ADVERTISEMENT

ಸೋಲು -ಗೆಲುವು ಸಮಾನವಾಗಿ ಸ್ವೀಕರಿಸಿ

ರಾಜ್ಯ ಮಟ್ಟದ ಥ್ರೋ ಬಾಲ್ ಪಂದ್ಯಾವಳಿಯಲ್ಲಿ ಜಿಲ್ಲಾಧಿಕಾರಿ ಬಿ.ಬಿ.ಕಾವೇರಿ ಸಲಹೆ

​ಪ್ರಜಾವಾಣಿ ವಾರ್ತೆ
Published 10 ಅಕ್ಟೋಬರ್ 2019, 15:30 IST
Last Updated 10 ಅಕ್ಟೋಬರ್ 2019, 15:30 IST
ಬೆಂಗಳೂರು ಉತ್ತರ ವಲಯ ತಂಡದ ವಿದ್ಯಾರ್ಥಿನಿಯರ ಆಟ
ಬೆಂಗಳೂರು ಉತ್ತರ ವಲಯ ತಂಡದ ವಿದ್ಯಾರ್ಥಿನಿಯರ ಆಟ   

ಚಾಮರಾಜನಗರ: ‘ಕ್ರೀಡೆಯಲ್ಲಿ ಸೋಲು– ಗೆಲುವು ಸಾಮಾನ್ಯ. ಎರಡನ್ನೂ ಸಮಾನವಾಗಿ ಸ್ವೀಕರಿಸಿ ಮುಂದಿನ ಆಟಕ್ಕೆ ಸನ್ನದ್ಧರಾಗಬೇಕು’ ಎಂದು ಜಿಲ್ಲಾಧಿಕಾರಿ ಬಿ.ಬಿ. ಕಾವೇರಿ ಅವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ನಗರದ ಹೊರವಲಯದಲ್ಲಿರುವಮರಿಯಾಲದ ಶ್ರೀಮುರುಘರಾಜೇಂದ್ರ ಪದವಿಪೂರ್ವ ಕಾಲೇಜು ಆವರಣದಲ್ಲಿ ಆರಂಭಗೊಂಡ 2019–20ನೇ ಸಾಲಿನ ಪದವಿ ಪೂರ್ವಕಾಲೇಜು ವಿದ್ಯಾರ್ಥಿಗಳ ‘ರಾಜ್ಯ ಮಟ್ಟದ ಥ್ರೋಬಾಲ್ ಪಂದ್ಯಾವಳಿ’ಯ ಉದ್ಘಾಟನಾ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಕ್ರೀಡೆ ದೈಹಿಕವಾಗಿ ಸದೃಢರನ್ನಾಗಿ ಮಾಡುತ್ತದೆ. ಆದರೆ, ಸೋತಾಗ ವಿಚಲಿತರಾದರೆ ಮನಸ್ಸು ಮುಂದಿನ ಆಟಕ್ಕೆ ಸಜ್ಜಾಗಲು ಅವಕಾಶ ಕೊಡುವುದಿಲ್ಲ. ಆದ್ದರಿಂದ ಸೋಲು ಗೆಲುವನ್ನು ಸಮಾನವಾಗಿ ಸ್ವೀಕರಿಸಬೇಕು. ವಿವಿಧ ಜಿಲ್ಲೆಗಳಿಂದ ಬಂದಿರುವ ಎಲ್ಲ ವಿದ್ಯಾರ್ಥಿಗಳು ಕ್ರೀಡಾ ಮನೋಭಾವದಿಂದ ಪಾಲ್ಗೊಂಡು ನಿಮ್ಮ ಜಿಲ್ಲೆಗೆ ಕೀರ್ತಿ ತರಬೇಕು’ ಎಂದರು.

ADVERTISEMENT

61ತಂಡ: ರಾಜ್ಯಮಟ್ಟದ ಪಂದ್ಯಾವಳಿಯಾದ್ದರಿಂದ ಹಾಸನ, ಬಳ್ಳಾರಿ, ಬೆಂಗಳೂರು, ಬೆಂಗಳೂರು ಉತ್ತರ ಸೇರಿದಂತೆ ವಿವಿಧ ಜಿಲ್ಲೆಗಳಿಂದ ವಿದ್ಯಾರ್ಥಿಗಳ ತಂಡ 31 ಹಾಗೂ ವಿದ್ಯಾರ್ಥಿನಿಯರ ತಂಡ 30 ಒಟ್ಟು 61 ತಂಡಗಳು ಪಂದ್ಯಾವಳಿಯಲ್ಲಿ ಭಾಗವಹಿಸಿವೆ.

ವಾಸ್ತವ್ಯ ವ್ಯವಸ್ಥೆ: ಎರಡು ದಿನ ಪಂದ್ಯಾವಳಿ ಇರುವುದರಿಂದ ದೂರದ ಜಿಲ್ಲೆಯಿಂದ ಬಂದು ಕ್ರೀಡೆಯಲ್ಲಿ ಪಾಲ್ಗೊಳ್ಳುವ ವಿದ್ಯಾರ್ಥಿಗಳಿಗೆ ವಿದ್ಯಾಸಂಸ್ಥೆಯಲ್ಲೇವಾಸ್ತವ್ಯದ ವ್ಯವಸ್ಥೆ ಮಾಡಲಾಗಿದೆ.

ವೇದಿಕೆ ಕಾರ್ಯಕ್ರಮವನ್ನು ಮರಿಯಾಲ ಮುರುಘರಾಜೇಂದ್ರ ಮಠದಅಧ್ಯಕ್ಷ ಇಮ್ಮಡಿ ಮುರುಘರಾಜೇಂದ್ರಸ್ವಾಮೀಜಿ ಉದ್ಘಾಟಿಸಿದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಶಿವಮ್ಮ, ಸದಸ್ಯ ಸಿ.ಎನ್. ಬಾಲರಾಜು,ಗ್ರಾಮ ಪಂಚಾಯಿತಿಉಪಾಧ್ಯಕ್ಷೆ ಸುಗುಣ,ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪ ನಿರ್ದೇಶಕಿ ವಿ.ಆರ್. ಶ್ಯಾಮಲ, ಪ್ರಾಂಶುಪಾಲರ ಸಂಘದ ಅಧ್ಯಕ್ಷ ಸಿ. ಮಂಜುನಾಥ ಪ್ರಸನ್ನ, ಕಾರ್ಯದರ್ಶಿ ಬಂಗಾರ ನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.