ADVERTISEMENT

ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ದೆಹಲಿಗೆ ಹೊರಟ ಹಾಡುಕೇ ಅಮ್ಮ ಮಾದಮ್ಮ

ಧರ್ತಿ ಅಭಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದಡಿ ನಾಲ್ವರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 25 ಜನವರಿ 2026, 7:10 IST
Last Updated 25 ಜನವರಿ 2026, 7:10 IST
ಮಾದಮ್ಮ ಮಾದೇಗೌಡ
ಮಾದಮ್ಮ ಮಾದೇಗೌಡ   

ಯಳಂದೂರು:ತಾಲ್ಲೂಕಿನ ಬಿಳಿಗಿರಿಬೆಟ್ಟದ ಸೋಲಿಗ ಸಮುದಾಯದ ಮಹಿಳೆ ಮಾದಮ್ಮ ಅವರು ನವದೆಹಲಿಯಲ್ಲಿ ಜ.26 ರಂದು ನಡೆಯುವ ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ.

ದುರ್ಬಲ ಬುಡಕಟ್ಟು ಗುಂಪು (ಪಿವಿಜಿಟಿ) ಅಡಿ ಮಾದಮ್ಮ ದಂಪತಿ ಆಯ್ಕೆಯಾಗಿದ್ದಾರೆ. ಮಾದಮ್ಮ ‘ಹಾಡುಕೇ’ ಕಲಾವಿಧೆ. ಕಾಡು ಜನರ ಸಂಸ್ಕೃತಿ ಹಾಗೂ ಪರಿಸರ ಸಂರಕ್ಷಣೆ, ಜೇನು ಸಂಸ್ಕರಣೆ ಮುಂತಾದ ಕಿರು ಅರಣ್ಯ ಸಂಗ್ರಹದ ಮೂಲಕ ಸೋಲಿಗರಿಗೆ ಆದಾಯ ತಂದುಕೊಡುವ ನಿಟ್ಟಿನಲ್ಲಿ ಮುಂಚೂಣಿಯಲ್ಲಿ ಇದ್ದಾರೆ.

ನಲವತ್ತೈದು ವರ್ಷದ ಮಾದಮ್ಮ ಹೆಚ್ಚು ಕಲಿತಿಲ್ಲ. ಗಿರಿವಾಸಿಗಳ ಸಮಾಜದಲ್ಲಿ ಹಾಡು-ಹಸೆ, ಕುಣಿತ ಮತ್ತು ಜನಪದ ಕಥೆಗಳನ್ನು ಪ್ರಸ್ತುತಪಡಿಸುತ್ತಾರೆ. ಪ್ರಸ್ತುತ ವನವಾಸಿಗಳೇ ನಿರ್ವಹಿಸುವ ‘ಅಡವಿ’ ಸಂಘದ ಅಧ್ಯಕ್ಷರಾಗಿ ಜನ ಮೆಚ್ಚುಗೆ ಗಳಿಸಿದ್ದಾರೆ. ಅರಣ್ಯ, ಪ್ರಾಣಿ, ಪಕ್ಷಿ, ಗುಡ್ಡ, ಕಣಿವೆ, ಹೊಳೆ, ಹಳ್ಳಿ ಸಮುದಾಯದ ಗಾಡ ಸಂಬಂಧಗಳನ್ನು ಜನಪದ ಸಾಂಸ್ಕೃತಿಕ ಪರಂಪರೆಯೊಡನೆ ಬೆಸೆದು ಹಾಡುತ್ತಾರೆ. ಕಾನನ ಮತ್ತು ವನ್ಯ ಜೀವಿಗಳ ಸಹವರ್ತನೆಯ ಸಂಕಥನಗಳನ್ನು ಇಡೀ ರಾತ್ರಿ ಹಾಡುತ್ತಾರೆ. ಹಬ್ಬಗಳ ಸಂದರ್ಭದಲ್ಲಿ ಲವಲಿಕೆಯಿಂದ ಕುಣಿಯುತ್ತಾರೆ. ಪ್ರಾರ್ಥಿಸುತ್ತಾರೆ.

ADVERTISEMENT

‘ಜಿಲ್ಲಾ ಬುಡಕಟ್ಟು ಸಂಘದ ನಿರ್ದೇಶಕರಾಗಿ ಮಾದಮ್ಮ ಸೋಲಿಗ ಮಹಿಳೆಯರ ಸಬಲೀಕರಣಕ್ಕೆ ನೆರವು ಕಲ್ಪಿಸಿದ್ದಾರೆ. ಗೋರುಕಾನಾ, ಹಾಡುಕೇ, ಓಲಗ, ಕಗ್ಗ ಪ್ರಾರ್ಥನಾ ಗೀತೆಗಳನ್ನು ಹಾಡಿ ಮಂದಿಗೆ ಪರಿಚಯಿಸಿದ್ದು, ಇವರು ಜ.26 ರಂದು ಬಿಳಿಗಿರಿಬೆಟ್ಟದ ಸೋಲಿಗ ಮಹಿಳೆಯಾಗಿ ಪ್ರತಿನಿಧಿಸಿರುವುದು ಸಂತಸ ತಂದಿದೆ. ಈ ಬಾರಿ ಮಾದಮ್ಮ ದಂಪತಿ ಆಯ್ಕೆಯಾಗಿದ್ದಾರೆ ಎಂದು ಬುಡಕಟ್ಟು ಜಿಲ್ಲಾ ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ.ತಿಳಿಸಿದ್ದಾರೆ.

ಕಾಫಿ ಕೃಷಿಕ ಎಚ್.ಪಿ.ಮಾದೇಗೌಡ

ಬಿಳಿಗಿರಿಬೆಟ್ಟದಲ್ಲಿ ಕಾಫಿ ಕೃಷಿಯಲ್ಲಿ ತೊಡಗಿರುವ ಎಚ್.ಪಿ.ಮಾದೇಗೌಡ ಜ.26ರಂದು ದೆಹಲಿಯಲ್ಲಿ ನಡೆಯುವ ಪರೇಡ್ ವೀಕ್ಷಣೆಗೆ ಆಯ್ಕೆಯಾಗಿದ್ದಾರೆ. ಸಾವಯವ ಕೃಷಿಯನ್ನು ಜನರಿಗೆ ಪರಿಚಯಿಸುವ ನಿಟ್ಟಿನಲ್ಲೆ ಕೆಲಸ ಮಾಡುತ್ತಿದ್ದಾರೆ,

ಭಾರತದಾದ್ಯಂತ ಆಯ್ಕೆಯಾಗಿರುವ ವಿವಿಧ ಬುಡಕಟ್ಟು ಜನರ ಜೊತೆ ಕುಳಿತು ಪರೇಡ್ ವೀಕ್ಷಿಸಿ, ರಾಷ್ಟ್ರಪತಿ ಮತ್ತು ಪ್ರಧಾನಿ ಜೊತೆ ಕುಳಿತು ಚಹಾ ಸವಿಯುವ ಕನಸಿನಲ್ಲಿ ಇದ್ದೇನೆ ಎನ್ನುತ್ತಾರೆ ಮಾದೇಗೌಡ,

ಮಾದೇವಿ ಹಾಗೂ ಮಹದೇವ್,

ಚಾಮರಾಜನಗರ ತಾಲ್ಲೂಕಿನ ಬೇಡುಗುಳಿ ಕಾಲೋನಿಯ ದಂಪತಿ ಮಾದೇವಿ ಹಾಗೂ ಮಹದೇವ್ ಜ.26ರ ನಡೆಯುವ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಯ್ಕೆಯಾಗಿದ್ದಾರೆ. ಪ್ರೌಢ ಶಿಕ್ಷಣ ಪಡೆದಿರುವ ಇವರು ತಾಲ್ಲೂಕು ಮಟ್ಟದ ಸೋಲಿಗ ಸಮುದಾಯದ ನಾಯಕರಾಗಿ ಗುರತಿಸಿಕೊಂಡಿದ್ದಾರೆ. ಅರಣ್ಯ ಹಕ್ಕು ಸಮಿತಿ ಕಾರ್ಯದರ್ಶಿ ಹಾಗೂ ಪಂಚಾಯಿತಿ ಸದಸ್ಯರಾಗಿ ಜನಪರ ಹೋರಾಟಗಳಲ್ಲಿ ತೊಡಗಿದ್ದಾರೆ.

ನಾಲ್ವರು ಸೋಲಿಗ ಪ್ರತಿನಿಧಿಗಳ ಆಯ್ಕೆ: ಮಾದೇಗೌಡ

ಧರ್ತಿ ಅಭಾ ಜನಜಾತೀಯ ಗ್ರಾಮ ಉತ್ಕರ್ಷ್ ಅಭಿಯಾನದಡಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ವತಿಯಿಂದ ಬುಡಕಟ್ಟು ಪ್ರತಿನಿಧಿಗಳನ್ನು ಗಣರಾಜ್ಯೋತ್ಸವಕ್ಕೆ ಆಹ್ವಾನಿಸಿದ್ದು ಜಿಲ್ಲೆಯಿಂದ 4 ಮಂದಿ ಆಯ್ಕೆಯಾಗಿದ್ದಾರೆ. ಯಳಂದೂರು ಮತ್ತು ಚಾಮರಾಜನಗರ ತಾಲ್ಲೂಕು ವ್ಯಾಪ್ತಿಯಲ್ಲಿ ಅರಣ್ಯ ಹಕ್ಕು, ವಸತಿ, ಸಂಘಟನೆ, ಶಿಕ್ಷಣ, ಕೃಷಿ ಹಾಗೂ ವನವಾಸಿಗಳ ಶ್ರೇಯೋಭಿವೃದ್ಧಿಗೆ ಇವರು ಶ್ರಮಿಸಿದ್ದು, ಜ.26ರ ಗಣರಾಜ್ಯೋತ್ಸವ ಪರೇಡ್ಗೆ ಆಯ್ಕೆಗೆ ಕಾರಣವಾಗಿದೆ ಎನ್ನುತ್ತಾರೆ ಜಿಲ್ಲಾ ಬುಡಕಟ್ಟು ಸಂಘದ ಕಾರ್ಯದರ್ಶಿ ಸಿ.ಮಾದೇಗೌಡ.

ಮಾದೇವಿ ಹಾಗೂ ಮಹದೇವ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.