ADVERTISEMENT

ಆದಿವಾಸಿಗಳ ಆರೋಗ್ಯ ಕಾಪಾಡಿ: ಸೋಲಿಗ ಸಮುದಾಯದ ಮುಖಂಡರು ಒತ್ತಾಯ

ಜಿಲ್ಲಾಡಳಿತದ ಎದುರು ಸಮಸ್ಯೆ ಹೇಳಿಕೊಂಡ ಆದಿವಾಸಿ ಮುಖಂಡರು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2026, 7:22 IST
Last Updated 24 ಫೆಬ್ರುವರಿ 2026, 7:22 IST
<div class="paragraphs"><p>ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್‌ ಪಬ್ಲಿಕ್ ಹೆಲ್ತ್&nbsp;ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾ ಆದಿವಾಸಿ ಆರೋಗ್ಯ ಸಂವಾದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿದರು</p></div>

ಚಾಮರಾಜನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್‌ ಪಬ್ಲಿಕ್ ಹೆಲ್ತ್ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾ ಆದಿವಾಸಿ ಆರೋಗ್ಯ ಸಂವಾದ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಶ್ರೀರೂಪಾ ಮಾತನಾಡಿದರು

   

ಚಾಮರಾಜನಗರ: ಜಿಲ್ಲೆಯ 148 ಹಾಡಿಗಳಲ್ಲಿ ವಾಸವಾಗಿರುವ 7,500 ಆದಿವಾಸಿ ಕುಟುಂಬಗಳ ಶಿಕ್ಷಣ, ಆರೋಗ್ಯ, ಉದ್ಯೋಗ ಹಾಗೂ ಆರ್ಥಿಕ ಸಬಲೀಕರಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸೋಲಿಗ ಸಮುದಾಯದ ಮುಖಂಡರು ಒತ್ತಾಯಿಸಿದರು.

ನಗರದ ಡಾ.ರಾಜಕುಮಾರ್ ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ, ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್‌ ಪಬ್ಲಿಕ್ ಹೆಲ್ತ್, ಬಿಳಿಗಿರಿರಂಗನ ಬೆಟ್ಟದ ಹೊಸಪೋಡು ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಸಂಯುಕ್ತ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ‘ಜಿಲ್ಲಾ ಆದಿವಾಸಿ ಆರೋಗ್ಯ ಸಂವಾದ ಕಾರ್ಯಾಗಾರ’ದಲ್ಲಿ ಆದಿವಾಸಿ ಮುಖಂಡರು ಹಲವು ಬೇಡಿಕೆಗಳನ್ನು ಮುಂದಿರಿಸಿದರು.

ADVERTISEMENT

ಮುಖಂಡ ಸಿ.ಮಹದೇವ್ ಮಾತನಾಡಿ, ಅಂಗನವಾಡಿ ಕೇಂದ್ರಗಳ ಮೂಲಕ ಆದಿವಾಸಿ ಮಕ್ಕಳಿಗೆ, ಮಹಿಳೆಯರಿಗೆ ವಿತರಿಸುತ್ತಿರುವ ಆಹಾರದ ಗುಣಮಟ್ಟ ಕಳಪೆಯಾಗಿದ್ದು ಕೆಲವು ಸಲ ಮುಗ್ಗಲು ಹಿಡಿದ ಅಕ್ಕಿ, ಬೇಳೆ, ಕೊಳೆತ ಮೊಟ್ಟೆಗಳನ್ನು ಪೂರೈಸಲಾಗುತ್ತದೆ. ಕಾಲಕಾಲಕ್ಕೆ ಆರೋಗ್ಯ ತಪಾಸಣೆ ನಡೆಯುತ್ತಿಲ್ಲ ಎಂದು ಆರೋಪಿಸಿದರು.

ಜಿಲ್ಲೆಯ ಹಾಡಿಪೋಡುಗಳಲ್ಲಿ 40,000ಕ್ಕೂ ಹೆಚ್ಚು ಸೋಲಿಗರಿದ್ದರೂ ಸಮುದಾಯದ 8 ಮಂದಿ ಮಾತ್ರ ಆಶಾ ಕಾರ್ಯಕರ್ತೆಯರು ಇದ್ದಾರೆ. ಆದಿವಾಸಿಗಳು ಮುಕ್ತವಾಗಿ ಸಮಾಜದ ಜೊತೆಗೆ ಬೆರೆಯದೆ ಅನ್ಯರೊಂದಿಗೆ ಸಮಸ್ಯೆ ಹೇಳಿಕೊಳ್ಳಲು ಹಿಂಜರಿಯುವುದರಿಂದ ಸಮುದಾಯಕ್ಕೆ ಸೇರಿದ ಆಶಾ ಕಾರ್ಯಕರ್ತೆಯರನ್ನೇ ಹೆಚ್ಚು ನೇಮಕ ಮಾಡಿಕೊಳ್ಳಬೇಕು ಎಂದು ಬೇಡಿಕೆ ಇರಿಸಿದರು.

ಹನೂರು ಸೋಲಿಗ ಅಭಿವೃದ್ಧಿ ಸಂಘದ ಸಂಯೋಜಕ ಜಿ.ಮಹದೇವಸ್ವಾಮಿ, ಜಿಲ್ಲಾ ಬುಡಕಟ್ಟು ಸಮುದಾಯಗಳ ಅಭಿವೃದ್ಧಿ ಸಂಘದ ಉಪಾಧ್ಯಕ್ಷೆ ಮಹದೇವಮ್ಮ ಮಾತನಾಡಿ, ಗರ್ಭಿಣಿಯರು ಮತ್ತು ಮಕ್ಕಳಿಗೆ ಪ್ರತಿತಿಂಗಳು ಚುಚ್ಚುಮದ್ದು ಶಿಬಿರ ಆಯೋಜಿಸಬೇಕು. ಬದಲಾದ ಜೀವನಶೈಲಿ, ದುಶ್ಚಟಗಳಿಂದ ಟಿಬಿ, ಪಾರ್ಶ್ವವಾಯು, ಕ್ಯಾನ್ಸರ್, ಹೃದ್ರೋಗದಂತಹ ಗಂಭೀರ ಕಾಯಿಲೆಗಳು ಹೆಚ್ಚಾಗಿದ್ದು ಸೂಕ್ತ ಚಿಕಿತ್ಸೆ ದೊರೆಯಬೇಕು. ಸಿಎಚ್‌ಒಗಳು ಆದಿವಾಸಿಗಳ ಮನೆಗಳಿಗೆ ಬಂದು ತಪಾಸಣೆ ಮಾಡಬೇಕು ಎಂದು ಒತ್ತಾಯಿಸಿದರು.

ತುರ್ತು ಸಂದರ್ಭಗಳಲ್ಲಿ ‘ನಗು ಮಗು’ ಹಾಗೂ ‘108’ ಆಂಬುಲೆನ್ಸ್‌ಗಳು ಸಮಯಕ್ಕೆ ಸರಿಯಾಗಿ ಬರುತ್ತಿಲ್ಲ. ದಾಖಲೆ ಇಲ್ಲ ಎಂಬ ಕಾರಣಕ್ಕೆ ಸರ್ಕಾರಿ ಆಸ್ಪತ್ರೆಗಳಲ್ಲಿ ದಾಖಲಾತಿ ಮಾಡಿಕೊಳ್ಳುತ್ತಿಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಖಾಸಗಿ ಮೆಡಿಕಲ್‌ ಶಾಪ್‌ಗಳಿಂದ ಔಷಧ ಖರೀದಿಸುವಂತೆ ಸೂಚಿಸುತ್ತಿದ್ದಾರೆ, ಸಿಮ್ಸ್‌ ಆಸ್ಪತ್ರೆಯಲ್ಲಿ ನೋಂದಣಿ ಕೇಂದ್ರ ಇಲ್ಲದೆ ಸಮಸ್ಯೆಯಾಗಿದೆ ಎಂದರು.

ವಸತಿ ಶಾಲೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ರಕ್ತಹೀನತೆಯಿಂದ ಬಳಲುತ್ತಿದ್ದು ಪೌಷ್ಟಿಕ ಆಹಾರಗಳ ಜೊತೆಗೆ ಕಬ್ಬಿಣಾಂಶದ ಮಾತ್ರೆಗಳನ್ನು ನೀಡಬೇಕು, ಆದಿವಾಸಿ ಮಹಿಳೆಯರಿಗೆ ಶಿಕ್ಷಣ, ಜೀವವಿಮಾ ಸೌಲಭ್ಯ ನೀಡಬೇಕು ಎಂದು ಒತ್ತಾಯಿಸಿದರು.

ಡಿಎಚ್‌ಒ ಡಾ.ಎಸ್‌.ಚಿದಂಬರ್ ಮಾತನಾಡಿ ‘ಆರೋಗ್ಯ ಇಲಾಖೆಯು ಆದಿವಾಸಿಗಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿರುವ ಪರಿಣಾಮ ಪರಿಸ್ಥಿತಿ ಸಾಕಷ್ಟು ಸುಧಾರಿಸಿದೆ. ವೈದ್ಯರು, ಸಿಬ್ಬಂದಿ ಕೊರತೆ ಹಾಗೂ ಸೌಲಭ್ಯಗಳ ಕೊರತೆ, ಇತಿಮಿತಿಗಳ ಮಧ್ಯೆಯೂ ಶಕ್ತಿಮೀರಿ ಕಾರ್ಯ ನಿರ್ವಹಿಸಲಾಗುತ್ತಿದೆ ಎಂದರು.

ಆದಿವಾಸಿ ಗರ್ಭಿಣಿಯರ ಹಾಗೂ ನವಜಾತ ಶಿಶುಗಳ ಮರಣ ತಡೆಗೆ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಗರ್ಭಿಣಿಯಾಗಿರುವುದು ಖಚಿತವಾಗುತ್ತಿದ್ದಂತೆ ನಿಯಮಿತವಾಗಿ ತಪಾಸಣೆ ಹಾಗೂ ಚುಚ್ಚುಮದ್ದು ನೀಡಲಾಗುತ್ತಿದೆ. ಹೆರಿಗೆಗೂ ಮುನ್ನವೇ ಆಸ್ಪತ್ರೆಗಳಿಗೆ ಕರೆತಂದು ದಾಖಲಾತಿ ಮಾಡಿಕೊಳ್ಳುತ್ತಿರುವ ಪರಿಣಾಮ ತಾಯಿ ಹಾಗೂ ಶಿಶುಮರಣ ಕಡಿಮೆಯಾಗಿದೆ. ಮನೆ ಹೆರಿಗೆ ಪ್ರಮಾಣವೂ ಗಣನೀಯವಾಗಿ ತಗ್ಗಿದೆ ಎಂದು ಡಿಎಚ್‌ಒ ಹೇಳಿದರು.

ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಕಾರ್ಯದರ್ಶಿ ಡಾ.ಸಿ.ಮಾದೇಗೌಡ ಪ್ರಾಸ್ತಾವಿಕವಾಗಿ ಮಾತನಾಡಿ, ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಜಿಲ್ಲಾ ಬುಡಕಟ್ಟು ಗಿರಿಜನ ಅಭಿವೃದ್ಧಿ ಸಂಘದ ಅಧ್ಯಕ್ಷ ಯು.ರಂಗೇಗೌಡ ಹಾಗೂ ಬೆಂಗಳೂರಿನ ಇನ್‌ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ನಿರ್ದೇಶಕ ಎನ್.ಎಸ್. ಪ್ರಶಾಂತ್ ಮಾತನಾಡಿದರು. ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಎಚ್.ಎಸ್.ಬಿಂದ್ಯಾ, ಸೋಲಿಗರ ಅಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ಎಂ.ಜಡೇಸ್ವಾಮಿ, ತಾಲ್ಲೂಕು ಸೋಲಿಗರ ಸಂಘದ ಅಧ್ಯಕ್ಷರಾದ ದೊಡ್ಡಸಿದ್ದಯ್ಯ, ಬೇದಮ್ಮ, ಮಾಧು, ಶಿವಣ್ಣ, ಅರಣ್ಯ ಹಕ್ಕು ಸಮಿತಿ ಸದಸ್ಯರಾದ ಕೇತಮ್ಮ ಕಾರ್ಯಕ್ರಮದಲ್ಲಿ ಇದ್ದರು.

‘ಆರೋಗ್ಯ ಸಮಸ್ಯೆ ಹೆಚ್ಚಳ’

ಬದಲಾದ ಜೀವನಶೈಲಿಯಿಂದ ಬುಡಕಟ್ಟು ಜನರಲ್ಲಿ ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿದ್ದು ಕಾಳಜಿ ವಹಿಸಬೇಕು. ಬುಡಕಟ್ಟು ಜನರಿಗೆ ದೌರ್ಜನ್ಯಗಳಿಂದ ರಕ್ಷಿಸಿಕೊಳ್ಳುವ ಹಕ್ಕು ಅವಕಾಶಗಳಿದ್ದು ಬಳಸಿಕೊಳ್ಳಬೇಕು. ಸಾಂಪ್ರದಾಯಿಕ ಚಿಕಿತ್ಸಾ ಕ್ರಮಗಳ ಮೇಲೆ ಅವಲಂಬಿತರಾಗದೆ ಗಂಭೀರ ಅನಾರೋಗ್ಯ ಸಮಸ್ಯೆಗಳು ಕಾಡಿದಾಗ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕು. ಬಾಲ್ಯವಿವಾಹಕ್ಕೆ ಅವಕಾಶ ನೀಡಬಾರದು ಶಿಕ್ಷಣಕ್ಕೆ ಒತ್ತು ನೀಡಬೇಕು ಹೆಣ್ಣುಮಕ್ಕಳು ಹುಟ್ಟಿದರೆ ತಾತ್ಸಾರ ತೋರಬಾರದು ಬುಡಕಟ್ಟು ಸಮುದಾಯಗಳ ರಕ್ಷಣೆಗಿರುವ ಕಾನೂನಿನ ಅರಿವು ಪಡೆದು ಜಾಗೃತರಾಗಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಈಶ್ವರ್ ಸಲಹೆ ನೀಡಿದರು.

‘ಸರ್ಕಾರದ ಕಾರ್ಯಕ್ರಮ ಸದ್ಬಳಕೆ ಮಾಡಿಕೊಳ್ಳಿ’

ಕಾಡಿನ ಒಡನಾಡಿಗಳಾಗಿರುವ ಬುಡಕಟ್ಟು ಸಮುದಾಯಗಳ ಜೀವನಶೈಲಿ ಬದಲಾಗುತ್ತಿದ್ದು ದುಶ್ಚಟ ಅನಾರೋಗ್ಯ ಹೆಚ್ಚಾಗಿ ಕಂಡುಬರುತ್ತಿದೆ. ಸರ್ಕಾರ ಬುಡಕಟ್ಟು ಜನರ ಆರೋಗ್ಯದ ಕಾಳಜಿ ವಹಿಸಿದ್ದು ಚಿಕಿತ್ಸಾ ಸೌಲಭ್ಯಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಜಿಲ್ಲಾಧಿಕಾರಿ ಶ್ರೀರೂಪಾ ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.