
ಗುಂಡ್ಲುಪೇಟೆ: ತಾಲ್ಲೂಕಿನ ಮೇಲುಕಾಮನಹಳ್ಳಿ ಬಳಿ ಇರುವ ನೂತನ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ನಿರ್ದೇಶಕರ ಕಚೇರಿ ಕಟ್ಟಡದ ಬಳಿ ಮದ್ಯದ ಬಾಟಲಿ ಬಿದ್ದಿರುವುದನ್ನು ಖಂಡಿಸಿ ಕರ್ನಾಟಕ ರಾಜ್ಯ ರೈತ ಹಾಗೂ ಹಸಿರು ಸೇನೆಯಿಂದ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಲಾಯಿತು.
ಸಚಿವರ ನಿರ್ಗಮನದ ನಂತರ ಆಕಸ್ಮಿಕವಾಗಿ ಒಂದೆರೆಡು ಮದ್ಯದ ಖಾಲಿ ಬಾಟಲಿ ಕಂಡ ಸಂಘಟನೆ ಪದಾಧಿಕಾರಿಗಳು, ಉದ್ಯಾನ ಮತ್ತು ಕಚೇರಿ ಹಿಂಭಾಗ ಇತರೆ ಕಡೆಗಳಲ್ಲಿ ಹುಡುಕಾಡಿದರು. ಈ ವೇಳೆ ದೊರೆತ ಮದ್ಯ ಮತ್ತು ಬಿಯರ್ ಖಾಲಿ ಬಾಟಲಿಗಳನ್ನು ಮುಂದಿಟ್ಟು ಸಂಘಟನೆ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ನೇತೃತ್ವದಲ್ಲಿ ಪ್ರತಿಭಟಿಸಿದರು.
ಅರಣ್ಯ ಇಲಾಖೆ ಅಧಿಕಾರಿ ಮತ್ತು ನೌಕರರು ಇಲಾಖೆ ಕಚೇರಿ ಅಥವಾ ಅರಣ್ಯ ಪರಿಸರದಲ್ಲಿ ಪಾರ್ಟಿ ಮಾಡಲು ಮದ್ಯದ ಬಾಟಲಿ ತಂದು ಬಳಸಿದ್ದಾರೆ. ಅರಣ್ಯ ಸಂರಕ್ಷಣೆಗೆ ಬಳಕೆಯಾಗಬೇಕಾದ ಕಚೇರಿ ಮತ್ತು ಇತರೆ ಸೌಲಭ್ಯಗಳನ್ನು ಮೋಜು, ಮಸ್ತಿಗೆ ಬಳಕೆ ಮಾಡಿಕೊಳ್ಳುತ್ತಿರುವುದು ಸರಿಯಲ್ಲ. ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ರಾತ್ರಿ ಸಮಯದಲ್ಲಿ ಸಿಬ್ಬಂದಿಗಳು ಮದ್ಯ ಸೇವನೆ ಮಾಡಿ ವಾಹನದಲ್ಲಿ ಮಲಗುತ್ತಾರೆ. ಕಾಡು ಪ್ರಾಣಿಗಳು ಬಂದಾಗ ಕರೆ ಮಾಡಿದಾಗ ಸ್ವೀಕರಿಸುವುದಿಲ್ಲ ಎಂದು ಆರೋಪಿಸಿದರು.
ಅಧಿಕಾರಿಗಳು ಆಗಮಿಸಿ ಈ ಬಾಟಲಿಗಳು ಎಲ್ಲಿಂದ ಬಂದವು ಎಂಬುದನ್ನು ಸ್ಪಷ್ಟ ಪಡಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆ ಮುಂದುವರೆಸಿದರು.
ಡಿಎಸ್ಪಿ ಸ್ನೇಹರಾಜ್ ಮನವಿ ಆಲಿಸಿದರು. ಲಿಖಿತ ದೂರು ಸ್ವೀಕರಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.