ADVERTISEMENT

ಸುಳ್ವಾಡಿ ಪ್ರಕರಣ: ಜುಲೈ 10ಕ್ಕೆ ವಿಚಾರಣೆ ಮುಂದೂಡಿಕೆ

​ಪ್ರಜಾವಾಣಿ ವಾರ್ತೆ
Published 25 ಜೂನ್ 2019, 20:15 IST
Last Updated 25 ಜೂನ್ 2019, 20:15 IST
ಸುಳ್ವಾಡಿ ಪ್ರಕರಣದ ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು
ಸುಳ್ವಾಡಿ ಪ್ರಕರಣದ ಆರೋಪಿಗಳನ್ನು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು   

ಚಾಮರಾಜನಗರ: ಹನೂರು ತಾಲ್ಲೂಕಿನ ಸುಳ್ವಾಡಿ ಮಾರಮ್ಮ ದೇವಾಲಯದಲ್ಲಿ ನಡೆದ ವಿಷ ಪ್ರಸಾದ ಪ್ರಕರಣದ ವಿಚಾರಣೆಯನ್ನು ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಜುಲೈ 10ಕ್ಕೆ ಮುಂದೂಡಿದೆ.

ಆರೋಪಿಗಳಾದ ಇಮ್ಮಡಿ ಮಹಾದೇವಸ್ವಾಮಿ, ಅಂಬಿಕಾ, ದೊಡ್ಡಯ್ಯ ಮತ್ತು ಮಾದೇಶ ಅವರನ್ನುಪೊಲೀಸರು ಮಂಗಳವಾರ ನ್ಯಾಯಾಲಯಕ್ಕೆ ಹಾಜರುಪಡಿಸಿದರು.

ಮಹಾದೇವಸ್ವಾಮಿ ಪರ ವಕೀಲರಾದ ಪೊನ್ನಂಪೇಟೆಯ ಅಪ್ಪಣ್ಣ ಅವರ ಪರವಾಗಿ ಕಿರಿಯ ವಕೀಲರು ಹಾಜರಾಗಿದ್ದರು.

ADVERTISEMENT

ವಕೀಲರ ನೇಮಕ: ವಿಚಾರಣೆ ನಡೆಸಿದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶ ಬಿ.ಬಸವರಾಜ ಅವರು, ‘ವಕೀಲರನ್ನು ನೇಮಕ ಮಾಡಿದ್ದೀರಾ’ ಎಂದು ಉಳಿದ ಮೂವರು ಆರೋಪಿಗಳನ್ನು ಕೇಳಿದರು.

ಇದಕ್ಕೆ ಪ್ರತಿಕ್ರಿಯಿಸಿದ ಅವರು, ‘ಬೆಂಗಳೂರಿನ ಸದಾನಂದ ಎಂಬುವವರನ್ನು ನೇಮಕ ಮಾಡಿದ್ದೇವೆ’ ಎಂದು ಉತ್ತರಿಸಿದರು. ಆದರೆ, ವಕೀಲರು ವಿಚಾ‌ರಣೆಗೆ ಬಂದಿರಲಿಲ್ಲ.

ಮಹಾದೇವಸ್ವಾಮಿ ಪರ ವಕೀಲರು ಮಾತನಾಡಿ, ‘ಹಿರಿಯ ವಕೀಲರ ಪರವಾಗಿ ಬಂದಿದ್ದೇನೆ. ಸ್ವಾಮೀಜಿ ವಿರುದ್ಧ ಸಲ್ಲಿಸಲಾಗಿರುವ ಆರೋಪ ಪಟ್ಟಿ ರದ್ದುಗೊಳಿಸುವಂತೆ ಕೋರಿ ಅರ್ಜಿ ಸಲ್ಲಿಸಲು ಅವಕಾಶ ನೀಡಬೇಕು’ ಎಂದು ಮನವಿ ಮಾಡಿದರು. ಇದಕ್ಕೆ ನ್ಯಾಯಾಧೀಶರು ಸಮ್ಮತಿಸಿದರು.

ಮಹಾದೇವಸ್ವಾಮಿ ಪರ ಹಿರಿಯ ವಕೀಲರು ಹಾಗೂ ಉಳಿದ ಆರೋಪಿಗಳ ವಕೀಲರು ಬಾರದೆ ಇದ್ದುದರಿಂದ ನ್ಯಾಯಾಧೀಶರು ವಿಚಾರಣೆಯನ್ನು ಜುಲೈ 10ಕ್ಕೆ ಮುಂದೂಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.