ಚಾಮರಾಜನಗರ: ಗುಂಡ್ಲುಪೇಟೆ ತಾಲ್ಲೂಕಿನ ದೇಪಾಪುರ ಗ್ರಾಮದ ಜಮೀನಿನಲ್ಲಿ ಇರಿಸಲಾಗಿದ್ದ ಬೋನಿನಲ್ಲಿ ಹುಲಿ ಸೆರೆಯಾಗಿದ್ದು ಸುತ್ತಮುತ್ತಲಿನ ಗ್ರಾಮಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ಸೆರೆಯಾದ ಹುಲಿ 4 ರಿಂದ 5 ವರ್ಷ ಪ್ರಾಯದ ಹೆಣ್ಣು ಹುಲಿಯಾಗಿದ್ದು ಗುಂಡ್ಲುಪೇಟೆ ಬಫರ್ ವಲಯ ವ್ಯಾಪ್ತಿಯ ದೇಪಾಪುರ, ಶೀಲವಂತಪುರ, ಹುನ್ನೂರು, ಸೋಮನಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಗ್ರಾಮಸ್ಥರಿಗೆ ಉಪಟಳ ನೀಡುತ್ತಿತ್ತು. ಹುಲಿ ದಾಳಿಗೆ ಹಲವು ಜಾನುವಾರುಗಳು ಬಲಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಹುಲಿ ಸೆರೆಗೆ ತುಮಕೂರು ಮಾದರಿಯ ಬೋನು ಇರಿಸಲಾಗಿತ್ತು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದರು.
ಸೆರೆ ಹಿಡಿಯಲಾದ ಹುಲಿಯನ್ನು ಇಲಾಖೆಯ ಪಶು ವೈದ್ಯಾಧಿಕಾರಿಗಳ ತಂಡದ ಮೇಲ್ವಿಚಾರಣೆಯೊಂದಿಗೆ ಬಂಡೀಪುರಕ್ಕೆ ಸಾಗಿಸಲಾಗಿದ್ದು ನಿಗಾ ಇರಿಸಲಾಗಿದೆ ಎಂದು ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸುರೇಶ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.