ಚಾಮರಾಜನಗರ: ರಾಜ್ಯದಲ್ಲಿ ಹಿಂದಿ ದಿವಸ ಆಚರಣೆ ವಿರೋಧಿಸಿ ಹಾಗೂ ಕೇಂದ್ರ ಸರ್ಕಾರವು ರಾಜ್ಯದ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂದು ಆರೋಪಿಸಿ ಕರ್ನಾಟಕ ಸೇನಾ ಪಡೆಯ ಪದಾಧಿಕಾರಿಗಳು ನಗರದಲ್ಲಿ ಮಂಗಳವಾರ ಕಪ್ಪುಪಟ್ಟಿ ಧರಿಸಿ ಪ್ರತಿಭಟನೆ ನಡೆಸಿದರು.
ಚಾಮರಾಜೇಶ್ವರ ಉದ್ಯಾನದ ಆವರಣದಿಂದ ಭುವನೇಶ್ವರಿ ವೃತ್ತದವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಕಾರರು ಅಲ್ಲಿ ಪ್ರತಿಭಟನೆ ನಡೆಸಿ, ಕೇಂದ್ರ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಸೇನಾ ಪಡೆಯ ಅಧ್ಯಕ್ಷ ಚಾ.ರಂ.ಶ್ರೀನಿವಾಸಗೌಡ ಮಾತನಾಡಿ, ‘ಕೇಂದ್ರ ಸರ್ಕಾರವು ಕರ್ನಾಟಕದಲ್ಲಿ ಹಿಂದಿ ದಿವಸ ಆಚರಣೆ ಮಾಡುತ್ತಿರುವುದು ಹಾಗೂ ಹಿಂದಿ ಭಾಷೆ ಹೇರುತ್ತಿರುವುದು ಖಂಡನೀಯ. ಭಾಷೆಗಳ ಸ್ಥಾನಮಾನದಲ್ಲಿ ಹಿಂದಿ ಭಾಷೆಗೆ ಸರಿಸಮನಾದ ಸ್ಥಾನವನ್ನು ಕನ್ನಡವೂ ಹೊಂದಿದೆ. ನಮ್ಮದು ಕೂಡ ರಾಷ್ಟ್ರೀಯ ಭಾಷೆ. ಕೇಂದ್ರ ಸರ್ಕಾರವು ರಾಜ್ಯದಲ್ಲಿ ಹಿಂದಿ ಭಾಷೆಯನ್ನು ಹೇರಿ ವ್ಯವಸ್ಥಿತವಾಗಿ ಕನ್ನಡ ಭಾಷೆಯನ್ನು ಅಳಿಸುವ ಹುನ್ನಾರ ನಡೆಸುತ್ತಿದೆ’ ಎಂದು ಆರೋಪಿಸಿದರು.
‘ಕೇಂದ್ರ ಸರ್ಕಾರವು ಉದ್ಯೋಗಿಗಳ ಮೂಲಕ ಹಿಂದಿ ಹೇರುತ್ತಿದೆ. ರಾಷ್ಟ್ರೀಕೃತ ಬ್ಯಾಂಕುಗಳು ಹಾಗೂ ವಿವಿಧ ಕಚೇರಿಗಳಲ್ಲಿ ಅನ್ಯಭಾಷಿಕ ಅಧಿಕಾರಿಗಳ ನಿಯೋಜನೆ ಮಾಡುವ ಮೂಲಕ ಕನ್ನಡಕ್ಕೆ ಅಗೌರವ ತರುವ ಕೆಲಸ ಮಾಡುತ್ತಿದೆ. ಇದರ ಬಗ್ಗೆ ನಮ್ಮ ಸಂಸದರು ಧ್ವನಿ ಎತ್ತದಿರುವುದು ನಾಚಿಕೆಗೇಡಿನ ಸಂಗತಿ’ ಎಂದು ಅವರು ದೂರಿದರು.
ಶಾ.ಮುರಳಿ, ನಿಜಧ್ವನಿ ಗೋವಿಂದರಾಜ್, ಚಾ.ವೆಂ.ರಾಜ್ಗೋಪಾಲ್, ಗಡಿನಾಡು ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಚಾ.ರಾ.ಕುಮಾರ್, ಚಾ.ಸಿ.ಸೋಮನಾಯಕ, ಶಿವಶಂಕರನಾಯಕ, ವೀರಭದ್ರ, ಸ್ವಾಮಿ, ನಟರಾಜು, ಮರೆಯಾಲಹುಂಡಿ ಕುಮಾರ್, ಕುಮಾರ್, ಸ್ವಾಮಿ, ದೊರೆ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.