ADVERTISEMENT

ಚಾಮರಾಜನಗರ | ಮೇಲ್ಮನೆ ಚುನಾವಣೆ: ಉಪ್ಪಾರರಿಗೆ ಅವಕಾಶ ನೀಡಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 31 ಮೇ 2024, 6:16 IST
Last Updated 31 ಮೇ 2024, 6:16 IST
ಆನಂದ ಭಗೀರಥ
ಆನಂದ ಭಗೀರಥ   

ಚಾಮರಾಜನಗರ: ವಿಧಾನಸಭೆಯಿಂದ ವಿಧಾನಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಯು ಈ ಬಾರಿ ಉಪ್ಪಾರ ಸಮುದಾಯದವರಿಗೆ ಅವಕಾಶ ನೀಡಬೇಕು ಎಂದು ಬಿಜೆಪಿ ಕಾರ್ಯಕರ್ತ, ಸಮುದಾಯದ ಮುಖಂಡ ಆನಂದ ಭಗೀರಥ ಒತ್ತಾಯಿಸಿದರು. 

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಪ್ಪಾರ ಸಮುದಾಯದವು ಆರ್ಥಿಕವಾಗಿ, ಸಾಮಾಜಿಕವಾಗಿ ಸಾಕಷ್ಟು ಹಿಂದುಳಿದಿದೆ. ಬಿಜೆಪಿಯು ಈವರೆಗೂ ಉಪ್ಪಾರರಿಗೆ ರಾಜಕೀಯ ಸ್ಥಾನಮಾನ ನೀಡಿಲ್ಲ. ಈ ಚುನಾವಣೆಯಲ್ಲಿ 11 ಮಂದಿ ವಿಧಾನಪರಿಷತ್‌ಗೆ ಆಯ್ಕೆಯಾಗಲಿದ್ದಾರೆ.   ಪಕ್ಷಕ್ಕೆ ಮೂರು ಸ್ಥಾನಗಳು ಸಿಗಲಿವೆ. ಈ ಪೈಕಿ ಒಂದು ಸ್ಥಾನವನ್ನು ಸಮುದಾಯದ ಮುಖಂಡರಿಗೆ ನೀಡಬೇಕು’ ಎಂದು ಅವರು ಹೇಳಿದರು.

‘ಬಿಜೆಪಿಯಿಂದ ಇಡೀ ರಾಜ್ಯದಲ್ಲಿ ಉಪ್ಪಾರ ಸಮುದಾಯಕ್ಕೆ ಎಲ್ಲೂ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಿರುವುದಿಲ್ಲ. ಪಕ್ಷಕ್ಕೆ ಪ್ರಾಮಾಣಿಕವಾಗಿ ದುಡಿಯುತ್ತಿರುವ ಸಮುದಾಯದ ಮುಖಂಡರಿಗೆ ವಿಧಾನ ಪರಿಷತ್‌ನಲ್ಲಿ ಅವಕಾಶ ಮಾಡಿಕೊಡುವ ಮೂಲಕ ಸಾಮಾಜಿಕ ನ್ಯಾಯ ಕಲ್ಪಿಸಿಕೊಡಬೇಕು ಮೂಲಕ ಉಪ್ಪಾರ ಸಮಾಜಕ್ಕೆ ನ್ಯಾಯ ಕೊಡಬೇಕು. ಸಮುದಾಯದವರು ಪಕ್ಷದ ಸಂಘಟನೆಯಲ್ಲಿ ಪ್ರಾಮಾಣಿಕವಾಗಿ ತೊಡಗಿಕೊಂಡಿದ್ದಾರೆ. ಸ್ಥಾನಮಾನ ನೀಡಿದರೆ, ಪಕ್ಷ ಸಂಘಟನೆಗೆ ಇನ್ನಷ್ಟು ನೆರವಾಗಲಿದೆ. ಹಾಗಾಗಿ, ರಾಜ್ಯಾಧ್ಯಕ್ಷ ವಿಜಯೇಂದ್ರ ಹಾಗೂ ಇತರ ಮುಖಂಡರು ಸಮುದಾಯಕ್ಕೆ ಟಿಕೆಟ್‌ ನೀಡಬೇಕು’ ಎಂದರು. 

ADVERTISEMENT

‘ಈ ಸಂಬಂಧ ನಾವು ವಿಜಯೇಂದ್ರ ಅವರಿಗೆ ಮನವಿಯನ್ನೂ ಮಾಡಲಿದ್ದೇವೆ’ ಎಂದು ಆನಂದ ಭಗೀರಥ ಹೇಳಿದರು. 

ಸಮುದಾಯದ ಮುಖಂಡರಾದ  ಸಿ.ಎಂ.ಕೃಷ್ಣಕುಮಾರ್, ಉಮೇಶ್, ಪೋಟೊ ಕೃಷ್ಣ, ರಾಜೇಂದ್ರ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.