಿಗೆ ಉಪಕಾರ ಮಾಡದಿದ್ದರೂ ಮತ್ತೊಬ್ಬರಿಗೆ ತೊಂದರೆ ನೀಡದೆ ಪರಸ್ಪರ ಪ್ರೀತಿಯಿಂದ ಬಾಳಲು ಧರ್ಮದ ಆಳವಾದ ಪಾಠದ ಅಗತ್ಯವಿಲ್ಲ. ಬದಲಿಗೆ ಜೀವನದಲ್ಲಿ ದೊರೆಯುವ ಪಾಠವೇ ಸಾಕು’ಎಂದರು.
‘ಪರಸ್ಪರ ಪ್ರೀತಿಯಿಂದ ನಾವೆಲ್ಲಾ ಮನುಷ್ಯ ಕುಲದ ಬಂಧುಗಳು ಎಂದು ಸ್ಮರಿಸಿಕೊಳ್ಳುತ್ತಾ ಬಾಳಬೇಕು. ಕತ್ತಲೆ ಓಡಿಸಲು ಬೆಳಕಿನ ಅನಿವಾರ್ಯತೆ ಹೇಗೆ ಅವಶ್ಯವೋ ಹಾಗೆಯೇ ಇಂದಿನ ಅಶಾಂತಿಯನ್ನು ಹೋಗಲಾಡಿಸಲು ಮನುಷತ್ವದ ಅವಶ್ಯವಾಗಿದೆ. ‘ವಸುದೈವ ಕುಟುಂಬಕಂ’ ಎಂಬುದು ಮಾನವೀಯತೆಯ ಪಾಲಿಗೆ ಧರ್ಮವೇ ನೀಡಿದ ಪಾಠ’ ಎಂದರು.
ಪ್ರಾಧಿಕಾರದ ಕಾರ್ಯದರ್ಶಿ ರಘು ಮಾತನಾಡಿ,‘ಪ್ರತಿಯೊಬ್ಬರ ಜೀವನದಲ್ಲಿಯೂ ಗುರುವಿನ ಸ್ಥಾನ ಬಹುದೊಡ್ಡದು. ಗುರುವಿನ ಮಾರ್ಗದರ್ಶನವಿದ್ದರೆ ಮಾತ್ರ ಆ ವ್ಯಕ್ತಿ ಉತ್ತಮ ವ್ಯಕ್ತಿಯಾಗಿ ರೂಪುಗೊಳ್ಳಲು ಸಾಧ್ಯ. ಸಾಲೂರು ಮಠ ಪ್ರಾರಂಭವಾದಾಗಿನಿಂದಲೂ ಇಲ್ಲಿಯವರೆಗೆ ಶೈಕ್ಷಣಿಕವಾಗಿ ಅಪಾರ ಕೊಡುಗೆ ನೀಡುತ್ತಾ ಬಂದಿದೆ. ಹಲವು ಬಡ ಕುಟುಂಬಗಳ ಜೀವನಕ್ಕೆ ಮುನ್ನುಡಿ ಬರೆದ ಮಠ. ಈ ಕ್ಷೇತ್ರಕ್ಕೆ ಬರುವ ಭಕ್ತರಿಗೆ ದಾಸೋಹ ಸೇವೆ ನೀಡುವುದರ ಜೊತೆಗೆ ಕರ್ನಾಟಕ, ತಮಿಳುನಾಡು ಸೇರಿ ಹಲವು ಭಾಗಗಳಲ್ಲಿ ಹೆಸರುವಾಸಿಯಾಗಿದೆ. ಮುಂದೆಯೂ ಇದೇ ರೀತಿ ಶ್ರೀ ಮಠವು ಕಾರ್ಯೋನ್ಮುಕವಾಗಿರಲಿ’ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಬೇಡಗಂಪಣ ಮುಖಂಡರು, ಶಾಲಾ ಕಾಲೇಜಿನ ಸಿಬ್ಬಂದಿ ವಿದ್ಯಾರ್ಥಿಗಳು ಹಾಗೂ ಸ್ಥಳಿಯ ಗ್ರಾಮಸ್ಥರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.