ಚಾಮರಾಜನಗರ: ಕೇಂದ್ರ ಸರ್ಕಾರದ ಪ್ರಧಾನಮಂತ್ರಿ ಸುರಕ್ಷಾ ಮತ್ತು ಪ್ರಧಾನ ಮಂತ್ರಿ ಜೀವನ ಜ್ಯೋತಿ ವಿಮಾಯೋಜನೆಯ ಪ್ರಯೋಜನವನ್ನು ಅರ್ಹರು ಪಡೆದುಕೊಳ್ಳಬೇಕು ಎಂದು ಇಂಟಿಗ್ರಾ ಕಂಪನಿಯ ಜಿಲ್ಲಾ ಸಂಯೋಜಕ ಸಿದ್ದರಾಜು ಸಲಹೆ ನೀಡಿದರು.
ತಾಲ್ಲೂಕಿನ ಹೊಂಗನೂರು ಗ್ರಾಮದಲ್ಲಿರುವ ಭಾರತೀಯ ಸ್ಟೇಟ್ ಬ್ಯಾಂಕ್ನ ಅವರಣದಲ್ಲಿ ಹಮ್ಮಿಕೊಂಡಿದ್ದ ಪ್ರಧಾನ ಮಂತ್ರಿ ಜೀವನಜ್ಯೋತಿ ವಿಮಾ ಯೋಜನೆಯಡಿ ಅಕಾಲಿಕ ಮರಣಕ್ಕೆ ತುತ್ತಾದ ಮಹದೇವ ಅವರ ಪತ್ನಿಗೆ ಪರಿಹಾರದ ಚೆಕ್ ವಿತರಿಸಿ ಮಾತನಾಡಿದರು.
ಜೀವನಜ್ಯೋತಿ ವಿಮಾ ಯೋಜನೆಯು ಸಮಾಜದ ಎಲ್ಲ ವರ್ಗದವರಿಗೊ ಅನ್ವಯವಾಗಲಿದೆ. ಪ್ರಧಾನಮಂತ್ರಿ ಸುರಕ್ಷಾ ವಿಮಾ ಯೋಜನೆಯಡಿ ವಾರ್ಷಿಕ ₹ 20 ಪಾವತಿಸಿದರೆ ₹2 ಲಕ್ಷ ದುರ್ಘಟನೆ ವಿಮೆ ಪಡೆಯಬಹುದು. 18 ವರ್ಷ ಮೇಲ್ಪಟ್ಟು 70 ವರ್ಷದೊಳಗಿನವರು ಯೋಜನೆಯಡಿ ನೋಂದಣಿಗೆ ಅರ್ಹರಾಗಿರುತ್ತಾರೆ.
ಪ್ರಧಾನ ಮಂತ್ರಿ ಜೀವನಜ್ಯೋತಿವಿಮಾ ಯೋಜನೆಯಡಿ ₹ 342 ಪಾವತಿಸಿದರೆ ₹ 2 ಲಕ್ಷ ಜೀವವಿಮೆ ದೊರೆಯಲಿದೆ. 18 ವರ್ಷದಿಂದ 50 ವರ್ಷದೊಳಗಿನವರು ವಿಮೆಗೆ ನೋಂದಣಿ ಮಾಡಿಸಲು ಅರ್ಹರಾಗಿರುತ್ತಾರೆ. ಎರಡೂ ವಿಮೆಗಳು ಮೃತರ ಅವಲಂಬಿತರಿಗೆ ಅನುಕೂಲವಾಗಲಿದೆ. ಸಾರ್ವಜನಿಕರು ಸಮೀಪದ ರಾಷ್ಟ್ರೀಕೃತ ಬ್ಯಾಂಕಗಳಲ್ಲಿ ವಿಮೆ ಮಾಡಿಸಿಕೊಳ್ಳಬಹುದು ಎಂದು ಸಲಹೆ ನೀಡಿದರು.
ಬ್ಯಾಂಕಿನ ವ್ಯವಸ್ಥಾಪಕ ಅವನೀಶ್ ಕುಮಾರ್ ಪಾಠಕ್ ಮಾತನಾಡಿ ಬ್ಯಾಂಕಿನಲ್ಲಿ ಈಗಾಗಲೇ ಹಲವರು ವಿಮಾ ಯೋಜನೆಗೆ ನೋಂದಣಿ ಮಾಡಿಸಿಕೊಂಡಿದ್ದು, ಮೂವರು ಮೃತರ ಫಲಾನುವಗಳ ಕುಟುಂಬಕ್ಕೆ 2 ಲಕ್ಷ ಪರಿಹಾರ ವಿತರಿಸಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಸಾರ್ವನಿಕರು ವಿಮೆ ಮಾಡಿಸಿಕೊಳ್ಳಬೇಕು ಎಂದು ಮನವಿ ಮಾಡಿದರು.
ಈ ಸಂದರ್ಭ ಬ್ಯಾಂಕ್ನ ಕ್ಯಾಷಿಯರ್ ರಾಹುಲ್ ನಾಯಕ್, ಇಂಟಿಗ್ರಾ ಕಂಪನಿಯ ಮೇಲ್ವೀಚಾರಕ ಬಸವ ನಾಯಕ, ಎಸ್ಬಿಐ ವ್ಯವಹಾರ ಪ್ರತಿನಿಧಿ ಸುನಿಲ್, ಆಲೂರು ನಾಗೇಂದ್ರಮೂರ್ತಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.