ADVERTISEMENT

ಕಡವೆ ಬೇಟೆ; ತಮಿಳುನಾಡು ಮೂಲದ ಬೇಟೆಗಾರರು ಪರಾರಿ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2021, 5:40 IST
Last Updated 28 ಮಾರ್ಚ್ 2021, 5:40 IST
   

ಹನೂರು: ಕಾವೇರಿ ವನ್ಯಧಾಮದಲ್ಲಿ ತಮಿಳುನಾಡು ಬೇಟೆಗಾರರ ಹಾವಳಿ ಮುಂದುವರೆದಿದ್ದು, ಶನಿವಾರ ಕಡವೆಯನ್ನುಬೇಟೆಯಾಡಿ ಅದರ ಮಾಂಸವನ್ನು ಅಲ್ಲೆ ಬಿಟ್ಟು ಪರಾರಿಯಾಗಿದ್ದಾರೆ.

ಗೋಪಿನಾಥಂ ವನ್ಯಜೀವಿ ವಲಯದ ಭೀಮನಕಲ್ಲು ಅರಣ್ಯ ಪ್ರದೇಶಕ್ಕೆ ಎರಡು ದಿನಗಳ ಹಿಂದೆಯೇ ನುಗ್ಗಿರುವ ಬೇಟೆಗಾರರು ಎರಡು ರಾತ್ರಿ ಅರಣ್ಯದೊಳಗೆ ವಾಸ್ತವ್ಯ ಹೂಡಿ ನಾಡ ಬಂದೂಕಿನಿಂದ ಕಡವೆಯನ್ನು ಬೇಟೆಯಾಡಿದ್ದಾರೆ. ಬಳಿಕ ಬಂಡೆಯ ಮೇಲೆ ಮಾಂಸ ಒಣಗಿಸುತ್ತಿದ್ದಾಗ ಅರಣ್ಯಾಧಿಕಾರಿಗಳನ್ನು ಕಂಡು ಪರಾರಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಾವೇರಿ ವನ್ಯಧಾಮದಲ್ಲಿ ಇಂಥ ಪ್ರಕರಣಗಳು ಇದೇ ಮೊದಲೇನಲ್ಲ. ಈ ಹಿಂದೆಯೂ ಹಲವು ಪ್ರಕರಣಗಳು ನಡೆದಿವೆ. ಗೋಪಿನಾಥಂ ವನ್ಯಜೀವಿ ವಲಯದಲ್ಲಿ ಆರು ತಿಂಗಳ ಹಿಂದೆ ಇದೇ ರೀತಿ ಜಿಂಕೆಯನ್ನು ಬೇಟೆಯಾಡಿ ಅದನ್ನು ತೆಪ್ಪದ ಮೇಲೆ ಹಾಕಿಕೊಂಡು ಹೋಗಿದ್ದರು. ಮತ್ತೊಂದು ಪ್ರಕರಣದಲ್ಲಿ ಬೇಟೆನಾಯಿಗಳ ಮೂಲಕ ಉಡವನ್ನು ಬೇಟೆಯಾಡಿದ್ದರ ಬಗ್ಗೆಯೂ ಅರಣ್ಯ ಇಲಾಖೆಯಲ್ಲಿ ಪ್ರಕರಣ ದಾಖಲಾಗಿದೆ.

ADVERTISEMENT

ಹೀಗೆ ಮೇಲಿಂದ ಮೇಲೆ ತಮಿಳುನಾಡಿನಿಂದ ನದಿ ದಾಟಿ ಬರುವ ಬೇಟೆಗಾರರು ನಿರಂತರವಾಗಿ ವನ್ಯಜೀವಿಗಳನ್ನು ಬೇಟೆಯಾಡುತ್ತಲೇ ಇರುವುದು ಮುಂದುವರೆದಿದೆ.

ಈ ಬಗ್ಗೆ ಪ್ರತಿಕ್ರಿಯೆಗಾಗಿ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿದರೂ ಸಂಪರ್ಕ ಸಾಧ್ಯವಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.