ಚಾಮರಾಜನಗರ: ತಮ್ಮ ಕುಟುಂಬಗಳಿಗೆ ಆಗುತ್ತಿರುವ ಅನ್ಯಾಯ ಸರಿಪಡಿಸುವಂತೆ ಒತ್ತಾಯಿಸಿ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಮಿತಿ ಆಶ್ರಯದಲ್ಲಿಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳು (ಬರಿಗೈಯಲ್ಲಿ ಶೌಚಗುಂಡಿ ಅಥವಾ ಮ್ಯಾನ್ಹೋಲ್ ಸ್ವಚ್ಛಗೊಳಿಸುವವರು) ನಗರದಲ್ಲಿ ಬುಧವಾರ ಪ್ರತಿಭಟಿಸಿದರು.
ಜಿಲ್ಲಾಡಳಿತ ಭವನದ ಎದುರು ಧರಣಿ ಕುಳಿತ ಪ್ರತಿಭಟನಕಾರರು ನ್ಯಾಯಕ್ಕಾಗಿ ಆಗ್ರಹಿಸಿದರು.
‘ಜಿಲ್ಲೆಯ ಗ್ರಾಮೀಣ ಭಾಗದಲ್ಲಿ ನೂರಾರು ಕುಟುಂಬಗಳು ಮಲ ಗುಂಡಿ ಸ್ವಚ್ಛಗೊಳಿಸುವುದು, ಬಯಲು ಶೌಚ ಸ್ವಚ್ಛಗೊಳಿಸುವುದು, ತೆರೆದ ಚರಂಡಿಗಳಲ್ಲಿ ಮಲ–ಮೂತ್ರ ತೆಗೆಯುತ್ತಿವೆ. ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಎಲ್ಲೂ ಶೌಚಗುಂಡಿ ಸ್ವಚ್ಛಗೊಳಿಸಲು ಸಕ್ಕಿಂಗ್, ಜೆಟ್ಟಿಂಗ್ ಯಂತ್ರಗಳಿಲ್ಲ. ಹೀಗಿದ್ದರೂ, ಸರ್ಕಾರದ ವತಿಯಿಂದ ಮ್ಯಾನ್ಯುವಲ್ ಸ್ಕ್ಯಾವೆಂಜರ್ಗಳ ಬಗ್ಗೆ ಸಮೀಕ್ಷೆ ನಡೆಸುವಾಗ ಅಧಿಕಾರಿಗಳು ತಪ್ಪು ಮಾಹಿತಿ ನೀಡುತ್ತಿದ್ದಾರೆ’ ಎಂದು ದೂರಿದರು.
‘ಈ ವೃತ್ತಿಯಲ್ಲಿ ತೊಡಗಿರುವವರನ್ನು ಗುರುತಿಸುವುದಕ್ಕಾಗಿ ಸರ್ಕಾರ ಚಾಮರಾಜನಗರ ಸೇರಿದಂತೆ 18 ಜಿಲ್ಲೆಗಳಲ್ಲಿ 2021–22ನೇ ಸಾಲಿನಲ್ಲಿ ಮರುಸಮೀಕ್ಷೆ ನಡೆಸಿತ್ತು. ಕಳೆದ ವರ್ಷದ ನವೆಂಬರ್ 28ರಿಂದ ಡಿಸೆಂಬರ್ 9ರವರೆಗೆ ನಡೆದ ಗ್ರಾಮೀಣ ಪ್ರದೇಶದ ಸಮೀಕ್ಷೆಯಲ್ಲಿ 302 ಮಂದಿ ಅರ್ಜಿ ಸಲ್ಲಿಸಿದ್ದಾರೆ. ಸರ್ಕಾರ ನೇಮಿಸಿರುವ ಪರಿಶೀಲನಾ ತಂಡವು ಈ ಅರ್ಜಿಗಳನ್ನು ಪರಿಶೀಲನೆ ಮಾಡಿದ್ದು, ಆರು ತಿಂಗಳು ಕಳೆದರೂ ಕಾನೂನು ಪ್ರಕಾರ ಕ್ರಮಕೈಗೊಂಡಿಲ್ಲ’ ಎಂದು ಪ್ರತಿಭಟನನಿರತರು ದೂರಿದರು.
ಬಿಎಸ್ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅರಕಲವಾಡಿ ನಾಗೇಂದ್ರ, ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಮಂಡ್ಯ ಜಿಲ್ಲಾ ಸಂಚಾಲಕ ನಂಜುಂಡ ಮೌರ್ಯ, ಮೈಸೂರು ಜಿಲ್ಲಾ ಸಂಯೋಜಕ ಮಂಜುನಾಥ್, ಚಾಮರಾಜನಗರ ಜಿಲ್ಲಾ ಸಂಚಾಲಕ ಪಿ.ಗಣೇಶ್, ಸಿ.ಎಂ.ಕೃಷ್ಣಮೂರ್ತಿ, ಪಿ.ಸಂಘಸೇನ, ದೇವಾಲಪುರ ಶಿವಣ್ಣ, ಸಮಿತಿ ಜಿಲ್ಲಾ ಸಂಘಟನಾ ಸಂಚಾಲಕರಾದ ಪಿ.ರಾಜೇಂದ್ರ, ಆರ್.ಮಹೇಶ್, ಮಾದ, ರಾಜಶೇಖರ್, ಆರ್.ಮಹೇಶ್, ಶಿವರಾಜೇಂದ್ರ, ದೀನೇಂದ್ರ, ಜಿಲ್ಲಾ ಖಜಾಂಚಿ ದೊರೆ, ಮಹಿಳಾ ಒಕ್ಕೂಟದ ಜಿಲ್ಲಾ ಸಂಚಾಲಕಿ ಗಂಗಮ್ಮ, ಜಿಲ್ಲಾ ಸಂಘಟನಾ ಸಂಚಾಲಕಿ ಭಾಗ್ಯ, ದಲಿತ ಮುಖಂಡ ಮಹದೇವ, ಸಿ.ಪಿ.ಮಾದ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.