ADVERTISEMENT

ಕತ್ತಲ ರಾಜ್ಯದಲ್ಲಿ ಜ್ಞಾನ ಬೆಳಗಿಸಿದ ಸಾಲೂರುಮಠ-ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2025, 2:49 IST
Last Updated 3 ಆಗಸ್ಟ್ 2025, 2:49 IST
ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಶನಿವಾರ ಲಿಂ.ಪಟ್ಟದ ಗುರುಸ್ವಾಮಿಗಳ ಪುಣ್ಯ ಸಂಸ್ಕರಣೋತ್ಸವ, ಗುರುಸ್ಮೃತಿ ಸಂಸ್ಮರಣಾ ಗ್ರಂಥ ಲೋಕಾರ್ಪಣೆ, ಗುರುಸನ್ನಿಧಿ ಯೋಗ ಧ್ಯಾನ ಮಂದಿರ ಉದ್ಘಾಟನೆ ಹಾಗೂ ವಿದ್ಯಾರ್ಥಿ ನಿಲಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.
ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಶನಿವಾರ ಲಿಂ.ಪಟ್ಟದ ಗುರುಸ್ವಾಮಿಗಳ ಪುಣ್ಯ ಸಂಸ್ಕರಣೋತ್ಸವ, ಗುರುಸ್ಮೃತಿ ಸಂಸ್ಮರಣಾ ಗ್ರಂಥ ಲೋಕಾರ್ಪಣೆ, ಗುರುಸನ್ನಿಧಿ ಯೋಗ ಧ್ಯಾನ ಮಂದಿರ ಉದ್ಘಾಟನೆ ಹಾಗೂ ವಿದ್ಯಾರ್ಥಿ ನಿಲಯ ಶಿಲಾನ್ಯಾಸ ಕಾರ್ಯಕ್ರಮ ನಡೆಯಿತು.   

ಮಹದೇಶ್ವರ ಬೆಟ್ಟ: ‘ಮಲೆ ಮಹದೇಶ್ವರ ಬೆಟ್ಟದ ಸಾಲೂರು ಮಠ ಧಾರ್ಮಿಕ, ಶೈಕ್ಷಣಿಕ ಹಾಗೂ ಆರೋಗ್ಯ ಕೇತ್ರದ ಅಭಿವೃದ್ಧಿಗೆ ಮಹತ್ವದ ಕೊಡುಗೆ ನೀಡಿದೆ’ ಎಂದು ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಹೇಳಿದರು.

ಮಹದೇಶ್ವರ ಬೆಟ್ಟದ ಸಾಲೂರು ಮಠದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಲಿಂ. ಪಟ್ಟದ ಗುರುಸ್ವಾಮಿಗಳ ಪುಣ್ಯ ಸಂಸ್ಕರಣೋತ್ಸವ, ಗುರುಸ್ಮೃತಿ ಸಂಸ್ಮರಣಾ ಗ್ರಂಥ ಲೋಕಾರ್ಪಣೆ, ಗುರುಸನ್ನಿಧಿ ಯೋಗ ಧ್ಯಾನ ಮಂದಿರ ಉದ್ಘಾಟನೆ ಹಾಗೂ ವಿದ್ಯಾರ್ಥಿ ನಿಲಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಅವರು ಆಶೀರ್ವಚನ ನೀಡಿದರು.

‘ 77 ಮಲೆಗಳಲ್ಲಿ ಒಂದಾಗಿರುವ ಮಲೆ ಮಹದೇಶ್ವರ ಬೆಟ್ಟ ಪವಾಡ–ಪುಣ್ಯಪುರುಷರು ನಡೆದಾಡಿದ ಪವಿತ್ರ ಸ್ಥಳವಾಗಿದ್ದು, ಕತ್ತಲರಾಜ್ಯದಲ್ಲಿ ಉಜ್ವಲ ಬೆಳಕು ಮೂಡಿಸಿದ್ದಾರೆ. ನೆಲದ ನಾಯಕರಾಗಿರುವ ಮಲೆ ಮಹದೇಶ್ವರರು ನೆಲೆಸಿದ ಪುಣ್ಯಸ್ಥಳವಾದ ಮಲೆ ಮಹದೇಶ್ವರ ಬೆಟ್ಟ ಹಾಗೂ ಸಾಲೂರು ಮಠ ಕಾಡಂಚಿನ ಬೇಡಗಂಪಣ ಸಮುದಾಯದವರ ಶಿಕ್ಷಣಕ್ಕೆ ಪೂರಕವಾದ ಕಾರ್ಯಗಳನ್ನು ಮಾಡುತ್ತಿದೆ ’ಎಂದು ಶ್ಲಾಘಿಸಿದರು.

ADVERTISEMENT

‘ಸಾಲೂರು ಮಠ ಹಾಗೂ ಮಹದೇಶ್ವರ ಬೆಟ್ಟದ ವ್ಯಾಪ್ತಿಯಲ್ಲಿರುವ ಗ್ರಾಮಗಳಲ್ಲಿ ಸಂಚರಿಸಿ ಮಠ ಕಟ್ಟಿ ಬೆಳೆಸುವಲ್ಲಿ ಗುರುಸ್ವಾಮಿಗಳ ಶ್ರಮ ಅಪಾರ. ಕಾಡಂಚಿನ ಗ್ರಾಮಗಳ ಭಕ್ತರೊಂದಿಗೆ ಅವಿನಾಭಾವ ಸಂಬಂದ ಹೊಂದಿದ್ದ ಗುರುಸ್ವಾಮಿಗಳು ಸಂಕಲ್ಪ ಸಿದ್ಧಿ ಇರುವವರಾಗಿದ್ದು , ನೇರ ನಡೆ ನುಡಿಯ ವ್ಯಕ್ತಿತ್ವ ಹೊಂದಿದ್ದರು. ಅವರು ದೈಹಿಕವಾಗಿ ಇಲ್ಲವಾದರೂ ಚೇತನವಾಗಿ ಎಲ್ಲರೊಳಗೂ ಇದ್ದಾರೆ’ ಎಂದರು.

ತುಮಕೂರಿನ ಸಿದ್ಧಗಂಗಾ ಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ, ‘ಮಠಗಳಿಗೆ ಪವಿತ್ರ ಸ್ಥಾನವಿದ್ದು ಅವುಗಳು ನೀಡುತ್ತಿರುವ ಜ್ಞಾನ ದಾಸೋಹದ ಫಲವಾಗಿ ರಾಜ್ಯದ ಸಾಕ್ಷರತೆಯ ಪ್ರಮಾಣ ಹೆಚ್ಚಾಗಿದೆ. ಶಿಕ್ಷಣ ಮಾತ್ರವಲ್ಲ; ಧಾರ್ಮಿಕ, ಆರೋಗ್ಯ ಕ್ಷೇತ್ರಗಳ ಬೆಳವಣಿಗೆಯಲ್ಲೂ ಮಠಗಳ ಪಾತ್ರ ಮಹತ್ವದ್ದಾಗಿದ್ದು, ಸೇವಾ ಕಾರ್ಯಗಳು ಮಾದರಿಯಾಗಿವೆ’ ಎಂದರು.

‘ಗುರುಸ್ವಾಮಿಗಳು ಈ ಭಾಗದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡಿದ್ದು ಶತಮಾನಗಳ ಹಿಂದೆ ಪ್ರಾಣಿಗಳನ್ನು ಬೇಟೆಯಾಡುತ್ತಿದ್ದ ಬೇಡಗಂಪಣ ಸಮುದಾಯವನ್ನು ಅಹಿಂಸಾ ಮಾರ್ಗದೆಡೆಗೆ ಕರೆತರುವಲ್ಲಿ ಪ್ರಧಾನ ಪಾತ್ರ ವಹಿಸಿದ್ದರು’ ಎಂದರು.

ಆತ್ಮಕಲ್ಯಾಣ, ಲೋಕ ಕಲ್ಯಾಣ, ಲಿಂಗಪೂಜೆ, ಸಮಾಜಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಗುರುವಿನ ಸ್ಥಾನಕ್ಕೆ ಗುರುಸ್ವಾಮಿಗಳು ಮಹತ್ವ ತಂದಿದ್ದಾರೆ. ಅವರ ನಂತರ ಶಾಂತಮಲ್ಲಿಕಾರ್ಜುನ ಸ್ವಾಮಿಗಳು ಮಠವನ್ನು ಸಮರ್ಥವಾಗಿ ಮುನ್ನಡೆಸುತ್ತಿದ್ದಾರೆ. ಬೇಡಗಂಪಣ ಸಮುದಾಯದ ಜನರ ಬದುಕು ಹಸನು ಮಾಡವ ನಿಟ್ಟಿನಲ್ಲಿ ಉತ್ತಮ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

ಹನೂರು ಶಾಸಕ ಎಂ.ಆರ್.ಮಂಜುನಾಥ್ ಮಾತನಾಡಿ, ಸಾಲೂರು ಬೃಹನ್ಮಠಕ್ಕೂ ಮಲೆ ಮಹದೇಶ್ವರನ ಕ್ಷೇತ್ರಕ್ಕೂ ಅವಿನಾಭಾವ ನಂಟಿದೆ. ಶಿಕ್ಷಣ ಕ್ಷೇತ್ರದ ಬೆಳವಣಿಗೆಗೆ ಒತ್ತು ನೀಡಿರುವ ಸಾಲೂರು ಮಠವು ಹಿರಿಯ ಗುರುಗಳ ಪುಣ್ಯಸಂಸ್ಮರಣೋತ್ಸವ ದ ಸಂದರ್ಭದಲ್ಲಿ ಎಚ್‌ಎಎಲ್ ಕಂಪೆನಿಯ ಆರ್ಥಿಕ ಸಹಕಾರದೊಂದಿಗೆ ₹ 4.70 ಕೋಟಿ ವೆಚ್ಚದಲ್ಲಿ ವಿಧ್ಯಾರ್ಥಿ ನಿಲಯ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿರುವುದು ಸಂತೋಷದ ಸಂಗತಿ ಎಂದರು.

ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಕೊಳ್ಳೇಗಾಲ ಶಾಸಕ ಎ.ಆರ್ ಕೃಷ್ಣಮೂರ್ತಿ, ತಮಿಳುನಾಡಿನ ಅಂದಿಯೂರು ವಿಧಾನಸಭಾ ಕ್ಷೇತ್ರದ ಶಾಸಕ ಎ.ಜಿ.ವೆಂಕಟಾಚಲಂ, ಹೆಚ್‌ಎಎಲ್‌ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಡಾ.ಡಿ.ಕೆ.ಸುನೀಲ್, ನಿರ್ದೇಶಕರಾದ ಕೆ.ರವಿ, ಎಂ.ಜಿ.ಬಾಲಸುಬ್ರಹಣ್ಯ, ಚಾಮುಲ್ ಅಧ್ಯಕ್ಷ ನಂಜುಂಡಸ್ವಾಮಿ, ಮಾನಸ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ದತ್ತೇಶ್ ಕುಮಾರ್, ಮಲೆ ಮಹದೇಶ್ವರ ಕ್ಷೇತ್ರ ಪ್ರಾಧಿಕಾರದ ಕಾರ್ಯದರ್ಶಿ ರಘು ಭಾಗವಹಿಸಿದ್ದರು.

ಶ್ರೀಗಳ ಸಮಾಗಮ
ಆದಿಚಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ ಗುರುಮಲ್ಲೇಶ್ವರ ಮಹಾಸಂಸ್ಥಾನ ದಾಸೋಹ ಮಠದ ಮಹಾಂತ ಸ್ವಾಮೀಜಿ ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಕುಂದೂರು ಮಠದ ಶರತ್ ಚಂದ್ರ ಸ್ವಾಮೀಜಿ ಹರಿಹರ ವೀರಶೈವ ಲಿಂಗಾಯತ ಪಂಚಮಸಾಲಿ ಮಠದ ವಚನಾನಂದ ಸ್ವಾಮೀಜಿ ಹೊಸದುರ್ಗದ ಭಗೀರಥ ಪೀಠದ ಪುರುಷೋತ್ತಮಾನಂದ ಸ್ವಾಮಿಗಳು ಮರಳೇಗವಿ ಮಠದ ಮುಮ್ಮಡಿ ಶಿವರುದ್ರ ಸ್ವಾಮೀಜಿ ಸೇರಿದಂತೆ ಹಲವು ಮಠಗಳ ಸ್ವಾಮೀಜಿಗಳು ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.