ಬಂಧನ
(ಪ್ರಾತಿನಿಧಿಕ ಚಿತ್ರ)
ಯಳಂದೂರು: ತಾಲ್ಲೂಕಿನ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ಗೋಲಕ ಹಣದ ಎಣಿಕೆ ಸಂದರ್ಭದಲ್ಲಿ ಹಣವನ್ನು ಕಳ್ಳತನ ಮಾಡುತ್ತಿದ್ದ ಇಬ್ಬರು ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ.
ಮಂಡ್ಯದ ಶರವಣ್, ಗಿರೀಶ್ ಹಣ ಸಾಗಿಸುತ್ತಿದ್ದರು ಎಂದು ಆರೋಪಿಸಿ ಪಟ್ಟಣ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.
ದೇಗುಲದಲ್ಲಿ 2 ತಿಂಗಳಿಗೆ ಒಮ್ಮೆ ಗೋಲಕ ಹಣದ ಎಣಿಕೆ ನಡೆಯುತ್ತದೆ. ಹಲವು ಸಿಬ್ಬಂದಿ ಸೇರಿ ನಾಣ್ಯ, ನೋಟು ಪ್ರತ್ಯೇಕಿಸಲು ಸಹಾಯ ಮಾಡುತ್ತಾರೆ. ಈ ಸಂದರ್ಭ ಶರವಣ್ ಮತ್ತು ಗಿರೀಶ್ ಎಣಿಕೆ ಕಾರ್ಯದ ನಡುವೆ ಹೊರಗೆ ಹೋಗಿ ಬರುತ್ತಿದ್ದರು. ಈ ಸಮಯ ಇವರು ಹಣವನ್ನು ಕಾರೊಂದರಲ್ಲಿ ಬಚ್ಚಿಡುವಾಗ ಪೊಲೀಸರು ಅನುಮಾನದಿಂದ ಪರಿಶೀಲಿಸಿದರು. ಕಾರಿನ ಮ್ಯಾಟ್ ಕೆಳಗೆ ₹ 63,019 ಪತ್ತೆಯಾಗಿದ್ದು, ವಿಚಾರಣೆ ನಡೆಯುತ್ತಿದೆ ಎಂದು ಅಧಿಕಾರಿಗಳು ಹೇಳಿದರು.
ನಾಣ್ಯ ಪಡೆಯುತ್ತಿದ್ದರು: ಶರವಣ್, ಗಿರೀಶ್ ದೇವಾಲಯಗಳಲ್ಲಿ ಎಣಿಕೆ ನಡೆಯುವಾಗ ಹಣ ಎಣಿಕೆ ಕಾರ್ಯದಲ್ಲಿ ಪಾಲ್ಗೊಳ್ಳುತ್ತಿದ್ದರು. ನೋಟುಗಳನ್ನು ನೀಡಿ ನಾಣ್ಯವನ್ನು ಪಡೆಯುತ್ತಿದ್ದರು. ಕಾರಿನಲ್ಲಿ ಬಂದು ಎಣಿಕೆ ಸೇವೆಯಲ್ಲಿ ತೊಡಗುತ್ತಿದ್ದರು. ಅಧಿಕಾರಿಗಳ ನಂಬಿಕಸ್ಥರಂತೆ ವರ್ತಿಸಿ ಎಣಿಕೆ ಸೇವೆಯಲ್ಲಿ ಮೂರು ವರ್ಷಗಳಿಂದಲೂ ಭಾಗವಹಿಸುತ್ತಿದ್ದರು ಎನ್ನಲಾಗಿದೆ.
ತನಿಖೆಗೆ ಆದೇಶ: ದೇಗುಲದಲ್ಲಿ ಎಣಿಕೆ ಕಾರ್ಯಕ್ಕೆ ನೇಮಕಗೊಳ್ಳುವ ಸಿಬ್ಬಂದಿ ಮಾಹಿತಿ ಹಾಗೂ ಎಣಿಕೆ ಮಾನದಂಡಗಳ ಬಗ್ಗೆ ಶೀಘ್ರ ಮಾಹಿತಿ ನೀಡಬೇಕು. ಆರೋಪಿಗಳ ಮೇಲೆ ಕೇಸು ದಾಖಲಿಸಿ, ತನಿಖೆ ನಡೆಸುವಂತೆ ದೇವಳ ಆಡಳಿತ ಅಧಿಕಾರಿಗಳಿಗೆ ತಹಶೀಲ್ದಾರ್ ಎಸ್.ಎನ್.ನಯನ ಸೂಚಿಸಿದ್ದಾರೆ.
‘ಈ ಬಗ್ಗೆ ಹೆಚ್ಚಿನ ತನಿಖೆ ನಡೆಯುತ್ತಿದೆ’ ಎಂದು ಎಸ್ಐ ಆಕಾಶ್ ಹೇಳಿದರು.
ಪ್ರಭಾರ ತಹಶೀಲ್ದಾರ್ ಶ್ರೀನಿವಾಸಮೂರ್ತಿ, ರಾಜಸ್ವ ನಿರೀಕ್ಷಕ ರಮೇಶ್, ಇಒ ಮೋಹನ್ ಕುಮಾರ್ ಹಾಗೂ ದೇವಾಲಯ ಸಿಬ್ಬಂದಿ ಇದ್ದರು.
ಕಾಣಿಕೆ ಹುಂಡಿಯಲ್ಲಿ ₹ 29.47 ಲಕ್ಷ ಸಂಗ್ರಹ
ಲ್ಲೂಕಿನ ಪ್ರಸಿದ್ಧ ಬಿಳಿಗಿರಿರಂಗನಬೆಟ್ಟದ ರಂಗನಾಥಸ್ವಾಮಿ ದೇವಾಲಯದಲ್ಲಿ ಬುಧವಾರ ಕಾಣಿಕೆ ಹಣದ ಎಣಿಕೆ ನಡೆಯಿತು. ಒಟ್ಟು ₹ 29.47.790 ಲಕ್ಷ ಸಂಗ್ರಹವಾಗಿದ್ದು. ದೇಗುಲದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಖಾತೆಗೆ ಕಾಣಿಕೆ ಹಣವನ್ನು ತುಂಬಲಾಗಿದೆ.
ಅಮೆರಿಕ ಡಾಲರ್ 110 ಹಾಗೂ ನಾಣ್ಯವೂ ಗೋಲಕದಲ್ಲಿ ಸಿಕ್ಕಿದೆ. ಬೆಳಿಗ್ಗೆ ದೇವಾಲಯ ಸಿಬ್ಬಂದಿ ಹಾಗೂ ಕಂದಾಯ ಇಲಾಖೆ ನೌಕರರು ಸೇರಿ 40ಕ್ಕೂ ಹೆಚ್ಚಿನ ಸಿಬ್ಬಂದಿಗಳ ಸಹಾಯದಿಂದ ಗೋಲಕ ಹಣ ಎಣಿಕೆ ಕಾರ್ಯ ನಡೆಯಿತು. ಪಟ್ಟಣದ ಕರ್ನಾಟಕ ಗ್ರಾಮೀಣ ಬ್ಯಾಂಕ್ ಶಾಖೆಗೆ ಹಣವನ್ನು ಜಮಾ ಮಾಡಲಾಯಿತು.
ತಹಶೀಲ್ದಾರ್ ಎಸ್,ಶ್ರೀನಿವಾಸಮೂರ್ತಿ, ದೇವಾಲಯ ಕಾರ್ಯನಿರ್ವಾಕಾಧಿಕಾರಿ ವೈ.ಎನ್.ಮೋಹನ್ ಕುಮಾರ್, ಪಾರುಪತ್ತೆಗಾರ ರಾಜು ಹಾಗೂ ದೇವಳದ ನೌಕರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.