ADVERTISEMENT

ಭಾರತದ ಹಕ್ಕಿ ಮನುಷ್ಯ | ಬಿಆರ್‌ಟಿ, ಬಂಡೀಪುರದಲ್ಲಿ ಸಲೀಂ ಅಲಿ ಅಧ್ಯಯನ

ಭಾರತದ ಹಕ್ಕಿ ಮನುಷ್ಯನ ಜನ್ಮದಿನ ಇಂದು: 80 ವರ್ಷಗಳ ಹಿಂದೆ ಜಿಲ್ಲೆಯ ಕಾನನದಲ್ಲಿ ಸುತ್ತಾಟ

ನಾ.ಮಂಜುನಾಥ ಸ್ವಾಮಿ
Published 12 ನವೆಂಬರ್ 2019, 12:50 IST
Last Updated 12 ನವೆಂಬರ್ 2019, 12:50 IST
ಸಲೀಂ ಅಲಿ
ಸಲೀಂ ಅಲಿ   

ಯಳಂದೂರು (ಚಾಮರಾಜನಗರ): ‘ಭಾರತದ ಹಕ್ಕಿ ಮನುಷ್ಯ’ ಎಂದು ಖ್ಯಾತರಾಗಿರುವ ಖ್ಯಾತ ಪಕ್ಷಿ ತಜ್ಞ ಡಾ.ಸಲೀಂ ಅಲಿ ಅವರ ಜನ್ಮದಿನ ಇಂದು (ನ.12). ಜಿಲ್ಲೆಯ ದಟ್ಟ ಕಾನನದಲ್ಲಿರುವ ಪಕ್ಷಿಗಳನ್ನು ಗುರುತಿಸಲು ಅವರು ಬಿಳಿಗಿರಿರಂಗನ ಬೆಟ್ಟ ಹಾಗೂ ಬಂಡೀಪುರದ ಕಾನನದಲ್ಲಿ ಓಡಾಡಿದ್ದರು. ಅವರ ಭೇಟಿಗೆ ಈಗ 80 ವರ್ಷ.

1939ರಲ್ಲಿ ಸಲೀಂ ಅಲಿ ಅವರುಮೈಸೂರು ಪ್ರಾಂತ್ಯದ ಸುತ್ತಮುತ್ತಲಿನ ಕಾಡುಮೇಡು ಸುತ್ತಿದ್ದರು. ನೂರಾರು ಪಕ್ಷಿಗಳ ಮಾದರಿ ಸಂಗ್ರಹಿಸಿದ್ದರು.

‘ಪಕ್ಷಿಗಳಅಧ್ಯಯನ ಮಾಡುವುದಕ್ಕಾಗಿ 6 ತಿಂಗಳ ಖರ್ಚಿಗಾಗಿ ₹ 4,000 ನೀಡುವಂತೆ ಸಲೀಂ ಅಲಿ ಅವರುದಿವಾನ್‌ ಮಿರ್ಜಾ ಇಸ್ಮಾಯಿಲ್‌ಗೆ ಮನವಿ ಸಲ್ಲಿಸಿದ್ದರು. ಆದರೆ, ನೆರವು ಸಿಗದಿದ್ದಾಗ ಅಮೆರಿಕ ಪಕ್ಷಿಸಂಶೋಧನಾ ಸಂಸ್ಥೆ ಆರ್ಥಿಕ ಸಹಾಯ ನೀಡಲು ಮುಂದಾಗಿತ್ತು’ ಎಂದು ಹೇಳುತ್ತಾರೆ ಪಕ್ಷಿ ವೀಕ್ಷಕ ಹಾಗೂ ವಿಜ್ಞಾನಿ ಎಸ್‌.ಸುಬ್ರಹ್ಮಣ್ಯಂ.

ADVERTISEMENT

ಎಲ್ಲಿಗೆಲ್ಲ ಭೇಟಿ ನೀಡಿದ್ದರು?:ಸಲೀಂ ಅವರು ಮೈಸೂರು ಸಂಸ್ಥಾನದ ವ್ಯಾಪ್ತಿಯ ಬಿಳಿಗಿರಿರಂಗನಬೆಟ್ಟ, ದಿಂಬಂ, ಬಂಡೀಪುರ, ಎಚ್‌.ಡಿ.ಕೋಟೆ, ಕಬಿನಿ ಹಾಗೂ ಶ್ರೀರಂಗಪಟ್ಟಣದ ಸುತ್ತಲ ಪ್ರದೇಶಗಳಿಗೆ ಭೇಟಿ ನೀಡಿ ಪಕ್ಷಿಗಳ ಅಧ್ಯಯನ ನಡೆಸಿದ್ದರು. ಈಗಿನ 9 ಜಿಲ್ಲೆಗಳಲ್ಲಿ ಅವರು ಸುತ್ತಾಡಿದ್ದರು.

ಬಿಳಿಗಿರಿನಬನದಲ್ಲಿ ಅವರು ಕಂಡು ಗುರುತಿಸಿದ ಪಕ್ಷಿ ಪ್ರಭೇದಗಳ ವಿವರಗಳು ಈಗ ಪಕ್ಷಿ ಅಧ್ಯಯನ ಮಾಡುವವರ ದಾರಿದೀಪಗಳಾಗಿವೆ.

ಜೀವನೋತ್ಸಾಹ ತುಂಬಿದ ಬಿಆರ್‌ಟಿ?: ‘ಅಲಿ ಅವರು 1933ರಲ್ಲಿ ಪತ್ನಿ ಸಲ್ಮಾ ಸಾವಿನಿಂದ ಕಂಗೆಟ್ಟಿದ್ದರು. ಇದಾದ ಕೆಲವೇ ವರ್ಷಗಳಲ್ಲಿ ಮೈಸೂರು ಸುತ್ತಲ ಕಾಡುಗಳ ಪಕ್ಷಿಗಳಬಗ್ಗೆ ಮಾಹಿತಿ ಸಂಗ್ರಹಿಸಲು ಬಾಂಬೆನ್ಯಾಚುರಲ್ ಹಿಸ್ಟರಿ ಮ್ಯೂಸಿಯಂ (ಬಿಎನ್‌ಎಚ್‌ಎಂ) ಅವರನ್ನು ಕಳುಹಿಸಿಕೊಟ್ಟತು. 90 ದಿನಗಳ ಪರಿಸರದ ವಾಸ್ತವ್ಯಇವರಿಗೆ ಜೀವನೋತ್ಸಹ ತುಂಬಿತು. ಇಲ್ಲಿ ಅವರು ತಂಗಿದ್ದ ಸ್ಥಳಗಳು ಈಗಲೂ ಸುಸ್ಥಿತಿಯಲ್ಲಿಇವೆ’ ಎಂದು ಸಲೀಂ ಅವರು ಸಾಗಿದ ಮಾರ್ಗದಲ್ಲೇ ಪಕ್ಷಿ ವೀಕ್ಷಣೆಗೆತೆರಳಿದ್ದ ತಂಡದ ಸದಸ್ಯರಾದ ಡಾ.ಪ್ರಶಾಂತ್ ಮತ್ತು ಡಾ.ತಾನ್ಯ ಸ್ಮರಿಸುತ್ತಾರೆ.

ಮಾದರಿ ಸಂಗ್ರಹ:ಪಕ್ಷಿಗಳ ಅಧ್ಯಯನಕ್ಕಾಗಿ ಸಲೀಂ ಅವರು ಬೈನಾಕ್ಯುಲರ್ ಬಳಸುತ್ತಿದ್ದರು. ತಮ್ಮ ಜೊತೆಗೆ ಸಹಾಯಕರನ್ನು ಕರೆದುಕೊಂಡು ಹೋಗುತ್ತಿದ್ದರು. ಗಮನಿಸಿದ ಹಕ್ಕಿಗಳ ವಿವರಗಳನ್ನು ಪ್ರತಿದಿನ ಡೈರಿಯಲ್ಲಿ ದಾಖಲಿಸುತ್ತಿದ್ದರು.ಪಕ್ಷಿಗಳ ಮಾದರಿ ಸಂಗ್ರಹಿಸಲು ಮಡ್‌ಗನ್‌ ಬಳಸುತ್ತಿದ್ದರು. ಪ್ರಪಂಚದ ವಿವಿಧೆಡೆ ಇರುವ ಬಾನಾಡಿಗಳನ್ನು ಗುರುತಿಸಲು ಈಗಲೂ ಇವರ ಮಾದರಿಗಳು ನೆರವಾಗುತ್ತಿವೆ.

ಪಕ್ಷಿಗಳ ಆವಾಸ ಹೆಚ್ಚಳ:ಡಾ.ಸಲೀಂ ಅಲಿ ಮತ್ತು ಆರ್‌.ಸಿ.ಮೋರಿಸ್ ಬಿಳಿಗಿರಿರಂಗನಬೆಟ್ಟದ ಅರಣ್ಯದಲ್ಲಿ ಸಂಚರಿಸಿದಮಾರ್ಗದಲ್ಲಿಯೇ 2018–2019ರ ನಡುವೆ 110 ದಿನಗಳ ಕಾಲ ರಾಜ್ಯದ ಪಕ್ಷಿತಜ್ಞರುಸುತ್ತಾಟ ನಡೆಸಿ ವಿಷಯ ಸಂಗ್ರಹಿಸಿದ್ದಾರೆ.

‘ಅಲಿಯವರು ದಿನಕ್ಕೆ 20 ಹಕ್ಕಿಗಳ ಮಾದರಿ ಸಂಗ್ರಹಿಸುತ್ತಿದ್ದರು. 871 ಪಕ್ಷಿಗಳ ತೊಗಲುಮತ್ತು 247 ಪ್ರಭೇದಗಳನ್ನು ಗುರುತಿಸಿದ್ದಾರೆ. ಪ್ರಸಕ್ತ ವರ್ಷ 325 ಪ್ರಭೇದಗಳನ್ನುಗುರುತಿಸಲಾಗಿದೆ. ಬಿಆರ್‌ಟಿ ಅರಣ್ಯದ ಸುತ್ತಮುತ್ತ ಪಕ್ಷಿಗಳ ಆವಾಸಕ್ಕೆ ಉತ್ತಮಪರಿಸರ ಸೃಷ್ಟಿಯಾಗುತ್ತಿದೆ’ ಎಂದು ಡಾ.ಸುಬ್ರಹ್ಮಣ್ಯಂ ಅವರು ಸಂ‌ಶೋಧನಾ ಬರಹದಲ್ಲಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.