ಹನೂರು (ಚಾಮರಾಜನಗರ): ಮಲೆಮಹದೇಶ್ವರ ವನ್ಯಧಾಮದಲ್ಲಿ ಎರಡು ತಲೆ ಹಾವು ಹಿಡಿದು ಮಾರಾಟ ಮಾಡಲು ಯತ್ನಿಸುತ್ತಿದ್ದ ತಾಲ್ಲೂಕಿನ ಮಾರ್ಟಳ್ಳಿ ಗ್ರಾಮದ ಫ್ರಾನ್ಸಿಸ್ ಸೆಲ್ವಂ ಹಾಗೂ ವಡ್ಡರದೊಡ್ಡಿ ಗ್ರಾಮದ ಚಾರ್ಲ್ಸ್ ಸರ್ವಿಯರ್ ಎಂಬುವವರನ್ನು ಅರಣ್ಯಾಧಿಕಾರಿಗಳು ಗುರುವಾರ ಬಂಧಿಸಿದ್ದಾರೆ.
ಹೂಗ್ಯಂ ವನ್ಯಜೀವಿ ವಲಯದಲ್ಲಿ ಎರಡು ತಲೆ ಹಾವು ಹಿಡಿದು ಮಾರಾಟ ಮಾಡಲು ಯತ್ನಿಸುತ್ತಿರುವ ಬಗ್ಗೆ ಖಚಿತ ಮಾಹಿತಿ ಆಧರಿಸಿ ಸಂದನಪಾಳ್ಯ ಗ್ರಾಮದಲ್ಲಿ ಇಬ್ಬರು ಚೀಲ ಹಿಡಿದು ನಿಂತಿದ್ದನ್ನು ಕಂಡ ಅಧಿಕಾರಿಗಳು ಚೀಲವನ್ನು ಪರಿಶೀಲಿಸಿದಾಗ ಅದರೊಳಗೆ ಎರಡು ತಲೆ ಹಾವಿರುವುದು ಪತ್ತೆಯಾಗಿದೆ. ಇಬ್ಬರನ್ನು ಬಂಧಿಸಿ ಹಾವನ್ನು ವಶಪಡಿಸಿಕೊಂಡಿದ್ದಾರೆ.
ಈ ಭಾಗದಲ್ಲಿ ಇಂಥ ಹಾವನ್ನು ಹಿಡಿಯುವ ದೊಡ್ಡ ಜಾಲ ಇದೆ ಎಂಬ ಸಂದೇಹವಿದೆ. ಹಿಂದೆಯೂ ಇದೇ ರೀತಿ ಎರಡು ತಲೆ ಹಾವನ್ನು ಹಿಡಿದು ಅದು ಹೆಚ್ಚು ತೂಕ ಬರಲಿ ಎಂದು ಅದಕ್ಕೆ ಡಾಂಬರು ತಿನ್ನಿಸಿದ್ದರು. ಅದನ್ನು ಮಾರಾಟ ಮಾಡಿದ ಬಳಿಕ ಅದು ಸತ್ತಿತ್ತು.
ಜಮೀನಿನಲ್ಲಿ ಸಿಕ್ಕ ಹಾವನ್ನು ಸುರಕ್ಷಿತವಾಗಿ ಹಿಡಿದು ಕಾಡಿಗೆ ಬಿಡುವುದಾಗಿ ಆರೋಪಿಗಳು ಹೇಳುತ್ತಿದ್ದಾರೆ. ಹಾವನ್ನು ಕಾಡಿಗೆ ಬಿಡುವುದಿದ್ದರೆ ಗ್ರಾಮಕ್ಕೆ ತೆಗೆದುಕೊಂಡು ಏಕೆ ಹೋಗಬೇಕಿತ್ತು. ಜಮೀನಿನಲ್ಲಿ ಹಾವು ಕಂಡು ಬಂದ ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಬಹುದಿತ್ತು. ಆದರೆ ಆರೋಪಿಗಳು ಹಾವನ್ನು ಮಾರಾಟ ಮಾಡುವುದಕ್ಕಾಗಿಯೇ ಅದನ್ನು ತೆಗೆದುಕೊಂಡು ಬಸ್ ನಿಲ್ದಾಣದಲ್ಲಿ ನಿಂತಿದ್ದರು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ಬಗ್ಗೆ ಸಮಗ್ರ ತನಿಖೆಗೆ ಸೂಚಿಸಲಾಗುವುದು ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ವಿ. ಏಡುಕುಂಡಲು ಪ್ರಜಾವಾಣಿಗೆ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.