ಮಹದೇಶ್ವರ ಬೆಟ್ಟ: ಬೆಟ್ಟ ಹಾಗೂ ಸುತ್ತಮುತ್ತಲಿನ ಗ್ರಾಮಗಳಲ್ಲಿರುವ ನ್ಯಾಯಬೆಲೆ ಅಂಗಡಿಗಳಲ್ಲಿ ಉಚಿತವಾಗಿ ಎರಡು ತಿಂಗಳ ಪಡಿತರ ವಿತರಿಸಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಫಲಾನುಭವಿಗಳು ನಿಟ್ಟುಸಿರು ಬಿಟ್ಟಿದ್ದಾರೆ.
ಮಹದೇಶ್ವರ ಬೆಟ್ಟ, ಹಳೆಯೂರು, ಕಾಡೊಲ ಸೇರಿದಂತೆ ಇನ್ನಿತರ ಊರುಗಳಲ್ಲಿ ಪಡಿತರ ಸರಿಯಾಗಿ ವಿತರಣೆಯಾಗದಿರುವ ಬಗ್ಗೆ ‘ಪ್ರಜಾವಾಣಿ’ಯ ಶುಕ್ರವಾರ ಸಂಚಿಕೆಯಲ್ಲಿ ‘ಮಹದೇಶ್ವರ ಬೆಟ್ಟ: ಸಿಗುತ್ತಿಲ್ಲ ಉಚಿತ ಪಡಿತರ’ ಶೀರ್ಷಿಕೆಯ ಅಡಿಯಲ್ಲಿ ವಿಶೇಷ ವರದಿ ಪ್ರಕಟಿಸಿತ್ತು.
ಇದಕ್ಕೆ ಸ್ಪಂದಿಸಿರುವ ಅಧಿಕಾರಿಗಳು, ನ್ಯಾಯಬೆಲೆ ಅಂಗಡಿಗಳು ದಿನಪೂರ್ತಿ ತೆರೆಯುವುದರ ಜೊತೆಗೆ ಸರ್ಕಾರ ಘೋಷಿಸಿರುವ ನಿಗದಿತ ಪಡಿತರವನ್ನು ಉಚಿತವಾಗಿ ವಿತರಿಸಲು ಕ್ರಮಕೈಗೊಂಡಿದ್ದಾರೆ.
ಶನಿವಾರ ಬೆಳಿಗ್ಗೆ 7 ಗಂಟೆಗೆ ನ್ಯಾಯಬೆಲೆ ಅಂಗಡಿಗಳು ತೆರೆದಿದ್ದವು. ಗ್ರಾಹಕರು ಸರತಿ ಸಾಲಿನಲ್ಲಿ ನಿಂತುಕೊಂಡು ಪಡಿತರ ಪಡೆದರು. ಕೆಲವು ಕಡೆಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಯಮ ಪಾಲನೆಯಾಗಿದ್ದರೆ, ಇನ್ನೂ ಕೆಲವು ಕಡೆ ಆಗಿಲ್ಲ.
ಆಂಗನವಾಡಿಗಳಿಂದ ಮನೆ ಮನೆಗೆ ವಿತರಣೆ: ಬೆಟ್ಟದ ಸುತ್ತಮುತ್ತ ಅಂಗನವಾಡಿಗಳಿಂದ ಮಕ್ಕಳಿಗೆ ಪೂರೈಸಬೇಕಾದ ಪೌಷ್ಟಿಕ ಆಹಾರ ಮನೆಗೆ ತಲುಪುತ್ತಿರಲಿಲ್ಲ. ಪತ್ರಿಕೆಯ ವರದಿಯು ಈ ವಿಚಾರವನ್ನೂ ಪ್ರಸ್ತಾಪಿಸಿ ಜಿಲ್ಲಾಡಳಿತದ ಗಮನ ಸೆಳೆದಿತ್ತು. ಇದಕ್ಕೂ ಸ್ಪಂದಿಸಿರುವ ಅಧಿಕಾರಿಗಳು,ಆಹಾರವನ್ನು ಮಕ್ಕಳ ಮನೆ ಮನೆಗೆ ತಲುಪಿಸಲು ಕ್ರಮ ಕೈಗೊಂಡಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.