ಕೊಳ್ಳೇಗಾಲ: ಇಲ್ಲಿನ ನ್ಯಾಯಾಲಯದ ಮುಂದೆ ಮರ ಕಟಾವು ಮಾಡುವ ವೇಳೆ ಕೂಲಿ ಕಾರ್ಮಿಕ ಕೆಳಗಡೆ ಬಿದ್ದು ತೀವ್ರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ತಾಲ್ಲೂಕಿನ ಪ್ರಕಾಶ್ ಪಾಳ್ಯ ಗ್ರಾಮದ ಲೂಯಿಸ್ ಅಬ್ರಾಹಂ ಗಾಯಗೊಂಡವರು. ನ್ಯಾಯಾಲಯದ ಮುಂದೆ ರಸ್ತೆ ಬದಿಯಲ್ಲಿರುವ ಒಣಗಿದ ಅರಳಿ ಮರವನ್ನು ಕಟಾವು ಮಾಡಲು ಅರಣ್ಯ ಇಲಾಖೆಯಿಂದ ಕರೆದಿದ್ದ ಟೆಂಡರ್ ಅನ್ನು ಇಲ್ಲಿನ ವೆಂಕಟೇಶ್ವರ ಸಾಮಿಲ್ ಮಾಲೀಕ ಅಶೋಕ್ ಪಡೆದುಕೊಂಡು ಐದಾರು ಕೂಲಿ ಕಾರ್ಮಿಕರಿಂದ ಮರ ಕಟಾವು ಮಾಡಿಸುತ್ತಿದ್ದರು.
ಮರ ಕಟಾವು ಮಾಡುತ್ತಿದ್ದ ಕೂಲಿ ಕಾರ್ಮಿಕರ ಪೈಕಿ 12 ಅಡಿ ಎತ್ತರದಲ್ಲಿ ಮರಕ್ಕೆ ಬೆಲ್ಟ್ ಹಾಕಿಕೊಂಡು ಕಟಾವು ಮಾಡುತ್ತಿದ್ದ ಲೂಯಿಸ್ ಅಬ್ರಾಹಂಗೆ ಮರದ ತುಂಡು ತಗುಲಿ ಹಾಕಿದ್ದ ಬೆಲ್ಟ್ ತುಂಡಾಗಿದ್ದರಿಂದ ಕೆಳಗಡೆ ಬಿದ್ದಿದ್ದಾರೆ.
ತಕ್ಷಣ ಸ್ಥಳದಲ್ಲಿದವರು ಗಾಯಾಳುವನ್ನು ನಗರದ ಸರ್ಕಾರಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದರು. ನಂತರ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಚಾಮರಾಜನಗರ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಈ ಸಂಬಂಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಜರುಗಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.