ADVERTISEMENT

ಕೇರಳಕ್ಕೆ ಅಕ್ರಮ ಸಾಗಣೆ: 7070 ಲೀ. ಸ್ಪಿರಿಟ್‌ ವಶ, ಇಬ್ಬರ ಸೆರೆ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2022, 7:52 IST
Last Updated 5 ನವೆಂಬರ್ 2022, 7:52 IST
ಪೊಲೀಸರು ವಶ‌ಪ‍ಡಿಸಿಕೊಂಡಿರುವ ಸ್ಪಿರಿಟ್‌ ತುಂಬಿದ ಕ್ಯಾನ್‌ಗಳು
ಪೊಲೀಸರು ವಶ‌ಪ‍ಡಿಸಿಕೊಂಡಿರುವ ಸ್ಪಿರಿಟ್‌ ತುಂಬಿದ ಕ್ಯಾನ್‌ಗಳು   

ಚಾಮರಾಜನಗರ: ನಗರದಿಂದ ಕೇರಳಕ್ಕೆ ಅಕ್ರಮವಾಗಿ ಸ್ಪಿರಿಟ್‌ ಸಾಗಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿರುವ ನಗರ ಪೂರ್ವ ಠಾಣೆ ಪೊಲೀಸರು, ₹5 ಲಕ್ಷ ಮೌಲ್ಯದ 7,070 ಲೀಟರ್‌ ಸ್ಪಿರಿಟ್‌ ಹಾಗೂ ಸಾಗಣೆ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಂಡಿದ್ದಾರೆ.

ಈರುಳ್ಳಿ ಗೋಣಿ ಚೀಲಗಳ ಕೆಳಗೆ ಸ್ಪಿರಿಟ್‌ ತುಂಬಿದ ಕ್ಯಾನ್‌ಗಳನ್ನು ಇಟ್ಟು ಸಾಗಣೆ ಮಾಡಲಾಗುತ್ತಿತ್ತು. ಬಂದಿತರು ಇಬ್ಬರೂ ಕೇರಳದವರು. ಬಂಧಿತರನ್ನು ಪಾಲಕ್ಕಾಡಿನ ಹರಿ ಹಾಗೂ ಆಲಟ್ಟೂರು ತಾಲ್ಲೂಕಿನ ವಿನೋದ್‌ ಎಂದು ಗುರುತಿಸಲಾಗಿದೆ.

ಕೇರಳದ ಕಡೆಗೆ ಸ್ಪಿರಿಟ್‌ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ತಾಲ್ಲೂಕಿನ ಪುಣಜನೂರು ಚೆಕ್‌ಪೋಸ್ಟ್‌ ಬಳಿ ಕಾರ್ಯಾಚರಣೆ ನಡೆಸಿದ್ದಾರೆ. ವಾಹನವನ್ನು ತಡೆದು ಪರಿಶೀಲನೆ ನಡೆಸಿದಾಗ ಈರುಳ್ಳಿ ಚೀಲಗಳ ಕೆಳಗಡೆ 35 ಲೀಟರ್ ಸಾಮರ್ಥ್ಯದ 202 ಕ್ಯಾನ್‌ಗಳಲ್ಲಿ ಸ್ಪಿರಿಟ್‌ ಸಾಗಿಸಲಾಗುತ್ತಿತ್ತು. ಇದರ ಮೌಲ್ಯ ₹5 ಲಕ್ಷ ಎಂದು ಅಂದಾಜಿಸಲಾಗಿದೆ.

ADVERTISEMENT

ಇಬ್ಬರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.ಚಾಮರಾಜನಗರ ಪೂರ್ವ ಪೊಲೀಸ್ ಠಾಣೆಯ ಇನ್‌ಸ್ಪೆಕ್ಟರ್ ಎಸ್.ಆನಂದ್, ಎಎಸ್‌ಐ ರವೀಂದ್ರ, ಸಿಬ್ಬಂದಿ ಲಿಂಗರಾಜು, ಪುಟ್ಟರಾಜು, ಬಸವಣ್ಣ, ರಾಜೇಶ, ಚಂದ್ರಶೇಖರ, ನಂದಕುಮಾರ, ಅಶೋಕ, ಶ್ರೀನಿವಾಸಮೂರ್ತಿ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.