ADVERTISEMENT

ಕಾವೇರಿ ವನ್ಯಧಾಮದಲ್ಲಿ ಸ್ಯಾಟಲೈಟ್‌ ಫೋನ್‌ ಬಳಕೆ, ಪೊಲೀಸರಿಂದ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 20 ಜೂನ್ 2020, 13:28 IST
Last Updated 20 ಜೂನ್ 2020, 13:28 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚಾಮರಾಜನಗರ: ಜಿಲ್ಲೆಯ ಕಾವೇರಿ ವನ್ಯಧಾಮದ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿರುವುದು ಬೆಳಕಿಗೆ ಬಂದಿದೆ.

ಜಿಲ್ಲೆಯ ಪೊಲೀಸರಿಗೆ ಆಂತರಿಕ ಭದ್ರತಾ ಪಡೆಯು ಈ ಬಗ್ಗೆ ಮಾಹಿತಿ ನೀಡಿದ್ದು, ಗೋಪಿನಾಥಂ ವಲಯದಲ್ಲಿ ಬಳಕೆಯಾಗಿದೆ ಎಂದು ಗೊತ್ತಾಗಿದೆ.

ಸ್ಯಾಟಲೈಟ್‌ ಫೋನ್‌ ಅನ್ನು ವಿದೇಶಿ ಪ್ರವಾಸಿಗರು ಬಳಸಿದ್ದಾರೆಯೇ, ನಕ್ಸಲರು ಅಥವಾ ಇತರ ಪಟ್ಟಭದ್ರ ಹಿತಾಸಕ್ತಿಗಳು ಬಳಸಿವೆಯೇ ಎಂಬುದರ ಬಗ್ಗೆನಕ್ಸಲ್‌ ನಿಗ್ರಹ ದಳ ಹಾಗೂ ಪೊಲೀಸರು ಪರಿಶೀಲನೆ ಆರಂಭಿಸಿದ್ದಾರೆ.

ADVERTISEMENT

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಎಚ್‌.ಡಿ.ಆನಂದಕುಮಾರ್‌ ಅವರು ಈ ಬೆಳವಣಿಗೆಯನ್ನು ‘ಪ್ರಜಾವಾಣಿ’ಗೆ ಖಚಿತ ಪಡಿಸಿದ್ದು, ‘ನಮಗೆ ನೀಡಿರುವ ಮಾಹಿತಿಯ ಮೇರೆಗೆ ಸ್ಯಾಟಲೈಟ್‌ ಫೋನ್‌ ಅನ್ನು ಯಾರು ಬಳಸಿರಬಹುದು ಎಂಬುದರ ಬಗ್ಗೆ ತನಿಖೆ ಆರಂಭಿಸಿದ್ದೇವೆ. ನಕ್ಸಲ್‌ ನಿಗ್ರಹ ಪಡೆ ಆ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆಯನ್ನು ಆರಂಭಿಸಿದೆ. ಪೊಲೀಸರು ಸುತ್ತಮುತ್ತಲಿನ ಪ್ರದೇಶದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ’ ಎಂದು ಹೇಳಿದರು.

‘ಸಾಮಾನ್ಯವಾಗಿ ವಿದೇಶಿಯರು ಸ್ಯಾಟಲೈಟ್‌ ಫೋನ್‌ಗಳನ್ನು ಬಳಸುತ್ತಾರೆ. ಪ್ರವಾಸಿ ತಾಣಗಳಿಗೆ ಬಂದ ಪ್ರವಾಸಿಗರು ಬಳಸಿರುವ ಸಾಧ್ಯತೆಯೂ ಇರುತ್ತದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಸಲಾಗುತ್ತಿದೆ’ ಎಂದು ಅವರು ಮಾಹಿತಿ ನೀಡಿದರು.

ಗೋಪಿನಾಥಂ ವಲಯದಲ್ಲಿ ಹೊಗೇನಕಲ್‌ ಜಲಪಾತ ಇದೆ. ಅದು ಕರ್ನಾಟಕ ಹಾಗೂ ತಮಿಳುನಾಡಿನ ಗಡಿ ಭಾಗ ಆಗಿರುವುದರಿಂದ ತಮಿಳುನಾಡು ವ್ಯಾಪ್ತಿಯಲ್ಲಿ ಸ್ಯಾಟಲೈಟ್‌‍ಫೋನ್‌ ಬಳಸಿರುವ ಸಾಧ್ಯತೆಯೂ ಇದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

ಕೆಲವು ತಿಂಗಳ ಹಿಂದೆ ಬಂಡೀಪುರ ಅರಣ್ಯ ಪ್ರದೇಶದಲ್ಲೂ ಸ್ಯಾಟಲೈಟ್‌ ಫೋನ್‌ ಬಳಕೆ ಮಾಡಿದ್ದು ಬೆಳಕಿಗೆ ಬಂತು. ತನಿಖೆಯ ನಂತರ ಪ್ರವಾಸಿಗರು ಬಳಸಿದ್ದರು ಎಂಬುದು ದೃಢಪಟ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.